ಅತ್ತೆಯ ಅಂತ್ಯಕ್ರಿಯೆಯ ಸಿದ್ಧತೆಗೆಂದು ಸ್ನಾನ ಮಾಡಲು ನದಿಗೆ ಇಳಿದ ಅಳೆಯನನ್ನೇ ಎಳೆದೊಯ್ದ ಮೊಸಳೆ
Views: 89
ಕನ್ನಡ ಕರಾವಳಿ ಸುದ್ದಿ: ನಿಧನ ಹೊಂದಿದ ಅತ್ತೆಯ ಅಂತ್ಯಕ್ರಿಯೆಗೆ ನದಿ ತೀರದಲ್ಲಿ ಸಿದ್ಧತೆಯಲ್ಲಿದ್ದಾಗ ಸ್ನಾನ ಮಾಡುವಾಗ ಅಳಿಯನನ್ನೇ ಮೊಸಳೆಯೊಂದು ಎಳೆದೊಯ್ದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಗ್ರೇಟರ್ ನೋಯ್ಡಾದ ನಿವಾಸಿಯಾದ ದೀಪಕ್ ಶರ್ಮಾ(30) ಮೃತ ವ್ಯಕ್ತಿ.
ಇವರು ಸರಯು ನದಿಯ ದಡದಲ್ಲಿ ಅತ್ತೆಯ ಅಂತ್ಯಕ್ರಿಯೆ ಚಿತೆಯ ಸಿದ್ಧತೆ ನಡೆಸುತ್ತಿದ್ದ ವೇಳೆ ಸ್ನಾನ ಮಾಡಲು ನದಿಗೆ ಇಳಿದಾಗ ಈ ದುರಂತ ಸಂಭವಿಸಿದೆ.
ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಸ್ಥಳೀಯರು ನದಿಯಲ್ಲಿ ಮೊಸಳೆಗಳ ಕಾಟ ಇರುವುದರಿಂದ ನೀರಿಗೆ ಇಳಿಯದಂತೆ ದೀಪಕ್ ಅವರಿಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೂ ಕೂಡ ನದಿಗೆ ಇಳಿದಿದ್ದಾರೆ. ಈ ವೇಳೆ ದೈತ್ಯ ಮೊಸಳೆಯೊಂದು ಏಕಾಏಕಿ ದಾಳಿ ಮಾಡಿ, ದೀಪಕ್ ಅವರ ತಲೆಯನ್ನು ತನ್ನ ಬಲವಾದ ದವಡೆಗಳಿಂದ ಕಚ್ಚಿ ಹಿಡಿದು ಕೆಲವೇ ಸೆಕೆಂಡುಗಳಲ್ಲಿ ನದಿಯೊಳಗೆ ಎಳೆದೊಯ್ದಿದೆ.
ದೀಪಕ್ ಅವರ ಕಿರುಚಾಟ ಕೇಳಿ ಸ್ಥಳೀಯರು ತಕ್ಷಣವೇ ನದಿಯಲ್ಲಿ 24 ಗಂಟೆಗಳ ಸತತ ಹುಡುಕಾಟ ನಡೆಸಿದ ಬಳಿಕ ಸುಮಾರು 2.5 ಕಿಲೋಮೀಟರ್ ದೂರದಲ್ಲಿ ದೀಪಕ್ ಅವರ ಮೃತದೇಹ ಪತ್ತೆಯಾಗಿದೆ. ಇವರಿಗೆ ಪತ್ನಿ ಮತ್ತು 4 ವರ್ಷದ ಹೆಣ್ಣು ಮಗಳಿದ್ದಾಳೆ. ಇದೀಗ ಅತ್ತೆಯ ಸಾವಿನ ಬೆನ್ನಲ್ಲೇ ಅಳಿಯ ಸಹ ಸಾವನ್ನಪ್ಪಿರುವುದು ಇಡೀ ಕುಟುಂಬವನ್ನು ಶೋಕದಲ್ಲಿ ಮುಳುಗಿಸಿದೆ.






