ಶಿಕ್ಷಣ

ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ

Views: 15

ಕನ್ನಡ ಕರಾವಳಿ ಸುದ್ದಿ: ದೃಢತೆಯಿಂದ ಕೂಡಿದ ಅವಿರತವಾದ ಪರಿಶ್ರಮ, ತಾಳ್ಮೆ ಮತ್ತು ಸಹಿಷ್ಣುತೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು. ಅವಿರತವಾದ ಶ್ರಮ ಎಂದರೆ ಕ್ರಿಯಾಶೀಲವಾದ ನಿರಂತರ ಪ್ರಯತ್ನ. ಕಷ್ಟ-ನಷ್ಟ, ಸೋಲು-ಗೆಲುವುಗಳೆದುರಾದಾಗ ಸಹನೆಯಿಂದ ಮುನ್ನಡೆದು ಅಮೂಲ್ಯವಾದ ವಿದ್ಯಾರ್ಥಿ ಜೀವನದಲ್ಲಿ ಅನೇಕ ಮೂಲಗಳಿಂದ ಮೌಲ್ಯದಿಂದ ತುಂಬಿದ ಜ್ಞಾನ ಮತ್ತು ಕೌಶಲ್ಯಗಳನ್ನು ಸಂಪಾದಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ. ಇದರ ಜೊತೆಯಲ್ಲಿ ನಮಗೆ ನಾವೇ ಮಹಾನ್ ಶಕ್ತಿಯಾಗಿ ಬದುಕನ್ನು ರೂಪಿಸಿಕೊಂಡರೆ ಸಾರ್ಥಕ ನಾಳೆಯ ದಿನಗಳು ನಮ್ಮದಾಗುತ್ತವೆ ಎಂದು ಕುಂದಾಪುರ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ನುಡಿದರು. 

ಅವರು ಕೋಟೇಶ್ವರದ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇದರ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದಿಕ್ಸೂಚಿ ಭಾಷಣ ಮಾಡಿದ ಬಿದ್ಕಲ್‌ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ವಿಘ್ನೇಶ್ವರ ಭಟ್ ರವರು ಇಂದು ಉದ್ಯೋಗಾರ್ಹತೆ ಅಂದರೆ ಶೈಕ್ಷಣಿಕ ಅರ್ಹತೆಯೊಂದಿಗೆ ಮೃದು ಕೌಶಲ್ಯಗಳು, ಪರಿಣಾಮಕಾರಿ ಸಂವಹನ, ನಾಯಕತ್ವ ಗುಣ, ಹೊಂದಾಣಿಕೆ ಮತ್ತು ಸಮರ್ಪಣಾ ಭಾವ ಹೀಗೆ ಅನೇಕ ಕೌಶಲಗಳ ಗುಂಪಾಗಿದೆ. ನಮ್ಮ ಜೀವನದ ಸುಂದರ ಪಯಣದಲ್ಲಿ ಛಲದಿಂದ ನಿರ್ದಿಷ್ಠ ಗುರಿಯೊಂದಿಗೆ ಮುನ್ನಡೆದರೆ ಸಾಧನೆ ಸಾಧ್ಯ. ಗುರು ಹಿರಿಯರನ್ನು ಗೌರವಿಸಿ ತಮ್ಮ ಶಿಲ್ಪಿಗಳು ತಾವೇ ಎಂದು ಅರಿತು ಶ್ರದ್ಧೆಯಿಂದ ಬದುಕನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಸ್ವ ಪ್ರಯತ್ನ ಮತ್ತು ಆತ್ಮ ವಿಶ್ವಾಸವೇ ಯಶಸ್ಸಿನ ಗುಟ್ಟು. ಸರ್ವರ ಸಹಕಾರದಿಂದ ನನ್ನ ವೃತ್ತಿ ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಂಡ ಬಗ್ಗೆ ಅಭಿನಂದನೆಗಳನ್ನು ಸಲ್ಲಿಸಿದರು. 

ಈ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಮನೋಹರ್ ಬಿ., ಅನುಷಾ ಎಲ್., ಪ್ರೇಮಾ ಆಚಾರಿ, ಮಂಗಳೂರು ವಿ.ವಿ. ಎಂ.ಕಾಂ. ಸ್ನಾತಕೋತ್ತರ ಪದವಿಯಲ್ಲಿ 2024-25 ನೇ ಸಾಲಿನಲ್ಲಿ ದ್ವಿತೀಯ ರ‍್ಯಾಂಕ್ ಪಡೆದ ರಚನಾ ಹಾಗೂ ಅಂತರ್ ವಿಶ್ವವಿದ್ಯಾನಿಲಯ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಭರತ್ ಹೂಗಾರ್ ಇವರೆಲ್ಲರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ವಿಭಾಗದ ಬಹುಮಾನಿತರ ಪಟ್ಟಿಯನ್ನು ಡಾ. ಉದಯ ಶೆಟ್ಟಿ ಕೆ., ಗ್ರಂಥಾಲಯ ವಿಭಾಗದ ಬಹುಮಾನಿತರ ಪಟ್ಟಿಯನ್ನು ರವಿಚಂದ್ರ ಹೆಚ್.ಎಸ್., ಸಾಂಸ್ಕೃತಿಕ ವಿಭಾಗದ ಬಹುಮಾನಿತರ ಪಟ್ಟಿಯನ್ನು ಡಾ. ಶೇಖರ ಬಿ., ರಾಷ್ಟ್ರೀಯ ಸೇವಾ ಯೋಜನಾ ವಿಭಾಗದ ಬಹುಮಾನಿತರ ಪಟ್ಟಿಯನ್ನು ಶೃತಿ ಆಚಾರ್ಯ ಎನ್., ಚುನಾವಣಾ ಸಾಕ್ಷರತಾ ಸಮಿತಿಯ ಬಹುಮಾನಿತರ ಪಟ್ಟಿಯನ್ನು ಡಾ. ಭಾಗೀರಥಿ ನಾಯ್ಕ, ಕ್ರೀಡಾ ವಿಭಾಗದ ಬಹುಮಾನಿತರ ಪಟ್ಟಿಯನ್ನು ಡಾ. ಮನೋಹರ ಬಿ. ವಾಚಿಸಿದರು. ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ಪ್ರಥಮ ಬಿ.ಎಸ್ಸಿ. ತರಗತಿಯ ಸೌಭಾಗ್ಯ ಶೆಣೈ ಇವರನ್ನು ಗೌರವಿಸಲಾಯಿತು. ಸಾಂಸಕೃತಿಕ ಸಂಚಾಲಕರಾದ ಡಾ. ಶೇಖರ ಬಿ., ಅರಣ್ಯ ಗುತ್ತಿಗೆದಾರ ಜೆ.ಪಿ. ಶೆಟ್ಟಿ ಕಟ್ಕೆರೆ ಹಾಗೂ ವಿದ್ಯಾರ್ಥಿ ವೇದಿಕೆ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದ

ವೈಷ್ಣವಿ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ. ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. 2024-25 ನೇ ಸಾಲಿನ ಕಾಲೇಜಿನ ವಾರ್ಷಿಕ ವರದಿಯನ್ನು ಐಕ್ಯೂಎಸಿ ಸಂಚಾಲಕ ನಾಗರಾಜ ಯು. ವಾಚಿಸಿದರು. 

ನಿರಂಜನ ಶರ್ಮ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ಅಂತಿಮ ಬಿ.ಕಾಂ. ನ ಸಿ.ವಿ. ಕೃತಿಕ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related Articles

Back to top button
error: Content is protected !!