ಇತರೆ

ಮರಕ್ಕೆ ಕಾರು ಡಿಕ್ಕಿ: ಮೂವರು ಸಾವು

Views: 65

ಕನ್ನಡ ಕರಾವಳಿ ಸುದ್ದಿ: ಅಮ್ಮಳ್ಳಿದೊಡ್ಡಿ ಬಳಿ ಭಾನುವಾರ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಬೆಂಗಳೂರು ಮೂಲದ ಮೂವರು ಯುವಕರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಅಭಿ (21), ಮಧು (32) ಹಾಗೂ ದೀಪು (22) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಚಿರು ಅವರಿಗೆ ಚಾಮುಂಡೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ಕಳಿಸಿ ಕೊಡಲಾಗಿದೆ.

ಸ್ನೇಹಿತರಾದ ನಾಲ್ವರೂ ಕನಕಪುರ ತಾಲ್ಲೂಕಿನ ಕಬ್ಬಾಳಿಗೆ ಕಾರ್ಯಕ್ರಮವೊಂದರ ಸಲುವಾಗಿ ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಸಂಜೆ 6.45ರ ಸುಮಾರಿಗೆ ತಮ್ಮ ಸ್ವಿಫ್ಟ್ ಕಾರಿನಲ್ಲಿ ಬೆಂಗಳೂರಿಗೆ ಹೊರಟ್ಟಿದ್ದರು. ಅಮ್ಮಳ್ಳಿದೊಡ್ಡಿ ಬಳಿ ವೇಗವಾಗಿ ಬರುವಾಗ ಚಾಲನೆ ಮಾಡುತ್ತಿದ್ದವರು, ಕಾರಿನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಅಕ್ಕೂರು ಠಾಣೆ ಪೊಲೀಸರು ತಿಳಿಸಿದರು.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ, ನಾಲ್ವರೂ ಗಂಭೀರವಾಗಿ ಗಾಯಗೊಂಡರು. ಕೂಡಲೇ ಸ್ಥಳೀಯರು ಎಲ್ಲರನ್ನೂ ಕಾರಿನಿಂದ ಹೊರಗೆಳೆದು ಚಾಮುಂಡೇಶ್ವರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೂವರು ಕೊನೆಯುಸಿರೆಳೆದರು. ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದ ಚಿರು ಅವರಿಗೆ ಚಿಕಿತ್ಸೆ ನೀಡಿ, ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಕಳಿಸಲಾಯಿತು ಎಂದು ಪೊಲೀಸರು ಹೇಳಿದರು.

 

Related Articles

Back to top button