ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳರು ವ್ಯಕ್ತಿಯ ಕೈಯಲ್ಲಿದ್ದ ಮೊಬೈಲ್ ಫೋನ್ ಕಸಿದು ಪರಾರಿ: ಆರೋಪಿ ಕುಸಿದು ಬಿದ್ದು ಸಾವು
Views: 51
ಕನ್ನಡ ಕರಾವಳಿ ಸುದ್ದಿ:ಮೊಬೈಲ್ ಕಸಿದು ಪರಾರಿಯಾಗುವ ಸಂದರ್ಭದಲ್ಲಿ ಕಳ್ಳನೋರ್ವ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ಜರುಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆಸಿದ್ದಾರೆ.
ಜುನೈದ್ ಮೃತಪಟ್ಟ ಆರೋಪಿ. ಮತ್ತೋರ್ವ ಆರೋಪಿ ಅರ್ಬಾಜ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೇ 15ರಂದು ಕಬ್ಬನ್ ಪೇಟೆಯ 14ನೇ ಕ್ರಾಸ್ನಲ್ಲಿ ಇಬ್ಬರೂ ಆರೋಪಿಗಳು ಮೊಬೈಲ್ ಕಳ್ಳತನಕ್ಕೆ ಯತ್ನಸಿದ್ದರು. ಸಂಜೆ ವೇಳೆ ಪಾದಚಾರಿಯೊಬ್ಬರು ರಸ್ತೆಯಲ್ಲಿ ಮೊಬೈಲ್ ನೋಡುತ್ತ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರೂ ಕಳ್ಳರು ಕ್ಷಣಾರ್ಧದಲ್ಲಿ ಆ ವ್ಯಕ್ತಿಯ ಕೈಯಲ್ಲಿದ್ದ ಮೊಬೈಲ್ ಫೋನ್ ಕಸಿದು ಪರಾರಿಯಾಗಲು ಯತ್ನಿಸಿದ್ದರು.
ತಕ್ಷಣ ಆ ವ್ಯಕ್ತಿ ಕಳ್ಳರು. ಕಳ್ಳರು.. ಎಂದು ಜೋರಾಗಿ ಕಿರುಚಿಕೊಂಡಿದ್ದಾನೆ. ಅದೇ ಮಾರ್ಗದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಕಾರ್ಮಿಕರೊಬ್ಬರು ತಮ್ಮ ತಲೆಯ ಮೇಲಿದ್ದ ಭಾರವಾದ ಮೂಟೆಯನ್ನು ಕಳ್ಳರ ದ್ವಿಚಕ್ರ ವಾಹನದ ಮೇಲೆ ಎಸೆದಿದ್ದಾರೆ. ಮೂಟೆ ಬಿದ್ದ ರಭಸಕ್ಕೆ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನದ ಸಮೇತ ಖದೀಮರಿಬ್ಬರೂ ರಸ್ತೆಯ ಬಿದ್ದಿದ್ದಾರೆ. ಕೆಳಗೆ ಬಿದ್ದ ತಕ್ಷಣ ಸುತ್ತಮುತ್ತ ಸಾರ್ವಜನಿಕರು ಓಡಿ ಬರುವುದನ್ನು ಗಮನಿಸಿದ ಕಳ್ಳರು, ಮೊಬೈಲ್ ಫೋನ್ ಹಾಗೂ ದ್ವಿಚಕ್ರ ವಾಹನವನ್ನ ರಸ್ತೆಯ ಮೇಲೆಯೇ ಬಿಟ್ಟು ಪರಾರಿಯಾಗಿದ್ದರು. ಕಳ್ಳರ ಕೃತ್ಯದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಆದರೆ ಓಡಿ ಹೋಗುವ ಸಂದರ್ಭದಲ್ಲಿ ಸುಸ್ತಾಗಿ ಜುನೈದ್ ಫುಟ್ಪಾತ್ ಮೇಲೆ ಕುಳಿತಿದ್ದಂತೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈತ ಮೊದಲಿನಿಂದಲೂ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು ದಾಖಲಾಗಿದೆ. ಮತ್ತೋರ್ವ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.






