ಕೌಟುಂಬಿಕ ಕಲಹ :ಮೂವರು ಹೆಣ್ಣುಮಕ್ಕಳು, ಪತ್ನಿಯನ್ನು ಕೊಂದ ಪತಿ ಪರಾರಿ
Views: 55
ಕನ್ನಡ ಕರಾವಳಿ ಸುದ್ದಿ: ಧರ್ಮಪತ್ನಿ ಹಾಗೂ ಮೂವರು ಹೆಣ್ಣುಮಕ್ಕಳನ್ನು ಭೀಕರವಾಗಿ ತನ್ನ ಮನೆಯಲ್ಲೇ ಹತ್ಯೆಗೈದ ಪಾಪಿ ಪತಿರಾಯ, ಕೊಲೆಯ ಮರುದಿನ ಏನೂ ತಿಳಿಯದ ತನ್ನ ವಯಸ್ಸಾದ ತಂದೆಗೆ ಬಿಸಿ ಬಿಸಿ ಟೀ ಮಾಡಿಕೊಟ್ಟು ಪರಾರಿಯಾದ ಘೋರ ಘಟನೆ ರಾಜಸ್ಥಾನದ ಜೈಪುರದ ಕಾರ್ಧಾನಿಯಲ್ಲಿ ವರದಿಯಾಗಿದೆ.
ಝಾನ ಪತ್ನಿ ಗೀತಾ ಝಾ, ಪುತ್ರಿಯರಾದ ನಂದಿನಿ (23), ರಾಧಿಕಾ (18) ಮತ್ತು 14 ವರ್ಷದ ಮತ್ತೊಬ್ಬ ಮಗಳು ಎಂದು ಗುರುತಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ, ಮೊದಲ ಮಹಡಿಯ ರೂಮ್ನಲ್ಲಿ ಗೀತಾ ಝಾ ಮೃತದೇಹ ಹಾಗೂ ಕೆಳಮಹಡಿಯ ಪ್ರತ್ಯೇಕ ಕೊಠಡಿಗಳಲ್ಲಿ ಮೂವರು ಪುತ್ರಿಯರ ರಕ್ತಸಿಕ್ತ ಮೃತದೇಹಗಳು ಪತ್ತೆಯಾಗಿವೆ ಎಂದಿದ್ದಾರೆ. ಮನೆಯವರೆಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಆರೋಪಿ, ತೂಕದ ಕಲ್ಲಿನಿಂದ ಎಲ್ಲರ ತಲೆಯ ಮೇಲೆ ಎಸೆದು ಭೀಕರವಾಗಿ ಕೊಲೆ ಮಾಡಿದ್ದಾನೆ. ಹತ್ಯೆಗೆ ಬಳಸಿದ ಕಲ್ಲು ಅಲ್ಲೇ ಸಿಕ್ಕಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಭೀಕರ ಹತ್ಯೆಗೈದ ಬಳಿಕ ಆರೋಪಿ ರಾಹುಲ್ ಝಾ ತೋರಿರುವ ವರ್ತನೆ ಸ್ವತಃ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ. ಮಧ್ಯರಾತ್ರಿ ಇಡೀ ಕುಟುಂಬವನ್ನು ಮುಗಿಸಿದ ನರಹಂತಕ, ಬೆಳಗ್ಗೆಯವರೆಗೂ ಮೃತದೇಹಗಳ ಜತೆಯಲ್ಲೇ ಇದ್ದು, 7 ಗಂಟೆಗೆ ಹಾಲ್ಗೆ ಹೋಗಿ ವಯಸ್ಸಾದ ತನ್ನ ತಂದೆ ಲಕ್ಷ್ಮೀನಾಥ್ಗೆ ಬಿಸಿ ಬಿಟಿ ಟೀ ಮಾಡಿಕೊಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದ ರಾಹುಲ್, ಈ ಘಟನೆಗೆ ಕೆಲ ದಿನಗಳಷ್ಟೇ ಮುಂಚಿತವಾಗಿ ಗುಜರಾತ್ನಿಂದ ಜೈಪುರಕ್ಕೆ ವಾಪಾಸ್ ಆಗಿದ್ದ. ಪತ್ನಿ ಗೀತಾ ಝಾ ಮನೆಯ ಮೊದಲ ಮಹಡಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರೆ, ಹಿರಿಯ ಮಗಳು ನಂದಿನಿ ವ್ಯಾಸಂಗದ ಜತೆಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ವರದಿಯಾಗಿದೆ.
ಆರೋಪಿ ಕೊಲೆಗೈಯುವ ಮೂರು ದಿನಗಳ ಮುನ್ನ ನೆರೆಹೊರೆಯವರಿಂದ 25,000 ರೂ. ಸಾಲ ಪಡೆದಿದ್ದ ಎಂಬ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತೀವ್ರ ಹಣಕಾಸಿನ ಬಿಕ್ಕಟ್ಟು ಅಥವಾ ಕೌಟುಂಬಿಕ ಕಲಹವೇ ಈ ಭೀಕರ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಚುರುಕುಗೊಳಿಸಿರುವ ಖಾಕಿ ಪಡೆ, ತಲೆಮರಿಸಿಕೊಂಡಿರುವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.






