ಹಣ ಹೂಡಿಕೆ ಮಾಡಿ ದುಪ್ಪಟ್ಟು ಲಾಭ ಆಮಿಷ, ಉಪನ್ಯಾಸಕರಿಗೆ 26 ಲಕ್ಷ ರೂ.ವಂಚನೆ: ಕುಂದಾಪುರ ಠಾಣೆಯಲ್ಲಿ ದೂರು
Views: 124
ಕನ್ನಡ ಕರಾವಳಿ ಸುದ್ದಿ: ರಿಚ್ ಲೈಫ್ ಕೇರ್ ಕಂಪೆನಿ ಹೆಸರಲ್ಲಿ ಹಣ ಹೂಡಿಕೆ ಮಾಡಿದರೆ ತಿಂಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ ಎಂದು ಹೇಳಿ ಬರೋಬ್ಬರಿ 26 ಲಕ್ಷ ರೂ. ಗೂ ಮಿಕ್ಕಿ ಹಣ ಪಡೆದು ಖಾಸಗಿ ಕಾಲೇಜು ಉಪನ್ಯಾಸಕರೊಬ್ಬರಿಗೆ ವಂಚಿಸಿದ ಘಟನೆ ನಡೆದಿದೆ.
ಮಂಗಳೂರಿನ ಖಾಸಗಿ ಕಾಲೇಜು ಉಪನ್ಯಾಸಕ ಸುಬ್ರಹ್ಮಣ್ಯ ವಿಜಯ್ ಆರ್. (38) ವಂಚನೆಗೊಳಗಾದವರು.
ಇವರಿಗೆ ಬಾರ್ಕೂರಿನ ರಾಘವೇಂದ್ರ ಮೂಲಕ ಪರಿಚಯವಾದ ಮುಂಬಯಿಯ ಸಂತೋಷ್ ಮಹೇಂದ್ರ (43) ಎಂಬಾತ ವಂಚಿಸಿದ ಆರೋಪಿ.
2022 ರ ಜೂನ್ ನಲ್ಲಿ ಕಾವ್ರಾಡಿಯ ಕಂಪ್ಯೂಟರಲ್ಲಿ ರಾಘವೇಂದ್ರ ಜತೆ ಸುಬ್ರಹ್ಮಣ್ಯ ವಿಜಯ್ ಅವರು ಆರೋಪಿ ಸಂತೋಷ್ ಮಹೇಂದ್ರನನ್ನು ಭೇಟಿಯಾಗಿ, ಹಣ ಹೂಡಿಕೆ ಬಗ್ಗೆ ಮಾಹಿತಿ ಪಡೆದಿದ್ದು, ಆತನ ಮಾತನ್ನು ನಂಬಿ ಅಲ್ಲಿಯೇ 2.96 ಲಕ್ಷ ರೂ. ನೀಡಿರುವುದಾಗಿದೆ. 30 ಲಕ್ಷ ರೂ.ಗಿಂತ ಹೆಚ್ಚಿನ ಹೂಡಿಕೆ ಮಾಡಿದರೆ, ಒಂದು ಕಾರು ನೀಡುವುದಾಗಿಯೂ ಆರೋಪಿ ತಿಳಿಸಿರುವುದಾಗಿದೆ.
ಅನಂತರ ಸುಬ್ರಹ್ಮಣ್ಯ ವಿಜಯ್ ಅವರ ಖಾತೆಯಿಂದ ಆರೋಪಿಯ ಬ್ಯಾಂಕ್ ಖಾತೆಗೆ 26.50 ಲಕ್ಷ ರೂ. ಹಣ ಜಮೆ ಮಾಡಿರುವುದಾಗಿದೆ. ಆ ಬಳಿಕ ಹೂಡಿಕೆ ಮಾಡಿದ ಹಣ ಕೇಳಿದಾಗ, ಒಟ್ಟು 2 ಲಕ್ಷ ರೂ. ಅಷ್ಟೇ ಹಿಂತಿರುಗಿಸಿರುವುದಾಗಿದೆ.
ಈ ಬಗ್ಗೆ ರಾಘವೇಂದ್ರ ನ ಮೊಬೈಲ್ನಿಂದ ಸುಬ್ರಹ್ಮಣ್ಯ ಅವರು ಆರೋಪಿಗೆ ಕರೆ ಮಾಡಿದಾಗ ಆತ ಅವಾಚ್ಯವಾಗಿ ನಿಂದಿಸಿರುವುದಲ್ಲದೆ, ಜನ ಬಿಟ್ಟು ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದಾನೆ.
ಈ ಸಂಬಂಧ ಸುಬ್ರಹ್ಮಣ್ಯ ವಿಜಯ್ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






