ಕ್ಯಾನ್ ಫಿನ್ ಹೋಮ್ ಸಂಸ್ಥೆಯಿಂದ ಮರವಂತೆ ಪ್ರೌಢಶಾಲೆಗೆ ನೀಡಿದ ಸೋಲಾರ್ ಸಂಕೀರ್ಣ ಉದ್ಘಾಟನೆ

Views: 130
ಕನ್ನಡ ಕರಾವಳಿ ಸುದ್ದಿ: ಕ್ಯಾನ್ ಫಿನ್ ಹೋಮ್ ಸಂಸ್ಥೆ ಮರವಂತೆ ಪ್ರೌಢಶಾಲೆಗೆ ನೀಡಿದ ಸೋಲಾರ್ ಸಂಕೀರ್ಣವನ್ನು ಪ್ರಶಾಂತ್ ಜೋಷಿ ನ.23 ರಂದು ಶನಿವಾರ ಉದ್ಘಾಟಿಸಿದರು.
ಸೌರಶಕ್ತಿ ಬಳಕೆ ಕಾಲದ ಅಗತ್ಯಸಾಂಪ್ರದಾಯಿಕ ಶಕ್ತಿಮೂಲಗಳು ನಶಿಸುತ್ತಿವೆ ಇಲ್ಲವೆ ಪರಿಸರಕ್ಕೆ ಹಾನಿಕಾರಕವಾಗಿವೆ. ಈ ಸಂದಿಗ್ಧ ಸ್ಥಿತಿಯಲ್ಲಿ ಉಚಿತವಾಗಿ ಮತ್ತು ಮಾಲಿನ್ಯ ರಹಿತವಾಗಿ ಸಿಗುವ ಸೌರ ಶಕ್ತಿಯನ್ನು ಬಳಕೆ ಮಾಡಿಕೊಳ್ಳುವುದು ಕಾಲದ ಅಗತ್ಯ ಎನಿಸಿದೆ ಎಂದು ಕ್ಯಾನ್ ಫಿನ್ ಹೋಮ್ ಸಂಸ್ಥೆಯ ಸಹಾಯಕ ಮಹಾ ಪ್ರಬಂಧಕ ಪ್ರಶಾಂತ ಜೋಷಿ ಹೇಳಿದರು.
ಮರವಂತೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಗೆ ಸಂಸ್ಥೆಯ ಸಾಮಾಜಿಕ ಸೇವಾ ನಿಧಿಯಿಂದ ನೀಡಲಾದ ರೂ 7 ಲಕ್ಷ ಮೌಲ್ಯದ ಸಂಪೂರ್ಣ ಸೌರ ಸಂಕೀರ್ಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಈ ಸಂಕೀರ್ಣದಿಂದಾಗಿ ಶಾಲೆಯು ಸರ್ವ ಸೌರಶಕ್ತಿ ವ್ಯವಸ್ಥೆಯಾಗಲಿದೆ. ಶಾಲೆಯ ಎಲ್ಲ ವಿದ್ಯುತ್ ಶಕ್ತಿ ಅಗತ್ಯವನ್ನು ಅದು ಪೂರೈಸುವುದರ ಜತೆಗೆ ಆವರಣದಲ್ಲಿ ಅಳವಡಿಸಿದ 8 ಸೌರ ದೀಪಗಳು ರಾತ್ರಿ ಕಾಲದಲ್ಲಿ ಆವರಣವನ್ನು ಬೆಳಗಿ ರಕ್ಷಣೆ ನೀಡಲಿವೆ. ವ್ಯವಸ್ಥೆಯನ್ನು ಪೂರೈಸಿದ ಸೆಲ್ಕೊ ಸೋಲಾರ್ ಸಂಸ್ಥೆ ಇದರ ನಿರ್ವಹಣೆ ನಡೆಸಲಿದೆ. ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರ ಗರಿಷ್ಠ ಲಾಭ ಪಡೆಯಬೇಕು ಎಂದು ವರು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಯು. ಭಾಸ್ಕರ ಮಯ್ಯ ಸ್ವಾಗತಿಸಿದರು. ಚಂದ್ರ ಮಾಸ್ತರ್ ಶಾಲೆಗೆ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಜೋಷಿ ಅವರಿಗೆ ಮನವಿ ಸಲ್ಲಿಸಿದದರು. ಕ್ಯಾನ್ ಫಿನ್ ಹೋಮ್ ಸಂಸ್ಥೆಯಿಂದ ಈ ಕೊಡುಗೆಯನ್ನು ತರಿಸಿಕೊಡಲು ಕಾರಣರಾದ ಸತೀಶ ಎಂ. ನಾಯಕ್, ಶಾಲಾ ಸಂಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ಜನಾರ್ದನ ಮರವಂತೆ, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ದಯಾನಂದ ಬಳೆಗಾರ್, ಸೇಲ್ಕೊ ಪ್ರಾದೇಶಿಕ ಪ್ರಬಂಧಕ ಶೇಖರ ಶೆಟ್ಟಿ, ಕುಂದಾಪುರ ಶಾಖಾಧಿಕಾರಿ ಮಂಜುನಾಥ್, ಪ್ರತಿಮಾ ಜೋಷಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಶಿಕ್ಷಕರು ಇದ್ದರು.
ಶಿಕ್ಷಕ ಹಿತೇಶ ಶೆಟ್ಟಿ ವಂದಿಸಿದರು. ರಮೇಶ ನಾಯಕ್ ನಿರೂಪಿಸಿದರು. ಜೋಷಿ ಅವರನ್ನು ಸನ್ಮಾನಿಸಲಾಯಿತು. ಸತೀಶ ನಾಯಕ್, ಶೇಖರ ಶೆಟ್ಟಿ, ಮಂಜುನಾಥ್ ಅವರನ್ನು ಗೌರವಿಸಲಾಯಿತು.






