ವಿಚ್ಛೇದಿತ ಮಹಿಳೆಗೆ ಬಾಳು ಕೊಡೋದಾಗಿ 36 ಲಕ್ಷ ಪಡೆದು ಪರಾರಿ, ಮತ್ತೊಂದು ಮದುವೆಗೆ ಸಜ್ಜು!
Views: 111
ಕನ್ನಡ ಕರಾವಳಿ ಸುದ್ದಿ: ವಿಚ್ಛೇದಿತ ಮಹಿಳೆಗೆ ಬಾಳು ಕೊಡೋದಾಗಿ ಮದುವೆ, ಬಳಿಕ ಕೈಗೊಂದು ಮಗುವನ್ನು ಕೊಟ್ಟು ಆಕೆಯಿಂದ 36 ಲಕ್ಷ ರೂಪಾಯಿ ಪಡೆದು ಎಸ್ಕೇಪ್ ಆಗಿದ್ದಾನೆ. ಇದೀಗ ಮತ್ತೊಂದು ಮದುವೆಗೆ ಸಜ್ಜಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಿಚ್ಚೇದಿತ ಮಹಿಳೆಗೆ ಬಾಳು ಕೊಡುತ್ತೇನೆ, ನಿನ್ನೊಂದಿಗೆ ನನ್ನ ಸುಂದರ ಜೀವನ ಎಂದೆಲ್ಲಾ ಮರುಳು ಮಾಡಿ ಮದುವೆಯಾದ ಅಸಾಮಿ, ಬಳಿಕ ಒಂದೇ ವರ್ಷದಲ್ಲಿ ಮಗು ಕೈಗೆ ನೀಡಿ ಆಕೆಯ ಬಳಿ ಇದ್ದ ನಗದು, ಚಿನ್ನಾಭರಣ ಸೇರಿ ಬರೋಬ್ಬರಿ 36 ಲಕ್ಷ ರೂಪಾಯಿ ಪಡೆದು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ
ಬೆಂಗಳೂರಿನ ಬನಶಂಕರಿಯ ಕಿರಾತಕ ಮೋಹನ್ ರಾಜ್ ಈ ಅಸಾಮಿ. ಮೋಹನ್ ರಾಜ್ ವಿರುದ್ದ ಮಹಿಳೆ ಗಂಭೀರ ಆರೋಪ ಮಾಡಿ ದೂರು ನೀಡಿದ್ದಾಳೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದೇ ವೇಳೆ ಪೊಲೀಸರು ಮೇಲೂ ಮಹಿಳೆ ನಿರ್ಲಕ್ಷ್ಯದ ಆರೋಪ ಮಾಡಿದ್ದಾಳೆ. ಪೊಲೀಸರು ತನಗೆ ನ್ಯಾಯ ಕೊಡಿಸುತ್ತಿಲ್ಲ ಎಂದು ಆರೋಪಿಸಿದ್ದಾಳೆ.
ತನಗೆ ಕಳೆದ 10 ವರ್ಷಗಳಿಂದ ಮೋಹನ್ ರಾಜ್ ಪರಿಚಯ ಎಂದು ಮಹಿಳೆ ಹೇಳಿದ್ದಾಳೆ. 2022 ರಲ್ಲಿ ಮಹಿಳೆ ಜೊತೆಗೆ ಮೋಹನ್ ರಾಜ್ ವಿವಾಹವಾಗಿದ್ದಾರೆ. 2023 ರಲ್ಲಿ ದಂಪತಿಗೆ ಒಂದು ಹೆಣ್ಣು ಮಗು ಜನಿಸಿದೆ. ಆದರೆ 2025ರಲ್ಲಿ ಮೋಹನ್ ರಾಜ್ ಮನೆ ಬಿಟ್ಟು ಹೋಗಿದ್ದಾನೆ. ಫೋನ್ ಮಾಡಿದರೆ, ಕೇಳಲು ಹೋದರೆ ಹಲ್ಲೆ ಮಾಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಮೋಹನ್ ರಾಜ್ ವಿರುದ್ಧ ನಾಲ್ಕು ದೂರು ನೀಡಿದ್ದೇನೆ. ಆದರೆ ಪೊಲೀಸರು ನ್ಯಾಯ ಕೊಡಿಸುವ ಬದಲು ನನಗೆ ಧಮ್ಕಿ ಹಾಕುತ್ತಿದ್ದಾರೆ. ನನ್ನನ್ನೇ ಒದ್ದು ಒಳಗೆ ಹಾಕುತ್ತೇನೆ ಎಂದು ಬೆದರಿಸುತ್ತಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾಳೆ. ಹೀಗಾಗಿ ತನಗೆ ನ್ಯಾಯ ಕೊಡಿಸಿ ಎಂದು ಮಹಿಳೆ ಮನವಿ ಮಾಡಿಕೊಂಡಿದ್ದಾಳೆ.
ಒಂದೇ ಏರಿಯಾದಲ್ಲಿ ವಾಸವಿದ್ದ ಮಹಿಳೆ ಹಾಗೂ ಮೋಹನ್ ರಾಜ್ ಪರಿಚಯವಾಗಿದೆ. ಮಹಿಳೆ ಮೊದಲ ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದರು. ಈ ವಿಚಾರ ಗೊತ್ತಿದ್ದೇ ಮೋಹನ್ ರಾಜ್ ವಿವಾಹವಾಗಿದ್ದ. ಮನೆ ಕಟ್ಟಿ ಹೊಸ ಜೀವನ ಆರಂಭಿಸೋಣ ಎಂದು ಮಹಿಳೆಯಿಂದ ಹಣ ವಸೂಲಿ ಮಾಡಿದ್ದ ಎಂದು ಆರೋಪಿಸಿದ್ದಾರೆ.
ಮೋಹನ್ ರಾಜ್ ತನ್ನಿಂದ ನಗದು ಹಣ, ಚಿನ್ನಾಭರಣ ಸೇರಿ ಬರೋಬ್ಬರಿ 36 ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ಈಗ ಕೇಳಿದ್ರೆ ನೀನ್ಯಾರು ಅಂತಲೇ ಗೊತ್ತಿಲ್ಲ ಎಂದು ಮೋಹನ್ ರಾಜ್ ಹೇಳುತ್ತಿದ್ದಾನೆ. ಇದೀಗ ಯಾವುದೇ ಸಂಬಂಧವಿಲ್ಲ, ಗೊತ್ತಿಲ್ಲ ಎಂದು ವಂಚಿಸುತ್ತಿದ್ದಾನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾಳೆ.
ಮೊದಲ ಮದುವೆ ಮುರಿದು ಬೀಳಲು ಮೋಹನ್ ರಾಜ್ ಕಾರಣ ಎಂದು ಮಹಿಳೆ ಆರೋಪಿಸಿದ್ದಾಳೆ. ಮಹೋನ್ ರಾಜ್ ಪರಿಚಯವಾಗಿದ್ದ ಅಷ್ಟೆ. ಅದರೆ ಆತನ ಜೊತೆ ಸಂಬಂಧ ಇರಲಿಲ್ಲ. ಆದರೆ ಇಲ್ಲ ಸಲ್ಲದ ಕಟ್ಟು ಕತೆಯನ್ನು ಮೊದಲ ಪತಿಗೆ ಹೇಳಿ ಅಕ್ರಮ ಸಂಬಂಧ ಇರುವುದಾಗಿ ನಂಬಿಸಿದ್ದ. ಹೀಗಾಗಿ ಮೊದಲ ಪತಿಯಿಂದ ಅನಿವಾರ್ಯವಾಗಿ ಡಿವೋರ್ಸ್ ಪಡೆಯಬೇಕಾಯಿತು ಎಂದು ಮಹಿಳೆ ಆರೋಪಿಸಿದ್ದಾಳೆ.






