ಕುಂದಾಪುರ:ಕಲ್ಲಿನಿಂದ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಬೆದರಿಕೆ, ಪ್ರಕರಣ ದಾಖಲು
Views: 191
ಕನ್ನಡ ಕರಾವಳಿ ಸುದ್ದಿ:ಕುಂದಾಪುರ ಸಮೀಪ ತಲ್ಲೂರು ಗ್ರಾಮದ ನಿವಾಸಿಯೊಬ್ಬರ ಮನೆಗೆ ಇಬ್ಬರು ಬಂದು ಕಲ್ಲಿನಿಂದ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಚಂದ್ರ ಎಂಬವರಿಗೆ ಆರೋಪಿಗಳಾದ ಮಂಜುನಾಥ ಹಾಗೂ ಚಂದ್ರಕಲಾ ಎಂಬವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಘಟನೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪಿರ್ಯಾದಿದಾರರ ಮನೆಯ ಪಕ್ಕದಲ್ಲಿ ವಾಸವಿರುವ ಆರೋಪಿತರಾದ ಮಂಜುನಾಥ ಮತ್ತು ಅವರ ಪತ್ನಿ ಚಂದ್ರಕಲಾ ರವರು ದಿನಾಂಕ 07/12/2025 ರಂದು ಪಿರ್ಯಾದಿದಾರರು ಒಬ್ಬರೇ ಮನೆಯಲ್ಲಿರುವಾಗ ರಾತ್ರಿ 8:00 ಗಂಟೆಯಿಂದ 9:00 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಮನೆಗೆ ಕಲ್ಲು ಹೊಡೆಯುತ್ತಿದ್ದು ಶಬ್ದ ಕೇಳಿ ಪಿರ್ಯಾದಿದಾರರು ಶಬ್ದ ಬಂದ ಕಡೆಗೆ ಬಂದಾಗ ಅವರಿಗೂ ಕೂಡ ಆರೋಪಿತರು ಕಲ್ಲಿನಿಂದ ಹೊಡೆದು ಪಿರ್ಯಾದಿದಾರರು ವಾಸವಿದ್ದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಮರದ ದೊಣ್ಣೆಯಿಂದ ಹಲ್ಲೆ ಮಾಡಿರುತ್ತಾರೆ. ಆಗ ಪಿರ್ಯಾದಿದಾರರು ಮನೆಯ ಒಳಗಡೆ ಹೋಗಿ ಬಾಗಿಲನ್ನು ಹಾಕಿಕೊಂಡಾಗ ಆರೋಪಿ ಮಂಜುನಾಥನು ಬಾಗಿಲನ್ನು ತೆಗೆಯುವಂತೆ ಬಾಗಿಲನ್ನು ಬಡಿದಿರುವುದಾಗಿದೆ.ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.






