ರಾಜಕೀಯ

‘ಬಿಜೆಪಿ ಹೈಕಮಾಂಡ್ ನಾಯಕರು ಕರೆಸಿ ಅವಮಾನಿಸಿ ಕಳಿಸಿದ್ದರಿಂದ ನೊಂದ ಸದಾನಂದಗೌಡರು ರಾಜಕೀಯ ನಿವೃತ್ತಿ…!

Views: 0

ಮಾಜಿ ಸಿಎಂ ಸದಾನಂದ ಗೌಡರು ಸಕ್ರಿಯ ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ನಿವೃತ್ತಿ ಘೋಷಿಸಿದ್ದಾರೆ. ಆದರೆ ಹೀಗೆ ಸದಾನಂದ ಗೌಡರು ರಾಜಕೀಯ ನಿವೃತ್ತಿ ಘೋಷಿಸಿ ತಮ್ಮ ಸ್ಫೋಟಕ ನಿರ್ಧಾರ ತಿಳಿಸಿದ ಬಳಿಕ, ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಎದುರಾಗಿದೆ. ಅಲ್ಲದೆ ಈ ಬಗ್ಗೆ ‘ಕೈ’ ಪಾಳಯ ಸಂಚಲನ ಸೃಷ್ಟಿಸುವ ಆರೋಪ ಮಾಡಿ, ಬಿಜೆಪಿ ಹೈಕಮಾಂಡ್ ವಿರುದ್ಧ ಹೊಸ ಅಸ್ತ್ರ ಪ್ರಯೋಗ ಮಾಡಿದೆ.

ಹೌದು, ನಿನ್ನೆ ಹಾಸನದಲ್ಲಿ ಮಾತನಾಡುತ್ತಾ ಮಾಜಿ ಸಿಎಂ ಸದಾನಂದ ಗೌಡರು ಸಕ್ರಿಯ ರಾಜಕಾರಣದಿಂದ ಹಿಂದಕ್ಕೆ ಸರಿಯುತ್ತಿರುವ ನಿರ್ಧಾರವನ್ನು ಪ್ರಕಟಿಸಿದ್ದರು. ‘ಚುನಾವಣಾ ರಾಜಕೀಯದಲ್ಲಿ ಮುಂದುವರಿಯದೇ ಇರಲು ನಿರ್ಧರಿಸಿದ್ದೇನೆ. ನನ್ನ 30 ವರ್ಷ ರಾಜಕೀಯ ಜೀವನದಲ್ಲಿ, ಪಕ್ಷವು ನನಗೆ ಎಲ್ಲವನ್ನೂ ನೀಡಿದೆ. ನಾನು 10 ವರ್ಷ ಶಾಸಕನಾಗಿ, 20 ವರ್ಷ ಸಂಸದನಾಗಿ ಮತ್ತು ಒಂದು ವರ್ಷ ಮುಖ್ಯಮಂತ್ರಿಯಾಗಿ 4 ವರ್ಷ ರಾಜ್ಯ ಪಕ್ಷದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ’ ಎಂದು ಹೇಳಿದ್ದರು. ಆದರೆ ಈಗ ಇದೇ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ಸ್ಫೋಟಕ ಆರೋಪ ಮಾಡಿದೆ.

‘ಬಿಜೆಪಿ ಹೈಕಮಾಂಡ್ ನಾಯಕರು ಕರೆಸಿ ಅವಮಾನಿಸಿ…’

ಅಂದಹಾಗೆ ಈ ಬಗ್ಗೆ ಇದೀಗ ಕರ್ನಾಟಕ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ‘ಬಿಜೆಪಿ ಹೈಕಮಾಂಡ್ ನಾಯಕರು ಕರೆಸಿ ಅವಮಾನಿಸಿ ಕಳಿಸಿದ್ದರಿಂದ ನೊಂದ ಸದಾನಂದಗೌಡರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. “ಸಂತೋಷ ಕೂಟ”ದ ದಾಳಕ್ಕೆ ಮುಂದಿನ ಲೋಕಸಭೆಯ ಟಿಕೆಟ್ ಸಿಗದೆ ಮತ್ತೊಮ್ಮೆ ಅವಮಾನವಾಗುವ ಸುಳಿವನ್ನು ಅರಿತು ಈಗಲೇ ಗುಡ್ ಬೈ ಹೇಳಿದ್ದಾರೆ. ಎಲ್ಲಾ ತಲೆಗಳನ್ನೂ ಉರುಳಿಸಿ “ನಾಯಕತ್ವ ಮುಕ್ತ ಬಿಜೆಪಿ” ಮಾಡುವಲ್ಲಿ ಸಂತೋಷ ಕೂಟ ಯಶಸ್ವಿಯಾಗಿದೆ.’ ಎಂದು ಗಂಭೀರ ಆರೋಪ ಮಾಡಿದೆ.

ಪಕ್ಷಕ್ಕೆ ಸೆಳೆಯುವಾಗ ಜಾಮೂನು, ನಂತರ ವಿಷ..’

ಹಾಗೇ ಮತ್ತೊಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಇನ್ನೊಂದು ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್, ‘ಅಧಿಕಾರದ ಹಪಹಪಿಯಲ್ಲಿರುವ ಬಿಜೆಪಿ ಪಕ್ಷಕ್ಕೆ ಸೆಳೆಯುವಾಗ ಜಾಮೂನು ಕೊಡ್ತಾರೆ, ನಂತರ ವಿಷ ಕೊಡುತ್ತಾರೆ.. ಇದನ್ನು ಬಿಜೆಪಿಯವರೇ ಹೇಳಿದ್ದು. ಈಗ ಬಿಜೆಪಿಯ ಜಾಮೂನು ತಿನ್ನುತ್ತಿರುವ ಕುಮಾರಸ್ವಾಮಿಯವರು ಮುಂದೆ ವಿಷ ತಿನ್ನಲು ತಯಾರಿರುವುದು ಒಳ್ಳೆಯದು! ಬಿಜೆಪಿಯವರು ಜಾಮೂನಿನ ಒಳಗೆ ವಿಷ ಬೆರೆಸಿರುತ್ತಾರೆ ಸತ್ಯ ವಲಸಿಗರಿಗೆ ಅರಿವಾಗಿದೆ, ಮುಂದೆ ಕುಮಾರಸ್ವಾಮಿಯವರಿಗೂ ಅರಿವಾಗಲಿದೆ.. ಅರಿವಾಗುವುದರೊಳಗೆ ಜೆಡಿಎಸ್ ಪ್ರಾಣ ಹೋಗಿರುತ್ತದೆ!!’ ಎಂದು ಆರೋಪಿಸಿದೆ.

Related Articles

Back to top button
error: Content is protected !!