ಮುಂಗಾರು ದುರ್ಬಲ :ರೈತರು ಕಂಗಾಲು

Views: 0
ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ಬಿಪರ್ ಜಾಯ್ ಚಂಡಮಾರುತ ಬೆನ್ನಲ್ಲೇ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂಗಾರು ಮತ್ತಷ್ಟು ದುರ್ಬಲವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ವಿಳಂಬದಿಂದ ರೈತರಿಗೆ ಈ ಬಾರಿಯ ಮಳೆ ಮತ್ತಷ್ಟು ಆತಂಕ ತಂದೊಡ್ಡಲಿದೆ. ಚಂಡ ಮಾರುತ ವಾತಾವರಣದ ತೇವಾಂಶವನ್ನು ಹೀರಿಕೊಳ್ಳುವುದರಿಂದ ನೈರುತ್ಯ ಮುಂಗಾರು ದುರ್ಬಲ ಗೊಂಡಿದೆ. ಹೀಗಾಗಿ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದ ಮಳೆಯಾಗುತ್ತಿಲ್ಲ. ಈ ತಿಂಗಳ ಅಂತ್ಯದವರೆಗೂ ರಾಜ್ಯದಲ್ಲಿ ಉತ್ತಮ ಮಳೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ವಿಶೇಷ ನಿರ್ದೇಶಕ ವಿ ಎಸ್ ಪ್ರಕಾಶ್ ಹೇಳಿದ್ದಾರೆ.
ಹವಾಮಾನ ಇಲಾಖೆ ಪ್ರಕಾರ ಮುಂಗಾರು ವಿಳಂಬ ಮತ್ತು ಮಾರುತಗಳ ನಿಧಾನಗತಿಯಿಂದಾಗಿ ಇಲ್ಲಿಯವರೆಗೆ ಶೇಕಡ 66 ರಷ್ಟು ರಷ್ಟು ಮಳೆ ಕೊರತೆ ಕಂಡು ಬಂದಿದೆ. ವಾಡಿಕೆಯಂತೆ ಮಳೆ ಪ್ರಮಾಣ 70 ಮಿ.ಮೀ ಆಗಿದ್ದರೆ, 24 ಮಿ.ಮೀ ರಷ್ಟು ಮಾತ್ರ ಮಳೆಯಾಗಿದೆ, ಕರಾವಳಿಯಲ್ಲಿ ಶೇ. 73 ರಷ್ಟು ವಾಡಿಕೆಯಂತೆ ಕಡಿಮೆ ಮಳೆಯಾಗಿದೆ.
ರೈತರು ಬಿತ್ತನೆ ಮಾಡಲು ಮಳೆಗಾಗಿ ಕಾಯುತ್ತಿದ್ದರೆ,ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳು ಮಳೆ ಇಲ್ಲದೆ ಒಣಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ತಿಂಗಳು ಮುಂಗಾರು ಕೈ ಕೊಡುವ ಸಾಧ್ಯತೆ ಇರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.






