ಮುಸುಕುಧಾರಿಗಳಿಂದ ಅಪಹರಣ ಯತ್ನ: ವಿದ್ಯಾರ್ಥಿನಿಯಿಂದಲೇ ನಾಟಕ ಬಯಲು!
Views: 188
ಕನ್ನಡ ಕರಾವಳಿ ಸುದ್ದಿ : ಬೆಳ್ತಂಗಡಿಯಲ್ಲಿ ಸೋಮವಾರ ಕಾಲೇಜು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಬಂದ ಮೂವರು ಮುಸುಕುಧಾರಿಗಳು ಅಪಹರಿಸಲು ಯತ್ನಿಸಿದ ಪ್ರಕರಣ ತಿರುವು ಪಡೆದಿದ್ದು, ಇಡೀ ಪ್ರಕರಣವೇ ವಿದ್ಯಾರ್ಥಿನಿ ಆಡಿದ ನಾಟಕ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ನಗರದ ಸುದೇಮುಗೇರು ಎಂಬಲ್ಲಿ ಫೆ.9ರಂದು ಬೆಳಗ್ಗೆ 8:30ರ ಸುಮಾರಿಗೆ 16 ವರ್ಷದ ಕಾಲೇಜು ವಿದ್ಯಾರ್ಥಿನಿ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಮೂವರು ಅಪಹರಿಸಲು ಯತ್ನಿಸಿದ್ದಾರೆ ಎಂದು ದೂರಲಾಗಿತ್ತು. ಈ ವೇಳೆ ತಾನು ಬೊಬ್ಬೆ ಹಾಕಿದ್ದರಿಂದ ದುಷ್ಕರ್ಮಿಗಳು ತನ್ನ ಕೈಗೆ ಚೂರಿಯಿಂದ ಚುಚ್ಚಿ ಪರಾರಿಯಾದರು ಎಂದು ವಿದ್ಯಾರ್ಥಿನಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಳು. ಕೈಗೆ ಗಾಯವಾಗಿದ್ದರಿಂದ ಬಾಲಕಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಸೋಮವಾರ ದಿನವಿಡೀ ಕಾರ್ಯಾಚರಣೆ ನಡೆಸಿದರೂ ವಿದ್ಯಾರ್ಥಿನಿ ಹೇಳಿದಂತಹ ಯಾವುದೇ ಓಮ್ಮಿ ಕಾರು ಪರಿಸರದಲ್ಲಿ ಓಡಾಡಿರುವುದು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಕೂಲಕಂಷ ತನಿಖೆ ನಡೆಸಿದಾಗ ಅಪಹರಣ ಯತ್ನ, ಚೂರಿ ಇರಿತದಂತಹ ಯಾವುದೇ ಘಟನೆ ನಡೆದಿಲ್ಲ. ಅದು ವಿದ್ಯಾರ್ಥಿನಿ ಆಡಿದ ನಾಟಕ ಎಂಬುದು ಬೆಳಕಿಗೆ ಬಂದಿದೆ ಎಂದು ತಿಳಿದಬಂದಿದೆ.
ಕಾಲೇಜಿಗೆ ಹೋಗಲು ಇಷ್ಟವಿಲ್ಲದ ಕಾರಣ ತಾನೇ ಬ್ಲೇಡ್ ನಿಂದ ಕೈಗೆ ಇರಿದು ಅಪಹರಣದ ನಾಟಕವಾಡಿದ್ದಾಳೆ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ.






