ಶಿಕ್ಷಣ

ಪ್ರಾಂಶುಪಾಲರ ಸರ್ವಾಧಿಕಾರಿ ವರ್ತನೆ ತಾಳಲಾರದೆ ತರಗತಿಯಲ್ಲೇ ತಲೆತಿರುಗಿ ಬಿದ್ದ ಉಪನ್ಯಾಸಕಿ

Views: 0

ಯಲ್ಲಾಪುರ : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಭಾರಿ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಉಪನ್ಯಾಸಕಿ ಭವ್ಯ ಸಿ. ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದು, ವಿದ್ಯಾರ್ಥಿಗಳು, ಭೋದಕ ಮತ್ತು ಭೋದಕೇತರ ಸಿಬ್ಬಂದಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪ್ರಾಂಶುಪಾಲರ ಕಿರುಕುಳ ತಾಳಲಾರದೇ ಉಪನ್ಯಾಸಕಿಯೊಬ್ಬರು ತರಗತಿಯಲ್ಲೇ ತಲೆತಿರುಗಿ ಬಿದ್ದ ಆರೋಪ ಕೇಳಿ ಬಂದಿದೆ.

ತರಗತಿಯಲ್ಲಿ ಬಿದ್ದ ಉಪನ್ಯಾಸಕಿ ಸುರೇಖಾ ತಡವಲ ಅವರನ್ನು ವೈದ್ಯಕೀಯ ಉಪಚಾರಕ್ಕಾಗಿ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.

ಇತ್ತೀಚೆಗೆ ಪ್ರಾಂಶುಪಾಲರ ವರ್ಗಾವಣೆ ನಂತರ ಪ್ರಭಾರಿ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಉಪನ್ಯಾಸಕಿ ಭವ್ಯ ಸಿ. ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದು, ವಿದ್ಯಾರ್ಥಿಗಳು, ಭೋದಕ ಮತ್ತು ಭೋದಕೇತರ ಸಿಬ್ಬಂದಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಅಲ್ಲದೇ ಈ ಉಪನ್ಯಾಸಕಿಯನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಶಾಸಕರಿಗೆ ಶುಕ್ರವಾರ ಮನವಿಯನ್ನೂ ನೀಡಿದ್ದಾರೆ.

ಅನಗತ್ಯವಾಗಿ ಕ್ಷುಲ್ಲಕ ಕಾರಣಗಳಿಗೆ ಸಿಬ್ಬಂದಿಗೆ ಜ್ಞಾಪನ ಪತ್ರ, ತಿಳುವಳಿಕೆ ಪತ್ರ ನೀಡುತ್ತಿದ್ದು, ವಿದ್ಯಾರ್ಥಿಗಳ ಮುಂದೆ ಅವಮಾನಿಸುತ್ತಿದ್ದಾರೆ ಎಂಬುದು ಉಪನ್ಯಾಸಕರ ಅಳಲಾಗಿದೆ. ಅಲ್ಲದೇ ಅತಿಥಿ ಉಪನ್ಯಾಸರನ್ನು ಅನಗತ್ಯವಾಗಿ ಕಾಲೇಜಿಗೆ ಕರೆಸಿ, ಕಾಯಿಸಿ, ಚಿಕ್ಕ ಪುಟ್ಟ ಕೆಲಸ ಹೇಳಿ ಸತಾಯಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಇಂತಹ ವಾತಾವರಣದಲ್ಲಿ ಸಮರ್ಥವಾಗಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ, ಕಾಲೇಜಿಗೆ ಸಮರ್ಥ ನಾಯಕತ್ವ ನೀಡಿ ಅಥವಾ ನಮ್ಮೆಲ್ಲರಿಗೂ ವರ್ಗಾವಣೆ ಮಾಡಿ ಎಂದು ಕಾಲೇಜಿನ ಕಾಯಂ ಉಪನ್ಯಾಸಕರು ಧಾರವಾಡದ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ವಿದ್ಯಾರ್ಥಿಗಳ ಇಷ್ಟವಾದ ವಿಷಯದ ಆಯ್ಕೆಗೆ ಮನ್ನಣೆ ನೀಡದೇ, ತಾವು ಹೇಳಿದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಾರೆ ಎಂಬುದು ವಿದ್ಯಾರ್ಥಿಗಳ ಅಳಲಾಗಿದ್ದು, ಇದನ್ನು ಶಾಸಕರಿಗೆ ನೀಡಿದ ಮನವಿಯಲ್ಲಿ ವಿವರಿಸಿದ್ದಾರೆ.

ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿ ನ್ಯಾಯ ಒದಗಿಸುವ ಭರವಸೆಯನ್ನು ಶಾಸಕ ಹೆಬ್ಬಾರ ನೀಡಿದ್ದಾರೆ.

ನಾನು ಯಾರದ್ದೇ ಪರ-ವಿರೋಧ ಇಲ್ಲ. ಕಾಲೇಜಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ಉಪನ್ಯಾಸಕರು ಉತ್ತಮ ವಾತಾವರಣ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷನಾಗಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.

Related Articles

Back to top button