ಜಾತಿ ಗಣತಿ ವರದಿ ಅನುಷ್ಠಾನಕ್ಕೆ ಸರ್ಕಾರ ಮುಂದಾದರೆ ಹೋರಾಟದ ಎಚ್ಚರಿಕೆ

Views: 25
ಬೆಂಗಳೂರು: ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿಯನ್ನು ರಾಜ್ಯಸರ್ಕಾರ ಸ್ವೀಕರಿಸಿದ ಬೆನ್ನಲ್ಲೆ ಜಾತಿಗಣತಿಗೆ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸಿ ಜಾತಿ ಗಣತಿವರದಿಯನ್ನು ಒಪ್ಪಿಕೊಳ್ಳಬಾರದು. ಜಾತಿ ಗಣತಿ ವರದಿ ಅನುಷ್ಠಾನಕ್ಕೆ ಸರ್ಕಾರ ಮುಂದಾದರೆ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿವೆ.
ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಸಂಘಟನೆಗಳು ಜಾತಿ ಗಣತಿ ವರದಿ ವೈಜ್ಞಾನಿಕವಾಗಿಲ್ಲ ಈ ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿದ್ದು, ಜಾತಿಗಣತಿ ವರದಿ ಅನುಷ್ಠಾನ ಮಾಡಿದರೆ ಹೋರಾಟ ಅನಿವಾರ್ಯ ಎಂದು ಹೇಳಿವೆ. ಹಲವು ಮಠಾಧೀಶರೂ ಸಹ ಜಾತಿಗಣತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.ಜಾತಿಗಣತಿ ವರದಿ ಬಗ್ಗೆ ಸರ್ಕಾರದ ನಿಲುವನ್ನು ನೋಡಿಕೊಂಡು ಮುಂದಿನ ಹೆಜ್ಜೆ ಏನು ಎಂಬುದನ್ನು ತೀರ್ಮಾನ ಮಾಡುವುದಾಗಿಯೂ ಇವರುಗಳು ಹೇಳಿದ್ದಾರೆ.ಈ ಜಾತಿಗಣತಿ ವೈಜ್ಞಾನಿಕವಾಗಿಲ್ಲ
ಜಾತಿಗಣತಿ ವರದಿಯನ್ನು ಸರ್ಕಾರ ಅನುಷ್ಠಾನ ಮಾಡಲು ಮುಂದಾದರೆ ಮಠಾಧೀಶರು ರಾಜಕೀಯ ಮುಖಂಡರ ಜತೆ ಸಮಾಲೋಚನೆ ನಡೆಸಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುವುದಾಗಿಯೂ ಲಿಂಗಾಯತ -ಒಕ್ಕಲಿಗ ಸಂಘಟನೆಗಳು ಹೇಳಿವೆ.
ಜಾತಿ ಗಣತಿ ವರದಿ ಒಪ್ಪಲ್ಲ: ಶಾಮನೂರು
ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಈ ವರದಿಯನ್ನು ನಾವು ಒಪ್ಪಲ್ಲ. ಈ ವರದಿಯನ್ನು ಮನೆಯಲ್ಲೇ ಕೂತು ತಯಾರಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ ವರದಿಯನ್ನು ಏನು ಮಾಡುತ್ತದೋ ನೋಡುತ್ತೇವೆ. ನಾವಂತೂ ಸುಮ್ಮನೇ ಕೂರುವುದಿಲ್ಲ.ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ ೯ ವರ್ಷದ ಹಳೆಯ ವರದಿಯನ್ನೇ ಈಗ ಮತ್ತೆ ತಂದುಕೊಟ್ಟಿದ್ದಾರೆ ಎಂದು ದೂರಿದ್ದಾರೆ.ರಾಜ್ಯದಲ್ಲಿ ಲಿಂಗಾಯತ ವೀರಶೈವ ಸಮುದಾಯದ ಜನಸಂಖ್ಯೆ 2ಕೋಟಿಗೂ ಹೆಚ್ಚಿದೆ.ಹೀಗಿದ್ದರೂ ಉದ್ದೇಶಪೂರಕವಾಗಿ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ ಎನಿಸುತ್ತದೆ.ಈ ವರದಿಯನ್ನು ಮೂಲೆಗೆ ಹಾಕಬೇಕು ಎಂದು ಒತ್ತಾಯಿಸಿದರು.ನಾವು ಪರಿಶಿಷ್ಟ ಜಾತಿ ವರ್ಗ ಸೇರಿದಂತೆ ಯಾವುದೇ ಸಮುದಾಯದ ವಿರುದ್ಧವಿಲ್ಲ. ನಮ್ಮ ಜನಸಂಖ್ಯೆಯು ಹೆಚ್ಚಿದೆ. ಅಗತ್ಯ ಬಿದ್ದರೆ ಖಾಸಗಿಯಾಗಿಯೂ ಸಮೀಕ್ಷೆ ಮಾಡಿಸುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ಗುಡುಗಿದರು.ಈ ವರದಿಯಿಂದ ಜಾತಿ ಸಂಘರ್ಷ ಆಗುತ್ತದೆ ಚುನಾವಣೆಯಲ್ಲಿ ಸಮಸ್ಯೆ ಆಗುತ್ತದೋ ಇಲ್ಲವೋ ನಾನು ಈಗಲೇ ಹೇಳಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಮ್ಮ ಅಭಿಪ್ರಾಯಕ್ಕೆ ಏನು ಮನ್ನಣೆ ಕೊಡುತ್ತಾರೋ ನೋಡೋಣ ಎಂದರು.ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದು ಕಾಂತರಾಜು ವರದಿ ಎಂದು ಸರಿಯಾಗಿ ಹೇಳಿದ್ದಾರೆ ಕಾಂತರಾಜು ವರದಿಯನ್ನು ಜಯಪ್ರಕಾಶ್ ಹೆಗಡೆ ಕೊಟ್ಟಿದ್ದಾರೆ. ಈ ವರದಿ ಮೂಲಕ ಜಾತಿ ಜಾತಿಗಳ ಮೇಲೆ ಛೂ ಬಿಡುವ ಕೆಲಸ ಆಗುತ್ತಿದೆ.ಈ ವರದಿಯನ್ನು ಸರ್ಕಾರ ಒಪ್ಪಬಾರದು ಎಂದು ಅವರು ಒತ್ತಾಯಿಸಿದರು.
ಒಕ್ಕಲಿಗರ ಸಂಘದ ವಿರೋಧ
ಜಾತಿಗಣತಿ ವರದಿ ಅವೈಜ್ಞಾನಿಕವಾಗಿದೆ ಈ ವರದಿಗೆ ತಮ್ಮ ವಿರೋಧವಿದೆ. ಈ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾದರೆ ಕಾನೂನು ಪ್ರಕಾರ ಹೋರಾಟ ನಡೆಸುತ್ತೇವೆ ಎಂದು ರಾಜ್ಯ ಒಕ್ಕಲಿಗರ ಸಂಘದೆ ಅಧ್ಯಕ್ಷ ಡಿ. ಹನುಂತಯ್ಯ ಹೇಳಿದ್ದಾರೆ.ಹಿಂದುಳಿದ ವರ್ಗದ ಆಯೋಗ ೨೦೧೭ರಲ್ಲಿ ನಡೆಸಿದ್ದ ಜಾರಿ ಗಣತಿವರದಿ ನಿನ್ನೆ ಸಲ್ಲಿಕೆಯಾಗಿದೆ. ಈ ರದಿಯನ್ನು ಸ್ವೀಕಾರ ಮಾಡಿರುವುದು ಸರಿಯಲ್ಲ ಎಂದೂ ಅವರು ಹೇಳಿ ಒಂದು ವೇಳೆ ಸರ್ಕಾರ ವರದಿಯನ್ನು ಒಪ್ಪಿಕೊಂಡರೆ ನಮ್ಮ ಸಮುದಾಯದ ಮಠಾಧೀಶರು, ಉಪಮುಖ್ಯಮಂತ್ರಿಗಳು, ಸಚಿವರು, ಹಾಗೂ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ ಹೋರಾಟ ರೂಪುರೇಷೆಗಳನ್ನು ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.ಹಿಂದೆಯೇ ಒಕ್ಕಿಲಿಗರ ಸಂಘ ಈವರದಿಯನ್ನು ಸ್ವೀಕರಿಸಬಾರದು ಎಂದು ಹೇಳಿತ್ತಾದರೂ ಸರ್ಕಾರ ವರದಿ ಸ್ವೀಕಾರ ಮಾಡಿದೆ ಎಂದು ಅಸಮಾಧಾನ ಹೊರಹಾಕಿರುವ ಅವರು ಆರ್ಥೀಕ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ಅಗತ್ಯವಿದ್ದರೆ ಹೊಸದಾಗಿವೈಜ್ಞಾನಿಕಚಾಗಿ ಸಮೀಕ್ಷೆ ನಡೆಸಲಿ ಎಂದು ಅವರು ಒತ್ತಾಯಿಸಿದ್ದಾರೆ.
ಮಠಾಧೀಶರ ವಿರೋಧ
ಗುಬ್ಬಿ ತಾಲ್ಲೂಕಿನ ಬೆಟ್ಟದಹಳ್ಳಿ ಮಠಾಧ್ಯಕ್ಷರಾದ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಇಡೀ ಅಖಂಡ ಸಮಾಜವನ್ನು ಗಮನದಲ್ಲಿಟ್ಟುಕೊಂಡು ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತುವುದು ಸಮಾಜ ಮತ್ತು ಸರ್ಕಾರದ ಆದ್ಯ ಕರ್ತವ್ಯ ಎಂದರು.ಜಾತಿಗಳನ್ನು ಎಣಿಸಿಕೊಂಡರು ಹೋದರೆ ಮುಂದಿನ ದಿನಗಳಲ್ಲಿ ಕಷ್ಟವಾಗುತ್ತದೆ. ಯಾವ ದೃಷ್ಟಿಕೋನ ಇಟ್ಟುಕೊಂಡು ಜಾತಿಗಣತಿ ಮಾಡಿದ್ದಾರೋ ಗೊತ್ತಿಲ್ಲ. ಸವಲತ್ತಿಗೋಸ್ಕರ ಜಾತಿ ಗಣತಿ ಮಾಡುತ್ತಾರೆ. ಅನುಕೂಲ ಇಲ್ಲದವರಿಗೆ ಅನುಕೂಲ ಮಾಡಿಕೊಡಬೇಕು ಎಂದರು.ಜಾತಿಗಣತಿ ವರದಿಗೆ ಪರ-ವಿರೋಧದ ಪ್ರಶ್ನೆಯಲ್ಲ, ಬಡತನ ರೇಖೆಗಿಂತ ಕೆಳಗೆ ಇರುವವರಿಗೆ ಸೌಲಭ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯೋನ್ಮುಖವಾಗಬೇಕು. ಆದರೆ ಎಂದೋ ನಡೆಸಿದ್ದ ಜಾತಿಗಣತಿಯನ್ನು ಈಗ ಸರ್ಕಾರ ಸ್ವೀಕರಿಸುತ್ತಿರುವುದು ಸಮಂಜಸವಲ್ಲ. ಇದಕ್ಕೆ ನಮ್ಮ ವಿರೋಧವಿದೆ ಎಂದರು.ತಮ್ಮಡಿಹಳ್ಳಿ ಮಠಾಧ್ಯಕ್ಷರಾದ ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗಗ ಶಾಶ್ವತ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಜಾತಿಗಣತಿ ವರದಿ ನನ್ನ ದೃಷ್ಟಿಯಲ್ಲಿ ಅವೈಜ್ಞಾನಿಕ. ಎಲ್ಲೋ ಕುಳಿತುಕೊಂಡು ವರದಿ ಬರೆದಿದ್ದಾರೆ. ಈ ವರದಿಗೆ ೧೫೫ ಕೋಟಿ ರೂ. ವೆಚ್ಚ ಮಾಡಿದ್ದಾರೆ. ವರದಿ ಇನ್ನೂ ನೋಡಿಲ್ಲ, ಮಠಕ್ಕೆ ಯಾರೂ ಬಂದು ನಮ್ಮನ್ನು ವೈಯುಕ್ತಿಕವಾಗಿ ಕೇಳಿಲ್ಲ. ವರದಿ ಅಸ್ಪಷ್ಟವಾಗಿದೆ ಎನ್ನುವುದು ನನ್ನ ಭಾವನೆ ಎಂದರು.ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವುದು ಜಾತಿ ಗಣತಿ ಅಂದ ಮೇಲೆ ಪ್ರತಿಯೊಬ್ಬ ಮನುಷ್ಯರನ್ನು ಕೇಳಬೇಕಿತ್ತು. ಇದು ಜಾತ್ಯಾತೀತತೆ ಮನೋಭಾವ ಅಲ್ವೇ ಅಲ್ಲ ಎಂದರು.ನಮ್ಮ ಮಠದ ಅಕ್ಕಪಕ್ಕ ಎಲ್ಲಕಡೆ ಕೇಳಿದ್ದೇವೆ, ಕೆಲವರು ಗಣತಿ ಮಾಡಿಲ್ಲ ಎಂದು ಹೇಳಿದರೆ, ಕೆಲವರು ಗಣತಿ ಮಾಡಿದ್ದಾರೆ ಎಂದು ಹೇಳುತ್ತಾರೆ. ಒಂದೇ ಊರಿನಲ್ಲಿ ಎರಡೆರಡು ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು ಎಂದರು.ನಮ್ಮ ಮಠದಲ್ಲೂ ಮಕ್ಕಳಿದ್ದಾರೆ. ಅಲ್ಲಿ ಜಾತಿ ಗಣತಿ ಆಗಿದೆಯೋ, ಇಲ್ಲವೋ ಎಂಬುದರ ಬಗ್ಗೆ ಗಮನ ಹರಿಸಬೇಕು. ಜಾತಿ ಇಟ್ಟುಕೊಂಡು ಬಂದಾಗ ಎಲ್ಲರನ್ನು ಕೇಳಬೇಕು. ಆದರೆ ಇದ್ಯಾವುದನ್ನೂ ಮಾಡದೆ ಇರುವುದನ್ನು ನೋಡಿದರೆ ಈ ವರದಿ ಅವೈಜ್ಞಾನಿಕ ಎನಿಸುತ್ತದೆ ಎಂದರು.