ನಿಲ್ಲಿಸಿದ್ದ ಕಾರಿನಲ್ಲಿಯೇ ಉಸಿರುಗಟ್ಟಿ ಮೂರು ವರ್ಷದ ಬಾಲಕ ದಾರುಣ ಸಾವು
Views: 100
ಕನ್ನಡ ಕರಾವಳಿ ಸುದ್ದಿ:ನಿಲ್ಲಿಸಿದ್ದ ಕಾರಿನಲ್ಲಿಯೇ ಉಸಿರುಗಟ್ಟಿ ಮೂರು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದಲ್ಲಿ ಬಾಲಕ ಬಲಿಯಾಗಿದ್ದು, ಕೊಟ್ಟುರೇಶ್ವರ ಎಂಬುವವರ ಮೂರು ವರ್ಷದ ಮಗು ಬಸವಪ್ರಭು ಮೃತ ದುರ್ದೈವಿ.
ಕಾರಿನಲ್ಲಿ ಮಗುವನ್ನು ಕರೆದುಕೊಂಡು ಶಾಲೆಗೆ ಹೋಗಿದ್ದ ಪೋಷಕರು, ಶಾಲೆ ಬಳಿ ಕಾರು ಪಾರ್ಕ್ ಮಾಡಿ ಲಾಕ್ ಮಾಡದೇ ಹೊಗಿದ್ದರು. ಈ ವೇಳೆ ಮಗು ಆಟವಾಡುತ್ತಾ ಕಾರಿನೊಳಗೆ ಹೋಗಿದೆ. ನಂತರ ಕಾರಿನ ಎಲ್ಲಾ ಡೋರ್ಗಳು ಲಾಕ್ ಆಗಿವೆ.
ಬೆಳಿಗ್ಗೆಯಿಂದ ಮಗು ಕಾಣದಿದ್ದಾಗ ಆತಂಕಗೊಂಡ ಪೋಷಕರು ಹಾಗೂ ಕುಟುಂಬಸ್ಥರು ಮಗು ಎಲ್ಲಿ ಹೋಯಿತು ಎಂದು ಇಡೀ ಗ್ರಾಮ ಹಾಗೂ ಶಾಲೆಯ ಸುತ್ತಮುತ್ತ ತೀವ್ರವಾಗಿ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಮಗು ಪತ್ತೆಯಾಗದಿದ್ದಾಗ ಕೊನೆಗೆ ಸಂಶಯಗೊಂಡು ಶಾಲೆಯ ಬಳಿ ನಿಲ್ಲಿಸಿದ್ದ ತಮ್ಮದೇ ಕಾರಿನ ಡೋರ್ ಓಪನ್ ಮಾಡಿ ನೋಡಿದ್ದಾರೆ. ಈ ವೇಳೆ ಕಾರಿನ ಸೀಟಿನ ಮೇಲೆ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸುಡುವ ಬಿಸಿಲಿನಲ್ಲಿ ಕಾರಿನ ಗಾಜುಗಳು ಸಂಪೂರ್ಣ ಮುಚ್ಚಿದ್ದರಿಂದ ಒಳಗಡೆ ಆಮ್ಲಜನಕದ ಕೊರತೆಯಾಗಿ, ಮಗು ತೀವ್ರ ಉಸಿರುಗಟ್ಟಿ ಕೊನೆಯುಸಿರೆಳೆದಿದೆ.






