ಶಿಕ್ಷಣ

ಕೋಟ ವಿವೇಕ ಪದವಿ ಪೂರ್ವ ಕಾಲೇಜು: ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲ ಸಂಘದ ವಾರ್ಷಿಕ ಮಹಾಸಭೆ

Views: 65

ಕನ್ನಡ ಕರಾವಳಿ ಸುದ್ದಿ: ಗುಣಮಟ್ಟದ ಶಿಕ್ಷಣದೊಂದಿಗೆ ಶಿಸ್ತಿನ ಶಿಕ್ಷಣ ನೀಡುವತ್ತ ಉಪನ್ಯಾಕರು ಗಮನ ಹರಿಸಿದಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಂಸ್ಥೆಗಳೂ ಅಭಿವೃದ್ಧಿ ಹೊಂದುತ್ತವೆ ಎಂದು ಕೋಟ ವಿವೇಕ ವಿದ್ಯಾ ಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ ಹೇಳಿದರು.

ಅವರು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲ ಸಂಘದ ವಾರ್ಷಿಕ ಮಹಾಸಭೆ, ಶೈಕ್ಷಣಿಕ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ವರ್ಗಿನ್ ಪಿ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿವೃತ್ತ ಸಹಾಯಕ ನಿರ್ದೇಶಕ ಸುರೇಶ ತುಂಗ ಮಾತನಾಡಿ ಇಂದು ಕೆಲವೊಂದು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಗೊಳ್ಳುತ್ತಿರುವ ಬಗ್ಗೆ ಅಸಮಾಧಾನದ ಮಾತಿಗಿಂತ ಎಲ್ಲರೂ ಒಗ್ಗಟ್ಟಾಗಿ ಯಾವ ರೀತಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬಹುದು ಎನ್ನುವ ಬಗ್ಗೆ ಚಿಂತನೆ ನಡೆಸಬೇಕು, ಗುಣಮಟ್ಟದ ಶಿಕ್ಷಣ ನೀಡುವ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕುತ್ತಿರುವುದು ಎಲ್ಲರೂ ಗಮನಿಸಬೇಕಾದ ವಿಷಯ ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪನಿರ್ದೇಶಕ ಮಾರುತಿ, ವಿವೇಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ನಾಗೇಶ ಶಾನುಭಾಗ್, ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ರಾಜ್ಯ ಸಂಚಾಲಕ ಡಾ. ಜಿ. ಎಂ.ಗೊಂಡ, ಸಂಘದ ಸಾಂಸ್ಕೃತಿಕ ಸಂಚಾಲಕಿ ಸುಚೇತಾ ಕ್ರೀಡಾ ಸಂಚಾಲಕ ಪ್ರಕಾಶ ಶೆಟ್ಟಿ, ಪ್ರಾಂಶುಪಾಲರ ಸಂಘದ ರವೀಂದ್ರ ಉಪಾಧ್ಯ, ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡ ಇದ್ದರು.

ಇದೇ ಸಂದರ್ಭ ನಿವೃತ್ತ ಪ್ರಾಂಶುಪಾಲರಾದ ವಸಂತ ಆಚಾರ್ಯ, ಗೋಪಾಲ ಭಟ್, ಮಂಜುನಾಥ ನಾಯಕ್, ನಾಗರಾಜ ವೈದ್ಯ, ಉಮೇಶ ಹೆಗ್ಡೆ ಮತ್ತು ಡಿಡಿಪಿಯು ಕಚೇರಿಯ ನಿವೃತ್ತ ಕಚೇರಿ ಸಿಬ್ಬಂದಿ ವಿಜಯ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲೆಯ ಪಿಯು ಕಾಲೇಜುಗಳಲ್ಲಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಮತ್ತು ಶೇ.90ಕ್ಕಿಂತ ಅಧಿಕ ಫಲಿತಾಂಶ ಪಡೆದ ಕಾಲೇಜುಗಳನ್ನು ಅಭಿನಂದಿಸಲಾಯಿತು. ಇಲಾಖೆಯ ವಿವಿಧ ಕೆಲಸಗಳಲ್ಲಿ ಸಹಕರಿಸಿದ ಎಲ್ಲ ಉಪನ್ಯಾಸಕ ವರ್ಗದವರನ್ನು ಗೌರವಿಸಲಾಯಿತು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಘದ ಕೋಶಾಧಿಕಾರಿ ಜಗದೀಶ ಕುಮಾರ್ ಸ್ವಾಗತಿಸಿದರು. ಪ್ರಾಂಶುಪಾಲರಾದ ಶ್ರೀಧರ ಶೆಟ್ಟಿ, ಜಗದೀಶ ಭಟ್ ಮತ್ತು ಲೀಲಾಬಾಯಿ ಭಟ್ ಸನ್ಮಾನಿತರನ್ನು ಪರಿಚಯಿಸಿದರು. ಪ್ರಾಂಶುಪಾಲರಾದ ಬೇಬಿ ವಂದಿಸಿದರು. ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button
error: Content is protected !!