ಕುಂದಾಪುರದಿಂದ ತಿರುಪತಿಗೆ ನೂತನ ರೈಲು ಸೇವೆ ಆರಂಭ

Views: 930
ಕುಂದಾಪುರ: ಉಡುಪಿ – ಕುಂದಾಪುರದಿಂದ ತಿರುಪತಿಗೆ ನೇರ ರೈಲು ಸೇವೆಗೆ ಭಾರತೀಯ ರೈಲ್ವೆ ಅನುಮತಿ ಸೂಚಿಸಿದೆ. ತಿರುಪತಿ ಮತ್ತು ಉಡುಪಿ-ಕುಂದಾಪುರ ನಡುವೆ ನೇರ ರೈಲು ಸೇವೆ ಬೇಕು ಎನ್ನುವ ದಶಕಗಳ ಕನಸು ಉಡುಪಿ ಸಂಸದರ ಅವಿರತ ಪ್ರಯತ್ನದಿಂದ, ಕುಂದಾಪುರ ರೈಲು ಹಿತರಕ್ಷಣಾ ಸಮಿತಿಯ ಹೋರಾಟದ ಫಲವಾಗಿ ರೈಲು ಸೇವೆ ಆರಂಭವಾಗಿದೆ.
ಹೈದರಾಬಾದಿನ ಕಾಚಿಗುಡದಿಂದ ಹೊರಟು ತಿರುಪತಿಯ ರೇಣಿಗುಂಟ ನಿಲ್ದಾಣದ ಮೂಲಕ ಮಂಗಳೂರಿಗೆ ಬರುತಿದ್ದ ಕಾಚಿಗುಡ-ಮಂಗಳೂರು ವಾರಕ್ಕೆರಡು ದಿನದ ರೈಲನ್ನು ಉಡುಪಿ ಕುಂದಾಪುರದ ಮೂಲಕ ಮುರುಡೇಶ್ವರಕ್ಕೆ ವಿಸ್ತರಣೆ ಮಾಡುವ ಸಂಸದರ ಕೋರಿಕೆಯನ್ನು ಮನ್ನಿಸಿ ಭಾರತೀಯ ರೈಲ್ವೆ ಆದೇಶ ಹೊರಡಿಸಿದೆ.
ಬುಧವಾರ ಮತ್ತು ಶನಿವಾರ ಸಂಜೆ 5 ಗಂಟೆಗೆ ಕುಂದಾಪುರ ಉಡುಪಿ ಮಾರ್ಗದ ಮೂಲಕ ಹೊರಡುವ ರೈಲು ಮರುದಿನ ಬೆಳಗ್ಗೆ 11 ಗಂಟೆಗೆ ತಿರುಪತಿ ಬಳಿಯ ರೇಣಿಗುಂಟ ನಿಲ್ದಾಣದ ಮೂಲಕ ಹೈದರಾಬಾದಿನ ಕಾಚಿಗುಡ ತಲುಪಲಿದೆ.
ಮುರುಡೇಶ್ವರದ ಮೂಲಕ ಕುಂದಾಪುರ, ಉಡುಪಿ, ಸುರತ್ಕಲ್, ಮೂಲ್ಕಿ ನಗರಗಳು, ಕೊಯಂಬತ್ತೂರು, ತಿರುಪತಿ, ಮಂತ್ರಾಲಯ ಸಮೀಪದ ದೊನೆ ಜಂಕ್ಷನ್ ಸೇರಿದಂತೆ ಹೈದರಾಬಾದ್ವರೆಗೆ ರೈಲು ಸಂಪರ್ಕ ದೊರಕಿದೆ.
ವಿಜಯ ದಶಮಿಯ ಶುಭ ಸಂದರ್ಭದಲ್ಲಿ ಕರಾವಳಿಗೆ ರೈಲು ಘೋಷಣೆಯಾಗಬೇಕು ಎನ್ನುವ ಕಾರಣಕ್ಕೆ ಸತತವಾಗಿ ದಿಲ್ಲಿಯ ಅಧಿಕಾರಿಗಳ ಜತೆ ಸಭೆಯ ಮೇಲೆ ಸಭೆ ನಡೆಸಿದ ಪರಿಣಾಮ ವಿಜಯದಶಮಿ ಸಂದರ್ಭದಲ್ಲಿ ಈ ರೈಲಿನ ವಿಸ್ತರಣೆಗೆ ಆದೇಶ ದೊರಕಿದೆ.ಉಡುಪಿ ಸಂಸದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕರಾವಳಿಯ ರೈಲು ಪ್ರಯಾಣಿಕರ ಪರವಾಗಿ ಅಭಿನಂದಿಸುತ್ತೇನೆ ಎಂದು ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.







