ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ
Views: 180
ಕನ್ನಡ ಕರಾವಳಿ ಸುದ್ದಿ:ವಕ್ವಾಡಿಯ ಗುರುಕುಲ -ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಸಿ.ಎ, ಸಿ.ಎಸ್ ವೃತ್ತಿಪರ ಕೋರ್ಸಿನ ಉದ್ಘಾಟನಾ ಸಮಾರಂಭವನ್ನು ಜುಲೈ 4ರಂದು ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ದಿಪ್ತಾ ಅಕಾಡೆಮಿಯ ಶ್ರೀ ದುರ್ಗಾ ಪ್ರಸಾದ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ – ಲೆಕ್ಕ ಪರಿಶೋಧಕರಿಗೆ ಜಾಗತಿಕವಾಗಿ ವಿಶೇಷ ಮನ್ನಣೆ ಇದ್ದು, ಸ್ವಾವಲಂಬಿಯಾಗಿ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಪೂರಕವಾದ ಸಿ,ಎ, ಸಿ.ಎಸ್ ನಂತಹ ಕೋರ್ಸುಗಳು ಇಂದು ಬಹು ಬೇಡಿಕೆಯನ್ನು ಪಡೆದಿವೆ. ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ನಮ್ಮ ನಮ್ಮ ಭವಿಷ್ಯವನ್ನು ಸುದೃಢವಾಗಿ ಕಟ್ಟಿಕೊಳ್ಳುವುದಕ್ಕೆ ಇಂತಹ ಕೋರ್ಸುಗಳ ಮೂಲಕ ಯಶಸ್ಸನ್ನು ಸಾಧಿಸಬಹುದಾಗಿದೆ. ಸತತ ಪರಿಶ್ರಮ, ಶ್ರದ್ಧೆಮತ್ತು ಪರಿಪೂರ್ಣವಾದ ತಯಾರಿಯಿಂದ ಸಿ ಎ, ಸಿ ಎಸ್ ನಂತಹ ಪರೀಕ್ಷೆಗಳಲ್ಲಿ ಪ್ರಥಮ ಹಂತದಲ್ಲಿಯೇ ತೇರ್ಗಡೆಯಾಗಲು ಸಾಧ್ಯ ಎಂದರು.ಸ್ಥಾನಮಾನ, ಸಂಪತ್ತು, ಯಶಸ್ಸು, ಭದ್ರತೆ ಮತ್ತು ತಪ್ಪಿದಾಯಕ ಬದುಕನ್ನು ಹೊಂದಲು ಇಂಥ ಕೋರ್ಸುಗಳು ಸಹಾಯಕವಾಗಿವೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಶ್ರೀ ಸಂದೀಪ್ ನಾಯ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿ – ವರ್ತಮಾನದಲ್ಲಿ ಬಹು ಬೇಡಿಕೆಯಲ್ಲೊಂದಾದ ಸಿ.ಎ, ಸಿ ಎಸ್ ಕೋರ್ಸುಗಳಿಗೆ ನಾವು ವಿಶೇಷ ಆದ್ಯತೆಯನ್ನು ನೀಡಬೇಕಾಗಿದೆ. ಇಡೀ ದೇಶದಲ್ಲೇ ಅತಿ ಹೆಚ್ಚು ಉದ್ಯೋಗವಕಾಶಕ್ಕೆ ಆದ್ಯತೆಯನ್ನು ಇಂತಹ ಕೋರ್ಸುಗಳು ಎಡೆ ಮಾಡಿ ಕೊಡುವುದರಿಂದ ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕೆಂದರು.
ಶೈಕ್ಷಣಿಕ ಸಂಯೋಜಕರಾದ ಶ್ರೀ ರಾಘವೇಂದ್ರರವರು ಉಪಸ್ಥಿತರಿದ್ದರು.ಕುಮಾರಿ ಶ್ರಾವ್ಯ ಪ್ರಾರ್ಥಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಸೌಜನ್ಯರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.






