ಎರಡು ಬಾರಿ ಫ್ಲೈಟ್ ಟಿಕೆಟ್ ಬುಕ್ ಮಾಡಿ ಇದೀಗ ಮೂರನೇ ಬಾರಿಯೂ ಎಸ್ಐಟಿ ಕಣ್ಣು ತಪ್ಪಿಸುವ ಪ್ಲ್ಯಾನ್ ಹಾಕಿದ್ದಾರಾ ಪ್ರಜ್ವಲ್?

Views: 27
ಬೆಂಗಳೂರು :ಜೆಡಿಎಸ್ ಸಂಸದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ಇವತ್ತು ರಾತ್ರಿ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಎಲ್ಲವೂ ಈ ಟಿಕೆಟ್ ಪ್ರಕಾರವೇ ನಡೆದರೆ ಇಂದು ಮಧ್ಯರಾತ್ರಿ 12 ಗಂಟೆ ನಂತರ ಪ್ರಜ್ವಲ್ ಬೆಂಗಳೂರಿಗೆ ಬಂದಿಳಿಯಬೇಕು. ಆದರೆ, ಈ ಟಿಕೆಟ್ನಲ್ಲಿ ಪ್ರಜ್ವಲ್ ಮೊಬೈಲ್ ನಂಬರ್ ಮತ್ತು ಇ-ಮೇಲ್ ಅಡ್ರೆಸ್ಸೇ ನಮೂದಿಸಿಲ್ಲ. ಇದು ಎಐಟಿಗೆ ಮತ್ತೊಂದು ಅನುಮಾನಕ್ಕೆ ಕಾರಣವಾಗಿದೆ.
ಪ್ರಜ್ವಲ್ ವಿರುದ್ಧ ಅತ್ಯಾಚಾರ ಸೇರಿದಂತೆ ಒಟ್ಟು ಮೂರು ಗಂಭೀರ ಕೇಸ್ಗಳು ದಾಖಲಾಗಿವೆ. ಹೀಗಾಗಿ, ನಿನ್ನೆಯೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿ ತುರ್ತು ವಿಚಾರಣೆಗೆ ಪ್ರಜ್ವಲ್ ಪರ ವಕೀಲರು ಮನವಿ ಮಾಡಿದ್ದರು. ಆದರೆ, ನ್ಯಾಯಾಧೀಶರು ತುರ್ತು ವಿಚಾರಣೆಗೆ ನಿರಾಕರಿಸಿದ್ದು, ನಾಳೆ ಬೆಳಗ್ಗೆ ಜಾಮೀನು ಅರ್ಜಿ ವಿಚಾರಣೆ ನಡೆಸಲಿದ್ದಾರೆ. ಹೀಗಾಗಿ, ಇಂದು ಮಧ್ಯರಾತ್ರಿ ಪ್ರಜ್ವಲ್ ಬಂದ ತಕ್ಷಣ ಎಸ್ಐಟಿ ಅಧಿಕಾರಿಗಳು ಬಂಧಿಸಲಿದ್ದಾರೆ.
ಬಂಧನ ಭೀತಿಯಲ್ಲಿರುವ ಪ್ರಜ್ವಲ್ ಕಳೆದ ಬಾರಿ ಫ್ಲೈಟ್ ಟಿಕೆಟ್ ಬುಕ್ ಮಾಡಿ ವಿಮಾನವನ್ನು ಏರಲೇ ಇಲ್ಲ. ಅದಕ್ಕೂ ಮುನ್ನ ಫ್ಲೈಟ್ ಟಿಕೆಟ್ ಬುಕ್ ಮಾಡಿ ರದ್ದು ಮಾಡಿದ್ದರು. ಈ ಬಾರಿಯೂ ಇಂಥದ್ದೇ ಆಟ ಆಡಿದರೂ ಅಚ್ಚರಿ ಇಲ್ಲ ಎಂಬುದು ಎಸ್ಐಟಿ ಅಧಿಕಾರಿಗಳ ಲೆಕ್ಕಾಚಾರ. ಹೀಗಾಗಿ, ಪ್ರಜ್ವಲ್ ವಿಡಿಯೋ ಕಳಿಸಿದ ಲೊಕೇಷನ್ ಪತ್ತೆ ಹಚ್ಚಿದ್ದಾರೆ. ಆದ್ರೆ, ಆ ಐಪಿ ಅಡ್ರೆಸ್ ಹಂಗೇರಿಯ ಬುಡಾಪೆಸ್ಟ್ನಲ್ಲಿ ಲೊಕೇಟ್ ಆಗಿದೆ. ಇಷ್ಟೇ ಅಲ್ಲ, ವಿಡಿಯೋ ಎರಡು ದಿನ ಮೊದಲೇ ರೆಕಾರ್ಡ್ ಮಾಡಿ ಆ ಬಳಿಕ ಬಿಡುಗಡೆ ಮಾಡಿರುವುದು ಕೂಡ ಬಯಲಾಗಿದೆ.
ಪ್ರಜ್ವಲ್ ನಿಜವಾಗಲೂ ಜರ್ಮನಿಯಲ್ಲೇ ಇದ್ದಾರಾ ಅನ್ನೋ ಅನುಮಾನ ಎಸ್ಐಟಿ ಅಧಿಕಾರಿಗಳಿಗೆ ಶುರುವಾಗಿದೆ. ಯಾಕೆಂದ್ರೆ ಟಿಕೆಟ್ ಬುಕ್ ಆಗಿರುವುದು ಮ್ಯೂನಿಕ್ನಿಂದ. ಆದರೆ, ಹಂಗೇರಿಯ ಬುಡಾಪೆಸ್ಟ್ನಲ್ಲಿ ವಿಡಿಯೋ ಐಪಿ ಅಡ್ರೆಸ್ ಟ್ರೇಸ್ ಆಗಿದೆ. ಈ ಎರಡೂ ಕಡೆ ಪ್ರಜ್ವಲ್ ಇಲ್ಲ. ದುಬೈನ ಅಪಾರ್ಟ್ಮೆಂಟ್ ಒಂದರಲ್ಲಿದ್ದಾರೆ ಅನ್ನೋ ಮಾಹಿತಿಯನ್ನು ಸರ್ಕಾರದ ಮೂಲಗಳು ತಿಳಿಸಿವೆ.
ಒಂದು ವೇಳೆ ಇವತ್ತು ಪ್ರಜ್ವಲ್ ಮ್ಯೂನಿಕ್ ಏರ್ಪೋರ್ಟ್ನಲ್ಲಿ ಬೋರ್ಡಿಂಗ್ ಆಗದಿದ್ರೆ, ಬೇರೆ ಸ್ಥಳದಿಂದ ಬರಬಹುದು ಅಂತಾ ಅಂದಾಜಿಸಬಹುದು. ಅಥವಾ ಮತ್ತದೇ ಹಳೇ ಕ್ಯಾನ್ಸಲ್ ಆಟವನ್ನೇ ಪ್ರಜ್ವಲ್ ಆಡಬಹುದು ಅನ್ನೋ ಚರ್ಚೆಯೂ ನಡೀತಿದೆ. ಇದಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಆಗಿರೋದು ಕೂಡ ಇಂಬು ಕೊಟ್ಟಿದೆ.






