ಅವಧಿ ಮುಗಿದು ಮೂರು ವರ್ಷದ ನಂತರ ಜಿಲ್ಲಾ, ತಾಲೂಕು ಪಂಚಾಯಿತಿಗೆ ಶೀಘ್ರವೇ ಚುನಾವಣೆ ?

Views: 49
ಬೆಂಗಳೂರು :ಕರ್ನಾಟಕದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ಅವಧಿ ಮುಗಿದು ಬರೋಬ್ಬರಿ ಮೂರು ವರ್ಷ ಆಗಿದೆ. 2021 ರ ಏಪ್ರಿಲ್ ನಲ್ಲಿಯೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಯಬೇಕಿತ್ತು. ಆದರೆ, ಅವಧಿ ಮುಗಿದಿದ್ದರೂ ಹೊಸ ಚುನಾವಣೆ ಇನ್ನೂ ಸಹ ನಡೆದಿಲ್ಲ. ವಿವಿಧ ಕಾರಣಗಳಿಂದ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ಹೈಕೋರ್ಟ್ ನಲ್ಲಿದೆ. ಹೀಗಾಗಿ ಚುನಾವಣೆಗೆ ವಿಳಂಬವಾಗುತ್ತಿದೆ. ಹಾಗೇ ಈ ಹಿಂದಿನ ಸರ್ಕಾರ ಕೆಲ ಕಾರಣಾಂತರಗಳಿಂದ ಚುನಾವಣೆಯನ್ನು ಮುಂದೂಡತ್ತಲೇ ಬಂದಿತ್ತು.
ಇದೀಗ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ತಾಲೂಕು, ಜಿಲ್ಲಾ ಪಂಚಾಯಿತಿಗಳ ಚುನಾವಣೆ ಹಾಗೂ ಬಿಬಿಎಂಪಿ ಮತ್ತಿತರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸಿದ್ದರಾಮಯ್ಯ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಆದಷ್ಟು ಬೇಗ ನಡೆಸುತ್ತೇವೆ ಎಂದಿದ್ದಾರೆ.
ತಾಲ್ಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಚುನಾವಣೆ ನಡೆಸಲು ಸಿದ್ಧವಿದೆ. ಕ್ಷೇತ್ರ ಪುನರ್ವಿಗಂಡಣೆಗೆ ಜನವರಿವರೆಗೆ ಗಡುವು ಇದ್ದು, ಈ ಬಗ್ಗೆ ಅಡ್ವೋಕೇಟ್ ಜನರಲ್ ಜೊತೆ ಚರ್ಚೆ ಮಾಡಿ ಅವರು ಕಾನೂನು ಪ್ರಕಾರ ಏನು ಮಾಡಬೇಕೆಂದು ಹೇಳುತ್ತಾರೋ ಹಾಗೆ ಮಾಡುತ್ತೇವೆ. ಪುನರ್ ವಿಂಗಡಣೆಯಾದ ಮೇಲೆ ಮೀಸಲಾತಿ ಮಾಡಲೇಬೇಕಾಗುತ್ತದೆ ಎಂದಿದ್ದಾರೆ.
ಚುನಾವಣೆ ಯಾವಾಗ ನಡೆಯಬಹುದು ?
ಈಗ ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರ ಬಂದು ವರ್ಷದ ಆಗಿದ್ದು, ಇದೀಗ ಜೂನ್ 4ರಂದು ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಚುನಾವಣೆಗಳನ್ನು ನಡೆಸಲು ಮುಂದಾಗಿದೆ. ಆದ್ರೆ, ಅದ್ಯಾವಾಗ ನಡೆಸುತ್ತಾರೋ ಗೊತ್ತಿಲ್ಲ. ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಸಂಬಂಧ ಪ್ರಕರಣಗಳು ಕೋರ್ಟ್ ನಲ್ಲಿ ಇರುವುದರಿಂದ ಇನ್ನಷ್ಟು ತಿಂಗಳು ವಿಳಂಬವಾಗುವ ಸಾಧ್ಯತೆಗಳು ಇವೆ. ಒಂದು ವೇಳೆ ಸರ್ಕಾರ ಈ ಬಗ್ಗೆ ಮುತುವರ್ಜಿ ವಹಿಸಿ ಕೋರ್ಟ್ ಕಾನೂನು ಪ್ರಕ್ರಿಯೆ ಮುಗಿಸುವುದರ ಜೊತೆಗೆ ಮೀಸಲಾತಿ ನಿಗದಿಪಡಿಸಿದರೆ ಮುಂದಿನ ಒಂದೆರೆಡು ತಿಂಗಳಲ್ಲೇ ಚುನಾವಣೆ ನಡೆಸಬಹುದು.






