ರಾಜಕೀಯ

ವಿಧಾನ ಪರಿಷತ್ ಚುನಾವಣೆ: ರಘುಪತಿ ಭಟ್ ಗೆಲ್ಲುವ ವಿಶ್ವಾಸ ಕೆ.ಎಸ್. ಈಶ್ವರಪ್ಪ 

Views: 35

ಶಿವಮೊಗ್ಗ: ನಾನು ಬಿಜೆಪಿ ಕಾರ್ಯಕರ್ತನಾದ ಮೇಲೆ ಅನೇಕ ಚುನಾವಣೆ ಎದುರಿಸಿದ್ದೇನೆ ಮತ್ತು ಗೆದ್ದಿದ್ದೇನೆ. ನಾನು ತುಂಬ ನೊಂದು ಹೇಳುತ್ತಿದ್ದೇನೆ ಇಂದು ಬಿಜೆಪಿಯು ಧನಂಜಯ್ ಸರ್ಜಿ ಗುಂಡು ಪಾರ್ಟಿ ಆಗುತ್ತಿದೆ. ನಮ್ಮ ಅಧಿಕಾರಾವಧಿಯಲ್ಲಿ ಎಂದೂ ದುರಭ್ಯಾಸದ ಪಾರ್ಟಿಗಳನ್ನು ಆಯೋಜಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದುವರೆದು ಮಾತನಾಡುತ್ತ, ಸರ್ಜಿ ನೀಡಿದ ಗುಂಡು ಪಾರ್ಟಿಗೆ ಹೋಗಿ ಬಂದವರು ಬೆಳಗ್ಗೆ ಕರೆ ಮಾಡಿ ರಾತ್ರಿ ಪಾರ್ಟಿಗೆ ಹೋಗಿದ್ವಿ ಎಂದು ಹೇಳಿಕೊಂಡಿದ್ದಾರೆ. ಆದರೂ ತಮ್ಮ ಮತ ರಘುಪತಿ ಭಟ್ ಗೆ ನೀಡುವುದಾಗಿ ಹೇಳಿದ್ದಾರೆ.

ಹರ್ಷನ ಕೊಲೆಯಾದಾಗ ಎಲ್ಲಾ ಹಿಂದುಗಳ ರಕ್ತ ಕುದಿಯುತ್ತಿತ್ತು. ಆದರೆ ಸರ್ಜಿ ನಗರದಲ್ಲಿ ಶಾಂತಿಯ ನಡಿಗೆ ಹಮ್ಮಿಕೊಂಡಿದ್ದರು. ಅವರೂಬ್ಬ ಹಿಂದುವಾಗಿ ಆಕ್ರೋಶ ಇರಬೇಕಿತ್ತು. ಮತದಾರರು ಹಿಂದುತ್ವವನ್ನು ಕೈ ಬಿಟ್ಟಿಲ್ಲ ಎಂದ ಅವರು, ನಾವು ನಮ್ಮ ಆಡಳಿತಾವಧಿಯಲ್ಲಿ ಮತದಾರರಿಗೆ ಎಂದೂ ಗುಂಡು ಪಾರ್ಟಿ ಕೊಟ್ಟಿಲ್ಲ. ಇವರು ಚುನಾವಣೆ ಗೆಲ್ಲಲು ದುಶ್ಚಟವನ್ನು ಅಂಟಿಸುತ್ತಿರುವುದು ನನಗೆ ನೋವು ತಂದಿದೆ ಎಂದರು.

ಇದನ್ನು ವಿಧಾನ ಪರಿಷತ್ತಿನ ಆರು ಜಿಲ್ಲೆಯ ಮತದಾರರು ಒಪ್ಪುತ್ತಾರೆ ಎಂದು ನಾನು ಅಂದುಕೊಳ್ಳಲ್ಲ. ಹಾಗಾಗಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಧನಂಜಯ್ ಸರ್ಜಿಯನ್ನು ಮತದಾರರು ಸೋಲಿಸುತ್ತಾರೆ. ಬಿಜೆಪಿಯ ಶೇ.80 ರಷ್ಟು ಕಾರ್ಯಕರ್ತರು ನಮ್ಮ ಜೊತೆಗೆ ಇದ್ದಾರೆ. ಕೆಜೆಪಿಗೆ ಹೋದವರು ಮಾತ್ರ ಬಿಜೆಪಿ ಕಚೇರಿಗೆ ಹೋಗಿ ಸರ್ಜಿಗೆ ಬೆಂಬಲ ನೀಡುತ್ತಿದ್ದಾರೆ. ನಾನು ಉಡುಪಿ, ಮಂಗಳೂರು ಭಾಗದಲ್ಲಿ ಪ್ರವಾಸ ಮಾಡಿದಾಗ ರಘುಪತಿ ಭಟ್ ಗೆಲ್ಲುವ ವಿಶ್ವಾಸ ಬಂದಿದೆ. ರಘುಪತಿ ಭಟ್ರನ್ನು ಕೈಬಿಡಲ್ಲ ಎಂದು ಶಾಸಕರು ಸಹ ನಮಗೆ ಕರೆ ಮಾಡಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್, ಕ್ಷೇತ್ರದೆಲ್ಲೆಡೆ ಬಿರುಸಿನ ಪ್ರಚಾರ ನಡೆಸುತ್ತಿದ್ದೇನೆ. ನಾನು ಪ್ರಚಾರಕ್ಕೆ ಹೋದ ಕಡೆಯಲ್ಲಿ ಸಿಕ್ಕ ಬೆಂಬಲ ನೋಡಿ ನಮಗೆ ತುಂಬ ಸಂತೋಷವಾಗಿದೆ. ಜನಸಂಘದ ಕಾರ್ಯಕರ್ತರು ಬಂದು ಬೆಂಬಲ ನೀಡುತ್ತಿದ್ದಾರೆ. ಅದರಂತೆ ರಾಷ್ಟ್ರಭಕ್ತ ಬಳಗದ ಬೆಂಬಲ ಸಿಕ್ಕ ನಂತರ ನನಗೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಬಂದಿದೆ. ಮುಂದೆ ಎಂಎಲ್ಸಿ ಆದ ಮೇಲೆ ಈ ಭಾಗಕ್ಕೂ ಸಹ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ಪದವಿಧರ, ಕಾರ್ಯಕರ್ತರ ಹಾಗೂ ಮಲೆನಾಡಿಗರ ಧ್ವನಿಯಾಗಿರುತ್ತೇನೆ ಎಂದು ಭರವಸೆ ನೀಡಿದರು.

Related Articles

Back to top button
error: Content is protected !!