ಜಾನುವಾರುಗಳಿಗೆ ಸಂಗ್ರಹಿಸಿದ ಹುಲ್ಲು ರಾಶಿಗೆ ಬೆಂಕಿ ಹಚ್ಚಿ ಪರಾರಿಯಾದ ಕಿಡಿಗೇಡಿಗಳು

Views: 0
ಕುಂದಾಪುರ : ಇಲ್ಲಿಗೆ ಸಮೀಪ ಕುಂಭಾಸಿ ಪಂಚಾಯಿತಿ ವ್ಯಾಪ್ತಿಯ ವಕ್ವಾಡಿ ರಸ್ತೆಯ ಚೇತನ್ ಕ್ಯಾಶ್ಯೊ ಪ್ಯಾಕ್ಟರಿಯ ಪಕ್ಕದ ನಿವಾಸಿ ಸಾವಯವ ಕೃಷಿಕ ಶ್ರೀ ಅಶೋಕ್ ಶೆಟ್ಟಿಗಾರ ಅವರ ಮನೆಯ ಹಿಂಬದಿಯಲ್ಲಿ ಮಳೆಗಾಲದಲ್ಲಿ ಜಾನುವಾರುಗಳಿಗೆ ತಿನ್ನಲು ಸಂಗ್ರಹಿಸಿದ ಹುಲ್ಲಿನ ರಾಶಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ.

ಸುಮಾರು ರಾತ್ರಿ 2 ಗಂಟೆ ಸಮಯಕ್ಕೆ ಮನೆಯ ಹಿಂದಿನ ಹುಲ್ಲಿನ ರಾಶಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮನೆಯವರು ಗಾಬರಿಗೊಂಡು ಹೊರಬರುತ್ತಿರುವಾಗ ಬೈಕ್ ಸ್ಟಾರ್ಟ್ ಮಾಡಿಕೊಂಡು ಕಿಡಿಗೇಡಿಗಳು ಅತಿ ವೇಗದಲ್ಲಿ ಪರಾರಿಯಾಗಿದ್ದಾರೆ. ಕೂಡಲೇ ಕುಂದಾಪುರ ಅಗ್ನಿ ಶಾಮಕದವರಿಗೆ ಪೋನ್ ಮಾಡಿ, ಅವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಆಹುತಿಗೆ 2 ತೆಂಗಿನ ಮರ ಕೊಟ್ಟಿಗೆಯ ಕಿಟಕಿಯ ಗಾಜುಗಳು ಹಾನಿಗೊಂಡಿದೆ. ಮನೆಯ ಮಹಡಿಯ ಮೇಲೆ ಸಂಗ್ರಹಿದ ಹುಲ್ಲು ರಾಶಿಗೆ ಬೆಂಕಿ ತಗುಲದಂತೆ ನೀರನ್ನು ಹಾಕಿದ್ದರಿಂದ ಸಂಭವಿಸಬಹುದಾದ ದೊಡ್ಡ ಅನಾಹುತದಿಂದ ಪಾರಾಗಿದೆ. ಈ ಘಟನೆಯಿಂದ ಸುಮಾರು 60ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಪೆಟ್ರೋಲ್ ಬಾಟ್ಲಿ ಸಿಕ್ಕಿರುವುದರಿಂದ ಉದ್ದೇಶ ಪೂರ್ವಕವಾಗಿ ಕಿಡಿಗೇಡಿಗಳ ಕೃತ್ಯದ ಪುಷ್ಠಿ ನೀಡಿದೆ. ಕುಂದಾಪುರ ಪೊಲಿಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
. ಇವರ ಕಂಪೌಂಡ್ ಪಕ್ಕದ ವಿಶಾಲವಾದ ನಿಜ೯ನ ಪ್ರದೇಶದಲ್ಲಿ ಕಳೆದ ಕೆಲವು ವಷ೯ಗಳಿಂದಲೂ ಹಗಲು ರಾತ್ರಿ ಎನ್ನದೆ ಗಾಂಜಾ ಸೇವನೆ, ಕುಡಿತದ ಪಾಟಿ೯ ಸದಾ ನಡೆಯುತ್ತಿದೆ. ಹತ್ತಿರದಲ್ಲಿ ಸರಕಾರಿ ಹುಡುಗಿಯರ ಹಾಸ್ಟೆಲ್ ಇದ್ದು, ಇಲ್ಲಿನ ಹುಡುಗಿಯರಿಗೆ ಬೀದಿಯಲ್ಲಿ ನಿಂತು ರೇಗಿಸುತ್ತಿರುವವರ ಕಿಡಿಗೇಡಿಗಳ ತಂಡಕ್ಕೆ ಕಡಿವಾಣ ಹಾಕಲು, ಸ್ಥಳೀಯ ಸಮಾಜ ಸೇವಕರೊಬ್ಬರು ಈ ಹಿಂದೆ ಠಾಣೆಗೆ ದೂರನ್ನು ನೀಡಿದ್ದು, ಎಚ್ಚೆತ್ತ ಪೊಲೀಸರು ಗಸ್ತು ತಿರುಗಾಟದಿಂದ ತಂಡದ ಹಾವಳಿ ಸ್ವಲ್ಪ ಕಡಿಮೆಯಾಗಿತ್ತು. ಇತ್ತೀಚೆಗೆ ಮತ್ತೆ ಈ ಪ್ರದೇಶದಲ್ಲಿ ಅಲ್ಲಲ್ಲಿ ಬೆಂಕಿ ಹತ್ತಿ ಉರಿಯುವಿಕೆ, ಕಾರು ಮತ್ತು ಬೈಕ್ ನಲ್ಲಿ ಬಂದು ಕುಡಿತದ ಪಾಟಿ೯ ಸದಾ ನಡೆಯುತ್ತಿದೆ. ಶ್ರೀಸಾಮಾನ್ಯರು ಈ ಪ್ರದೇಶದಲ್ಲಿ ತಿರುಗಾಡಲು ಭಯಭೀತರಾಗಿದ್ದಾರೆ. ಮುಂದೆ ಇಂತಹ ಅಹಿತಕರ ಘಟನೆ ವ್ಯಾಪಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ.






