ಜನಮನ

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿಳಂಬ ದಾಖಲಾತಿ ಮುಖ್ಯ ಮಾಹಿತಿ 

Views: 15

ಕನ್ನಡ ಕರಾವಳಿ ಸುದ್ದಿ: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿರುವ ಸರ್ಕಾರವು, ಈ ಹಿಂದೆ ಜಾರಿಯಲ್ಲಿದ್ದ ವಿಳಂಬ ದಾಖಲಾತಿ ದಂಡ ಶುಲ್ಕವನ್ನು ಸಂಪೂರ್ಣವಾಗಿ ಹಿಂಪಡೆದಿದೆ. 2026-27ನೇ ಶೈಕ್ಷಣಿಕ ಸಾಲಿನಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ವಿಳಂಬವಾಗಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ ವಿಧಿಸಲಾಗುತ್ತಿದ್ದ ರೂ. 670 ವಿಳಂಬ ದಾಖಲಾತಿ ದಂಡ ಶುಲ್ಕ ಹಾಗೂ ರೂ. 2,220 ವಿಶೇಷ ದಂಡ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.

2018ರಲ್ಲಿ ಹೊರಡಿಸಲಾದ ಆದೇಶದ ಪ್ರಕಾರ, ದಾಖಲಾತಿ ಅವಧಿ ಮುಗಿದ ನಂತರ ವಿದ್ಯಾರ್ಥಿಗಳು 10 ದಿನಗಳೊಳಗೆ ದಾಖಲಾತಿ ಪಡೆದರೆ ರೂ. 670 ದಂಡ ಹಾಗೂ 20 ದಿನಗಳೊಳಗೆ ದಾಖಲಾತಿ ಪಡೆದರೆ ರೂ. 2,220 ವಿಶೇಷ ದಂಡ ಪಾವತಿಸಬೇಕಾಗಿತ್ತು. ಆದರೆ, ಹೆಚ್ಚಿನ ವಿದ್ಯಾರ್ಥಿಗಳು ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರುವುದರಿಂದ ಈ ದಂಡ ಪಾವತಿಸುವುದು ಕಷ್ಟಕರವಾಗುತ್ತಿತ್ತು. ಇದರಿಂದ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ಎದುರಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯವು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು, ವಿದ್ಯಾರ್ಥಿಗಳ ಆರ್ಥಿಕ ಹಾಗೂ ಸಾಮಾಜಿಕ ಹಿತವನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಆದೇಶದವರೆಗೆ ಈ ದಂಡವನ್ನು ಸಂಪೂರ್ಣವಾಗಿ ಹಿಂಪಡೆದು, ಸಾಮಾನ್ಯ ದಾಖಲಾತಿ ಶುಲ್ಕವನ್ನು ಮಾತ್ರ ಪಡೆದು ದಾಖಲಾತಿ ನೀಡಲು ಅನುಮತಿ ನೀಡಿದೆ. ಈ ನಿರ್ಧಾರವನ್ನು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಜಾರಿಗೊಳಿಸಲಾಗಿದ್ದು, ರಾಜ್ಯಪಾಲರ ಆಜ್ಞಾನುಸಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ) ಅಧೀನ ಕಾರ್ಯದರ್ಶಿ ಎಸ್. ಪ್ರಕಾಶ ಅವರು ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಳಂಬ ದಾಖಲಾತಿ ದಂಡ ಶುಲ್ಕವನ್ನು ಹಿಂಪಡೆದ ಸರ್ಕಾರದ ನಿರ್ಧಾರವು ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ದೊಡ್ಡ ನೆರವಾಗಿದ್ದು, ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ. ಈ ಕ್ರಮದಿಂದ ಬಡ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಕ್ಷಣದ ಪ್ರವೇಶ ಸುಲಭವಾಗಲಿದೆ.

 

Related Articles

Back to top button
error: Content is protected !!