ಬೈಂದೂರು: ಹಾಡಹಗಲೇ ಬಸ್ ಹತ್ತುವಾಗ ಚಿನ್ನದ ಬಳೆ ಕಟ್ ಮಾಡಿ ಓಡುತ್ತಿರುವ ಕಳ್ಳನನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು!
Views: 139
ಕನ್ನಡ ಕರಾವಳಿ ಸುದ್ದಿ: ಮಹಿಳೆಯೊಬ್ಬರು ಬಸ್ ಹತ್ತುವಾಗ ಚಿನ್ನದ ಬಳೆ ಕಟ್ ಮಾಡಿ ಓಡುತ್ತಿರುವ ಕಳ್ಳನನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದ ಘಟನೆ ಬೈಂದೂರು ತಾಲೂಕು ಆಡಳಿತ ಸೌಧದ ಎದುರಿನ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದಿದೆ.
ಮಧ್ಯಾಹ್ನ ಮಹಿಳೆಯೊಬ್ಬರು ಬೈಂದೂರು ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಭಟ್ಕಳ ಕಡೆಗೆ ಪ್ರಯಾಣಿಸಲು ಬಸ್ ಗಾಗಿ ಕಾದು ಕುಳಿತಿದ್ದರು. ಈ ಸಮಯದಲ್ಲಿ ಹತ್ತಾರು ಪ್ರಯಾಣಿಕರಿದ್ದರು.
ಮಹಿಳೆ ಬಸ್ ಹತ್ತುವ ಸಮಯದಲ್ಲಿ ಪ್ರಯಾಣಿಕರ ಸಾಮಾನ್ಯ ನೂಕುನುಗ್ಗಲು ಇದ್ದಿತ್ತು. ಈ ಸಮಯದಲ್ಲಿ ಮಹಿಳೆಯ ಕೈಯಲ್ಲಿದ್ದ ಚಿನ್ನದ ಬಳೆಯನ್ನು ಆಯುಧದಿಂದ ಕಟ್ ಮಾಡಿ ಕಳ್ಳತನಕ್ಕೆ ಯತ್ನಿಸಲಾಯಿತು. ಮಹಿಳೆ ಬೊಬ್ಬೆ ಹಾಕಿದಾಗ ವ್ಯಕ್ತಿ ಓಡಿತೊಡಗಿದ. ಸಾರ್ವಜನಿಕರು ಬೆನ್ನಟ್ಟಿ ಆತನನನ್ನು ಹಿಡಿದರು.
ಕಳತನಕ್ಕೆ ಯತ್ನಿಸಿರುವ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದಾಗ ಆತನ ಜತೆಯಲ್ಲಿರುವ ಮಹಿಳೆ ಹಿಂದಿ ಭಾಷೆಯಲ್ಲಿ ಮಾತನಾಡುತ್ತ ಜನರನ್ನು ಗದರಿಸಿ ಗೊಂದಲ ಮೂಡಿಸಿ ಆತ ತಪ್ಪಿಸಿಕೊಂಡು ಹೋಗಲು ಸಹಾಯ ಆಗುವಂತೆ ಮಾಡಿದಳು. ಇದರಿಂದ ಕೆರಳಿದ ಜನರು ಆತನಿಗೆ ಧರ್ಮದೇಟು ನೀಡಿ, ತಂಗುದಾಣದಲ್ಲಿ ಕಟ್ಟಿಹಾಕಿ ಮಹಿಳೆಯನ್ನು ತರಾಟೆಗೆ ತಗೆದುಕೊಂಡರು. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದರು. ಬೈಂದೂರು ಪೊಲೀಸರು ಸ್ಥಳಕಾಗಮಿಸಿ ವ್ಯಕ್ತಿಯನ್ನು ವಶಕ್ಕೆ ಪಡೆದು, ಕಳ್ಳನನ್ನು ಠಾಣೆಗೆ ಕರೆದುಕೊಂಡು ಹೋಗಾಲಾಯಿತು.






