ಇತರೆ

ಕೋಟ್ಯಧಿಪತಿಯಾಗುವ ಆಸೆಯಿಂದ ಮೂವರು ವಾಮಾಚಾರಕ್ಕೆ ಬಲಿ!

Views: 77

ಕನ್ನಡ ಕರಾವಳಿ ಸುದ್ದಿ: ಮಾಂತ್ರಿಕನೊಬ್ಬ ನಡೆಸಿರುವ ಮಾಟಮಂತ್ರಕ್ಕೆ ಮೂವರು ವ್ಯಕ್ತಿಗಳು ಬಲಿಯಾಗಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.

ಬಲಿಯಾದ ಮೂವರು ಕೋಟ್ಯಧಿಪತಿಯಾಗುವ ಆಸೆಯಿಂದ ಮಾಟಮಂತ್ರದಲ್ಲಿ ಭಾಗಿಯಾಗಲು ಸ್ವಇಚ್ಛೆಯಿಂದ ಒಪ್ಪಿಕೊಂಡಿದ್ದರು. ಈ ಘಟನೆ ಕೊರ್ಬಾ ಜಿಲ್ಲೆಯ ಉರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಮಾಚಾರದ ಮೂಲಕ ಇವರು ತಮ್ಮಲ್ಲಿದ್ದ 5 ಲಕ್ಷ ರೂ.ಗಳನ್ನು 2.5 ಕೋಟಿ ರೂ.ಗಳನ್ನಾಗಿ ಮಾಡುವ ದುರಾಸೆ ಹೊಂದಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಕ್ರ್ಯಾಪ್ ವ್ಯಾಪಾರಿ ಮೊಹಮ್ಮದ್ ಅಶ್ರಫ್ ಮೆಮನ್, ತುಳಸಿ ನಗರದ ಸುರೇಶ್ ಸಾಹು ಮತ್ತು ದುರ್ಗ್‌ನ ನಿತೀಶ್ ಕುಮಾರ್ ಎಂಬವರು ಬಹಳ ಬೇಗನೆ ಕೋಟ್ಯಾಧಿಪತಿಯಾಗಬೇಕು ಎನ್ನುವ ದುರಾಸೆಯಿಂದ ಮಾಂತ್ರಿಕ ರಾಜೇಂದ್ರ ಕುಮಾರ್ ಎಂಬಾತನನ್ನು ಸಂಪರ್ಕಿಸಿದ್ದಾರೆ. ಇದಕ್ಕಾಗಿ ಮಾಂತ್ರಿಕ ಕೆಲವು ವಿಧಿವಿಧಾನಗಳು ಮಾಡಬೇಕು ಎಂದು ಹೇಳಿದ್ದು, ಈ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಲು ಮೂವರು ಸ್ವಯಂ ಪ್ರೇರಿತರಾಗಿ ಒಪ್ಪಿಕೊಂಡಿದ್ದರು.

ಇದಕ್ಕಾಗಿ ಬುಧವಾರ ತಡರಾತ್ರಿ ಉರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಾರ್ಬಸ್‌ಪುರದ ಸ್ಕ್ರ್ಯಾಪ್‌ಯಾರ್ಡ್‌ಗೆ ಮಾಂತ್ರಿಕ ಮತ್ತು ಆತನ ಮೂವರು ಸಹಚರರನ್ನು ಕರೆಸಿಕೊಂಡ ಮೊಹಮ್ಮದ್ ಅಶ್ರಫ್ ಮೆಮನ್, ಸುರೇಶ್ ಸಾಹು ಮತ್ತು ನಿತೀಶ್ ಕುಮಾರ್ ಬಳಿಕ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸ್ಕ್ರ್ಯಾಪ್‌ಯಾರ್ಡ್‌ನ ಕೋಣೆಯಲ್ಲಿ ಮೂವರ ಶವ ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿರುವ ಸಿವಿಲ್ ಲೈನ್ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಮಾಂತ್ರಿಕ ಸೇರಿದಂತೆ ಐವರು ಶಂಕಿತರನ್ನು ಬಂಧಿಸಿದ್ದಾರೆ.

ಕುದ್ರಿ ಗ್ರಾಮದಲ್ಲಿರುವ ಅಶ್ರಫ್ ಮೆಮನ್‌ಗೆ ಸೇರಿದ ತೋಟದ ಮನೆಯೊಳಗೆ ಬುಧವಾರ ತಡರಾತ್ರಿ 11 ಗಂಟೆ ಸುಮಾರಿಗೆ ಈ ಧಾರ್ಮಿಕ ಆಚರಣೆಗಳನ್ನು ಪ್ರಾರಂಭಿಸಲಾಗಿದೆ. ತಾಂತ್ರಿಕರು ಮೂವರನ್ನು ಒಬ್ಬೊಬ್ಬರಾಗಿ ಪ್ರತ್ಯೇಕ ಕೋಣೆಗೆ ಕರೆದೊಯ್ದು ಅವರಿಗೆ ನಿಂಬೆಹಣ್ಣುಗಳನ್ನು ನೀಡಿ, ಹಗ್ಗದಿಂದ ನೆಲದ ಮೇಲೆ ವೃತ್ತ ಎಳೆದು ಅದರಿಂದ ಹೊರಬರದಂತೆ ಹೇಳಿ ಬೀಗ ಹಾಕಿದ್ದಾರೆ. 30 ರಿಂದ 60 ನಿಮಿಷಗಳ ಅನಂತರ ಬಾಗಿಲು ತೆರೆಯುವುದಾಗಿ ಹೇಳಿದ್ದಾರೆ. ಕೋಣೆಯ ಬಾಗಿಲು ತೆರೆದಾಗ ಮೂವರು ಸತ್ತು ಬಿದ್ದಿದ್ದರು. ಕೂಡಲೇ ಮಾಂತ್ರಿಕ ಮತ್ತು ಆತನ ಸಹಚರರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅದಾಗಲೇ ಅವರು ಸತ್ತಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಸ್ಥಳದಲ್ಲಿದ್ದ ಪೂಜಾ ಸಾಮಗ್ರಿಗಳು, ನಿಂಬೆಹಣ್ಣು, ಹಗ್ಗ ಮತ್ತು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಾಂತ್ರಿಕ ಆಚರಣೆಯಲ್ಲಿ ತಪ್ಪಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಕೊರ್ಬಾ ಎಸ್ಪಿ ಸಿದ್ಧಾರ್ಥ್ ತಿವಾರಿ, ಮೃತರ ಕತ್ತು ಹಿಸುಕಿದ ರೀತಿಯಲ್ಲಿದೆ. ಅವರ ಕುತ್ತಿಗೆಯಲ್ಲಿ ಗಾಯದ ಗುರುತು, ಉಗುರಿನ ಗೆರೆ ಇದೆ ಎಂದು ಮೃತರ ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಹೇಳಿದರು.

ಕೊರ್ಬಾ ಸಿಎಸ್ಪಿ ಭೂಷಣ್ ಎಕ್ಕಾ ಆಸ್ಪತ್ರೆಯಲ್ಲಿ ಶವಗಳನ್ನು ಪರಿಶೀಲಿಸಿದ ನಂತರ, ಆರಂಭಿಕ ಚಿಹ್ನೆಗಳು ವಿಷಪ್ರಾಶನವನ್ನು ಸೂಚಿಸುತ್ತವೆ ಎಂದು ಹೇಳಿದರು. ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ.

 

Related Articles

Back to top button
error: Content is protected !!