ಇತರೆ

ಕಾರ್ಕಳ:ಮದುವೆಯಾದ ಒಂದೇ ತಿಂಗಳಲ್ಲಿ ಮದುಮಗ ಸಂಶಯಾಸ್ಪದ ಸಾವು; ಪತ್ನಿ ಸೌಮ್ಯ ಶೆಟ್ಟಿ ಹೇಳಿದ್ದೇನು..?

Views: 244

ಕನ್ನಡ ಕರಾವಳಿ ಸುದ್ದಿ: ಕಾರ್ಕಳ ತಾಲೂಕಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ವಿವಾಹಿತನೊಬ್ಬ ಸಾವಿಗೆ ಶರಣಾಗಿದ್ದು, ಭಾರೀ ಸಂಚಲನ ಸೃಷ್ಟಿಸಿದೆ ಸುದೀಪ್ ಶೆಟ್ಟಿ ಮೃತ ದುರ್ದೈವಿ

ಮದುವೆಯಾಗಿ ಕೇವಲ ಒಂದು ತಿಂಗಳು ಕಳೆಯುವಷ್ಟರಲ್ಲೇ ಸುದೀಪ್ ಶೆಟ್ಟಿ, ನಿಧನ ಆಗಿರೋದು ಕುಟುಂಬಸ್ಥರ ನಿದ್ದೆಗೆಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಮೂಲದ ಸುದೀಪ್ ಶೆಟ್ಟಿ ಹಾಗೂ ಕಾರ್ಕಳ ಬಂಗ್ಲೆಗುಡ್ಡೆ ನಿವಾಸಿ, ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಫೆಬ್ರವರಿ 17 ರಂದು ಪುತ್ತೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ವಿವಾಹವಾಗಿದ್ದರು. ಸುದೀಪ್ ಮನೆಯವರು ಈ ಮದುವೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಸುದೀಪ್ ತಂದೆ ದಾಮೋದರ್ ಅವರು ತನ್ನ ಸೊಸೆ ಸೌಮ್ಯ ಶೆಟ್ಟಿ ವಿರುದ್ಧವೇ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೌಮ್ಯ ನನ್ನ ಮಗನಿಗೆ ಆತ್ಮತ್ಯೆಗೆ ಪ್ರಚೋದನೆ ನೀಡಿದ್ದಾಳೆ. ಮಾರ್ಚ್ 17 ರಂದು ನೆಲ್ಯಾಡಿಗೆ ಬಂದಿದ್ದ ಸೌಮ್ಯ, ಸುದೀಪ್‌ಗೆ ಬೆದರಿಕೆ ಹಾಕಿದ್ದಳು. ಇದಾದ ಬಳಿಕ ಮಾರ್ಚ್ 22 ರಂದು ಸುದೀಪ್ ವಿಷ ಸೇವಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಾರ್ಚ್ 23 ರಂದು ಸುದೀಪ್‌ನನ್ನು ನಿಟ್ಟೆಯ ಗಜಾರಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಸ್ಥಿತಿ ಗಂಭೀರವಾದ ಹಿನ್ನೆಲೆ ಉಡುಪಿಯ ಆದರ್ಶ ಆಸ್ಪತ್ರೆ ಹಾಗೂ ನಂತರ ಮಂಗಳೂರಿನ ಯನಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29 ರಂದು ಸುದೀಪ್ ಮೃತಪಟ್ಟಿದ್ದಾರೆ.

ಪತ್ನಿ ಸೌಮ್ಯ ಶೆಟ್ಟಿ ಹೇಳಿದ್ದೇನು..?

ತಮ್ಮ ಮೇಲಿನ ಆರೋಪವನ್ನು ಸೌಮ್ಯ ಶೆಟ್ಟಿ ತಿರಸ್ಕರಿಸಿದ್ದಾರೆ. ನಮ್ಮ ಮದುವೆಯನ್ನು ಸುದೀಪ್ ಮನೆಯವರು ಒಪ್ಪಿರಲಿಲ್ಲ. ದೀಪಾವಳಿ ನಂತರ ಮದುವೆ ಮಾಡೋಣ ಎಂದಿದ್ದವರು ನಂತರ ನಿರಾಕರಿಸಿದರು. ಇದರಿಂದ ಸುದೀಪ್ ತೀವ್ರ ಮನನೊಂದಿದ್ದರು. ಅಷ್ಟೇ ಅಲ್ಲದೇ ಸುದೀಪ್ ಅವರಿಗೆ ಲಕ್ಷಾಂತರ ರೂಪಾಯಿ ಸಾಲವಿತ್ತು. ಸಾಲಗಾರರು ಪೋನ್ ಮಾಡಿದಾಗ ಅವರ ತಂದೆಯೇ ನನ್ನ ನಂಬರ್ ನೀಡುತ್ತಿದ್ದರು. ಇದೆಲ್ಲವೂ ಅವರಿಗೆ ಮಾನಸಿಕ ಒತ್ತಡ ತಂದಿತ್ತು. ನೆಲ್ಯಾಡಿಗೆ ಹೋಗಿದ್ದಾಗಲೇ ಅವರು ವಿಷ ಸೇವಿಸಿರಬಹುದು. ಆಸ್ಪತ್ರೆಗೆ ದಾಖಲಿಸಿದಾಗ ಆರಂಭದಲ್ಲಿ ಜಾನ್ಡೀಸ್ ಇರಬಹುದು ಎಂದು ವೈದ್ಯರು ಚಿಕಿತ್ಸೆ ನೀಡಿದ್ದರು. ನಂತರ ಅವರು ವಿಷ ಸೇವಿಸಿರುವುದು ಬೆಳಕಿಗೆ ಬಂತು. ನನಗೆ ಈ ಹಿಂದೆ ಒಂದು ಮದುವೆಯಾಗಿ ವಿಚ್ಛೇದನವಾಗಿರುವುದು ನಿಜ. ಅದನ್ನು ನಾನು ಸುದೀಪ್‌ಗೆ ಮೊದಲೇ ತಿಳಿಸಿದ್ದೆ. ಆದರೆ ನಾನು ನಾಲ್ಕೈದು ಮದುವೆಯಾಗಿದ್ದೇನೆ ಎಂಬ ಆರೋಪ ಸುಳ್ಳು ಎಂದಿದ್ದಾರೆ.

ಸದ್ಯ ಕಾರ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳೂರಿನ ಯನಪೋಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ನಂತರ ಸುದೀಪ್ ಸಾವಿನ ಹಿಂದಿನ ನಿಖರ ಕಾರಣ ಹಾಗೂ ಸೌಮ್ಯ ಶೆಟ್ಟಿ ಮೇಲಿನ ಆರೋಪಗಳ ಸತ್ಯಾಸತ್ಯತೆ ಹೊರಬರಬೇಕಿದೆ. ಸುದೀಪ್ ಮನೆಯವರು ಶ್ರೀಮಂತರಾಗಿದ್ದು, ಆಸ್ತಿ ಅಥವಾ ಕುಟುಂಬದ ಪ್ರತಿಷ್ಠೆಯ ಕಾರಣಕ್ಕೆ ಈ ವಿರಸ ಉಂಟಾಗಿತ್ತೇ? ಅಥವಾ ಸೌಮ್ಯ ಶೆಟ್ಟಿ ನೀಡುತ್ತಿರುವ ಹೇಳಿಕೆಗಳಲ್ಲಿ ಸತ್ಯಾಂಶವಿದೆಯೇ? ಎಂಬ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಷ್ಟೇ ಉತ್ತರ ನೀಡಬೇಕಿದೆ.

Related Articles

Back to top button
error: Content is protected !!