ಬೈಂದೂರು ಬಿಜೆಪಿ ನಾಯಕರ ಭಿನ್ನಮತ ಬಹಿರಂಗ ಸ್ಫೋಟ!

Views: 193
ಕನ್ನಡ ಕರಾವಳಿ ಸುದ್ದಿ: ಬೈಂದೂರು ಬಿಜೆಪಿಯಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ಬಿನ್ನಮತ ಮಂಗಳವಾರ ಬಹಿರಂಗವಾಗಿ ಸ್ಫೋಟಗೊಂಡಿದೆ.
ಬೈಂದೂರು ಮಾಜಿ ಮಂಡಲಾಧ್ಯಕ್ಷ ಹಾಗೂ ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಮತ್ತು ಶಾಸಕ ಗುರುರಾಜ್ ಗಂಟಿಹೊಳೆ ನಡುವೆ ಉಡುಪಿಯ ಮಣಿಪಾಲದಲ್ಲಿ ನಡೆದ ಕಾರ್ಯಕ್ರಮದ ವೇಳೆ ವಾಗ್ವಾದ ಉಂಟಾಗಿ ಜಗಳಕ್ಕೂ ತಿರುಗಿದೆ.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ದಿಶಾ ಸಭೆಗೆ ಹಾಜರಾಗಲು ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕ್ಷೇತ್ರದ ರಾಜಕೀಯ ಬೆಳವಣಿಗೆ ಕುರಿತು ಶಾಸಕರು ಸಂಸದರ ಗಮನಕ್ಕೆ ತಂದಾಗ ದೀಪಕ್ ಶೆಟ್ಟಿ ಆಕ್ಷೇಪಿಸಿದ್ದು, ವಾಗ್ವಾದ ತೀವ್ರಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ರೈತ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ದೀಪಕ್ ಶೆಟ್ಟಿ, ಇತ್ತೀಚೆಗೆ ಪಟ್ಟಣ ಪಂಚಾಯತ್ ವಿಸ್ತರಣೆ ವಿರುದ್ಧ ನಡೆದ ಪ್ರತಿಭಟನೆಗಳ ಮುಖಂಡರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಪಕ್ಷದೊಳಗೆ ಪ್ರಭಾವಶಾಲಿ ಮುಖಂಡರಾಗಿ ಹೊರಹೊಮ್ಮಿದ್ದರು.
ಘಟನೆಯ ವೇಳೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಇತರರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
ಈ ಘಟನೆ ಬಳಿಕ ಬೈಂದೂರು ಬಿಜೆಪಿ ಒಳಗಿನ ಭಿನ್ನಮತ ಮತ್ತಷ್ಟು ಗಾಢವಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ರಾಜಕೀಯ ಸಮೀಕರಣ ಹೇಗೆ ಬದಲಾಗುತ್ತದೆ ಎಂಬ ಕುತೂಹಲ ತೀವ್ರಗೊಂಡಿದೆ.