ಶಿಕ್ಷಣ

ಕೋಟೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ: ರಾಮರಾಯ ಆಚಾರ್ಯ ಹಾಗೂ ಡಾ.ಶೇಖರ ಬಿ. ರವರಿಗೆ ಸನ್ಮಾನ

Views: 21

ಕನ್ನಡ ಕರಾವಳಿ ಸುದ್ದಿ: ಬದುಕಿನಲ್ಲಿ ಭರವಸೆ ಕಳಕೊಳ್ಳದೇ ಕನಸುಗಳ ಬೆನ್ನತ್ತಿ ಪ್ರಯತ್ನದ ಬೆವರು ಸುರಿಸಿದರೆ ಪರಿಪೂರ್ಣತೆಯನ್ನು ಸಾಧಿಸಬಹುದು. ಬಡತನ, ಸೋಲು, ನೋವು, ನಿರಾಸೆಗಳ ನಡುವೆಯೂ ಛಲ ಮತ್ತು ದಿಟ್ಟತನದಿಂದ ಸವಾಲುಗಳನ್ನು ಎದುರಿಸಿದಲ್ಲಿ ಸಮೃದ್ಧಿಯ ಬದುಕು ನಮ್ಮದಾಗುತ್ತದೆಂದು ಅರಣ್ಯ ಗುತ್ತಿಗೆದಾರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜೆ.ಪಿ. ಶೆಟ್ಟಿ ಕಟ್ಕೆರೆ ಹೇಳಿದರು.

ಅವರು ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ಸೇವಾ ನಿವೃತ್ತಿ ಹೊಂದಿದ ಪ್ರಾಂಶುಪಾಲ ರಾಮರಾಯ ಆಚಾರ್ಯ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಶೇಖರ ಬಿ. ಇವರನ್ನು ಸನ್ಮಾನಿಸಿ ಮಾತನಾಡಿದರು.

ಸೇವಾ ನಿವೃತ್ತಿ ಹೊಂದಿದ ಪ್ರಾಧ್ಯಾಪಕರು ಹಲವು ಇಲ್ಲಗಳ ನಡುವೆ ತಾವು ಸಾಧನೆ ಗೈದ ಬದುಕಿನ ಹಿನ್ನೋಟವನ್ನು ಸ್ಮರಿಸಿ ಜೀವನದ ಯಶೋಗಾಥೆಯನ್ನು ಅರುಹಿ ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಿರೆಂದು ವಿದ್ಯಾರ್ಥಿಗಳಿಗೆ ಹಿತನುಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ಧ ಕಾಲೇಜಿನ ನಿಯೋಜಿತ ಪ್ರಾಂಶುಪಾಲ ನಾಗರಾಜ ವೈದ್ಯ ಎಂ. ನಿವೃತ್ತರಾದ ಪ್ರಾಧ್ಯಾಪಕರ ಸೇವಾತತ್ಪರತೆ ಮತ್ತು ಕಾಯಕ ನಿಷ್ಠೆಯು ಕಾಲೇಜಿನ ಗೌರವ ಮತ್ತು ಘನತೆಯನ್ನು ಹೆಚ್ಚಿಸಿದೆ. ಭವಿಷ್ಯದ ಬದುಕು ಆನಂದ ಸಾಗರವಾಗಲೆಂದು ಶುಭ ಕೋರಿದರು.

ಉಪನ್ಯಾಸಕರು, ವಿದ್ಯಾರ್ಥಿಗಳು ತಮ್ಮ ಗುರುಗಳ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು.

ನಿವೃತ್ತರನ್ನು ಉಪನ್ಯಾಸಕ ವರದರಾಜ ಬಿ. ಹಾಗೂ ರಾಜೇಂದ್ರ ಪರಿಚಯಿಸಿದರು.

ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು, ಅಧ್ಯಾಪಕ ಕಾರ್ಯದರ್ಶಿ ಡಾ. ಉದಯ ಶೆಟ್ಟಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂ.ಕಾಂ. ನ ಅನುಷಾ ಹಾಗೂ ತಂಡದವರು ಪ್ರಾರ್ಥಿಸಿದರು. ಶೃತಿ ಆಚಾರ್ಯ ಎನ್. ಸ್ವಾಗತಿಸಿ, ಡಾ. ಭಾಗೀರಥಿ ನಾಯ್ಕ ವಂದಿಸಿದರು.

ವಾಣಿಜ್ಯ ಶಾಸ್ತ್ರ  ಪ್ರಾಧ್ಯಾಪಿಕೆ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಬೋಧಕ/ಬೋಧಕೇತರ ಸಿಬ್ಬಂದಿ, ನಿವೃತ್ತರ ಕುಟುಂಬಸ್ಥರು, ಹಳೆ ವಿದ್ಯಾರ್ಥಿಗಳು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Related Articles

Back to top button
error: Content is protected !!