ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

Views: 65
ಕನ್ನಡ ಕರಾವಳಿ ಸುದ್ದಿ: ಕುಂದಾಪುರದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಮನೆಮಾತಾಗಿರುವ ಜಿಲ್ಲೆಯಲ್ಲಿಯೇ ಮಾದರಿ ಶಿಕ್ಷಣ ಸಂಸ್ಥೆ ಸುಜ್ಞಾನ ಎಜುಕೇಶನ್ ಟ್ರಸ್ಟ್ (ರಿ) ಪ್ರವರ್ತಿತ ಯಡಾಡಿ- ಮತ್ಯಾಡಿ ಸುಜ್ಞಾನ ಪದವಿಪೂರ್ವ ಕಾಲೇಜು ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿ. 24ರಂದು ಸಂಭ್ರಮದ ಕ್ರಿಸ್ಮಸ್ ಆಚರಣೆ ನಡೆಯಿತು.
ಕುಂದಾಪುರದ ಹಂಗಳೂರು ಚರ್ಚ್ ಧರ್ಮಗುರು ರೆ. ಫಾ. ಆಲ್ಬರ್ಟ್ ಕ್ರಾಸ್ತಾ ಅವರು ದೀಪ ಬೆಳಗಿಸಿ, ಕೇಕ್ ಕಟ್ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅವರು ಮಾತನಾಡಿ, ಏಸು ಕ್ರಿಸ್ತ ಹುಟ್ಟಿದ್ದು ನಗರದಲ್ಲಿ ಅದೇ ವಾತಾವರಣ ಈ ಶಾಲೆಯಲ್ಲಿ ಸೃಷ್ಟಿಸಿದ್ದು ಖುಷಿ ತಂದಿದೆ. ಜಗತ್ತಿನಲ್ಲಿ ಸರ್ವ ಶ್ರೇಷ್ಠವಾದದ್ದು ಪ್ರೀತಿ, ಅದೊಂದು ಆಸ್ತಿಯು ಹೌದು, ಪ್ರೀತಿಯಿಂದ ಎಲ್ಲವನ್ನು ಗೆಲ್ಲಬೇಕು ಇಲ್ಲದಿದ್ದರೆ ಯಾವುದೇ ಬೆಳವಣಿಗೆ ಅಸಾಧ್ಯ. ಪ್ರೀತಿ ಪ್ರತೀ ಜೀವಿಯಲ್ಲಿ ನಾವು ಕಾಣಬೇಕು ಪರಿವರ್ತನೆಯ ಜೀವನಕ್ಕೆ ಅವಕಾಶ ಮಾಡಿಕೊಟ್ಟಾಗ ಮಾತ್ರ ಹೊಸ ಜೀವನಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಜುಡಿತ್ ಮೆಂಡೋನ್ಸಾ ಅವರು ಮಾತನಾಡಿ, ಪರಿವರ್ತನೆಯ ಈ ಸಂದರ್ಭದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಗೆ ಶುಭ ಹಾರೈಸಿದರು. ಉಡುಗೊರೆ ಮತ್ತು ಪ್ರೀತಿ ಹಂಚಿಕೊಳ್ಳುವ ಹಬ್ಬದ ಸಂಕೇತ ಸರ್ವ ಜನಾಂಗದ ತೋಟವಾಗಲಿ ಎಂದರು.
ಸುಜ್ಞಾನ ಎಜುಕೇಶನ್ ಟ್ರಸ್ಟ್ (ರಿ) ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸುಜ್ಞಾನ ಎಜುಕೇಶನ್ ಟ್ರಸ್ಟ್ (ರಿ) ಕಾರ್ಯದರ್ಶಿ ಪ್ರತಾಪ್ ಚಂದ್ರಶೆಟ್ಟಿ, ಸುಜ್ಞಾನ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಂಜನ್ ಕುಮಾರ್ ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ .ಕೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಕ್ರಿಸ್ಮಸ್ ಗೀತೆ, ಕ್ರಿಸ್ತ ಜನನ, ವಿವಿಧ ಟ್ಯಾಬ್ಲೊಗಳನ್ನು ವಿದ್ಯಾರ್ಥಿಗಳಿಂದ ಪ್ರಸ್ತುತಪಡಿಸಲಾಯಿತು.
ಕ್ರಿಸ್ಮಸ್ ಪ್ರಯುಕ್ತ ಹಮ್ಮಿಕೊಂಡ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿನಿ ಪ್ರಾವ್ಯಾ ಶೆಟ್ಟಿ, ಸ್ವಾಗತಿಸಿದರು. ಶಿಕ್ಷಕಿ ರೋಸಮ್ ಕ್ರಿಸ್ಮಸ್ ಸಂದೇಶ ವಾಚಿಸಿದರು. ಸಹನಾ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಫಾತಿಮಾ ನಸೀಫ್ ಕಾರ್ಯಕ್ರಮ ನಿರೂಪಿಸಿದರು. ಅನೀಶ್ ಧನ್ಯವಾದ ಸಮರ್ಪಿಸಿದರು.














