ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ‘ಪರಂಪರಾ 2025’ ವಿನೂತನ ಕಾರ್ಯಕ್ರಮ
Views: 395
ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಪ್ರದಾಯಿಕ ಪರಂಪರೆಯನ್ನು ತಿಳಿಸುವ “ಪರಂಪರಾ 2025 ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಳ
ಈ ಸುಂದರ ಕಾರ್ಯಕ್ರಮವನ್ನು ಮಣಿಪಾಲದ ಎಂ.ಐ ಟಿ ಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್ ವಿ ಉದಯಕುಮಾರ್ ಶೆಟ್ಟಿ ಅವರು ಉದ್ಘಾಟಿಸಿ, ಮಾತನಾಡುತ್ತಾ ವಿಶ್ವ ಶಾಂತಿ ದಿನದ ಸಂಕೇತವಾದ ಮಕ್ಕಳ ದಿನಾಚರಣೆಯು ನೆಹರುರವರ ಉದಾತ್ತ ವ್ಯಕ್ತಿತ್ವವನ್ನು ಸ್ಮರಿಸುವ ದಿನವಾಗಿದೆ. ಸಂಪ್ರದಾಯದಲ್ಲಿ ಬದಲಾವಣೆ ಇರುವುದಿಲ್ಲ ಕಾಲದಿಂದ ಕಾಲಕ್ಕೆ ಮುಂದುವರಿದುಕೊಂಡು ಬಂದ ಕಟ್ಟುಪಾಡುಗಳಿಗೆ ತನ್ನದೇ ಆದ ಸಂಸ್ಕೃತಿ ಇದೆ. ಉತ್ಸಾಹ, ಕರುಣೆ, ಆತ್ಮವಿಶ್ವಾಸ, ವೈರಾಗ್ಯದಂತಹ ವಿಚಾರಗಳು ನಮ್ಮ ಜೀವನದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಅಭಿರುಚಿಗೆ ಅನುಗುಣವಾಗಿ ನಮ್ಮ ಬದುಕಿನ ದಿಕ್ಕನ್ನು ಬದಲಿಸಿಕೊಳ್ಳುತ್ತಾ ಸಮಾಜಮುಖಿಯಾಗಿ ಬೆಳೆಯಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಅವರು ಮಾತನಾಡಿ, ಆಧುನಿಕ ಯುಗದಲ್ಲಿ ನಾವು ಕುಬ್ಜರಾಗುತ್ತಾ ಹೋಗುತ್ತಿದ್ದೇವೆ. ನಮ್ಮ ಹಿಂದಿನ ಆಚರಣೆಗಳು ಬರೀ ಪೊಳ್ಳು ಆಚರಣೆಯಾಗಿರದೆ, ಉದಾತ್ತ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ನೈತಿಕ ಮೌಲ್ಯವನ್ನು ಹೊಂದಿದ ಆಚರಣೆಗಳಾಗಿವೆ. ನಮ್ಮ ಪರಂಪರೆಯ ಶ್ರೇಷ್ಠತೆಯನ್ನು ನಾವೇ ಹೊತ್ತು ನಡೆಯಬೇಕು ಎಂದರು. ಪ್ರಾಂಶುಪಾಲರಾದ ಡಾ. ರೂಪಾ ಶಣೈರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಪ್ರತಿಯೊಂದು ಸಂಸ್ಕೃತಿಯ ಹಿಂದಿರುವ ಜೀವನ ಮೌಲ್ಯಗಳು ಸತ್ವ ಪೂರ್ಣವಾಗಿದ್ದು, ಅಂತಹ ಗತಪರಂಪರೆಯನ್ನು ಕಾಳಜಿಯಿಂದ ಬೆಳಸಿ ಉಳಿಸಬೇಕಾದದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.ಇದೇ ಸಂದರ್ಭದಲ್ಲಿ ನಮ್ಮ ಪರಂಪರೆಯನ್ನು ಸಾರುವ ವಿವಿಧ ವಸ್ತುಗಳ ಪ್ರದರ್ಶನವನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಗಾಗಿ ಸಾಂಪ್ರದಾಯಿಕ ವಸ್ತ್ರ ವಿನ್ಯಾಸ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಅಂಗವಾಗಿ ನಡೆಸಿದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕುಮಾರಿ ಕೃತಿ ಶ್ರೀ ಕಾರ್ಯಕ್ರಮವನ್ನು ನಿರ್ವಹಿಸಿದ್ದು, ಕುಮಾರಿ ಗಾನವಿ ಸ್ವಾಗತಿಸಿದರೆ, ಕುಮಾರಿ ನಿತ್ಯ ಅತಿಥಿಗಳ ಪರಿಚಯ ಮಾಡಿದರು. ಕುಮಾರಿ ಶರಣ್ಯ ಉಪಾಧ್ಯಾಯ ವಂದಿಸಿದರು.






