ಸಿ.ಪಿ ಯೋಗೇಶ್ವರ್ ಷರತ್ತಿಲ್ಲದೆ ಕಾಂಗ್ರೆಸ್ ಸೇರ್ಪಡೆ :ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

Views: 33
ಬೆಂಗಳೂರು :ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಸಿ.ಪಿ ಯೋಗೇಶ್ವರ್ ಅವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ, ಏನೂ ಬೇಕಾದರು ಆಗಬಹುದು. ಇದು ಸಾಧ್ಯತೆಯ ಕಲೆ ಎಂದು ವ್ಯಾಖ್ಯಾನಿಸಿದರು.
ಇಂದು ಬೆಳಿಗ್ಗೆ ಸಿ.ಪಿ ಯೋಗೇಶ್ವರ್ ಅವರು ನನ್ನ ಮನೆಗೆ ಬಂದು ಮಾತನಾಡಿ ಕಾಂಗ್ರೆಸ್ ಸೇರಲು ಬಯಸಿರುವುದಾಗಿ ಹೇಳಿದರು. ತಕ್ಷಣವೇ ನಾನು ವರಿಷ್ಠರನ್ನು ಸಂಪರ್ಕಿಸಿ ಮಾತನಾಡಿದೆ. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಚರ್ಚಿಸಿ ವರಿಷ್ಠರ ಅನುಮತಿ ಪಡೆದು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡಿದ್ದೇವೆ. ಅವರು ಯಾವುದೇ ಷರತ್ತು ಹಾಕಿಲ್ಲ ಎಂದರು.
ಕಾಂಗ್ರೆಸ್ ಸೇರುವ ಮೂಲಕ ಯೋಗೇಶ್ವರ್ ಮರಳಿ ಗೂಡಿಗೆ ಬಂದಿದ್ದಾರೆ. ಯೋಗೇಶ್ವರ್ ರಾಜಕಾರಣ ಮಾಡಿದ್ದು ಕಾಂಗ್ರೆಸ್ನಿಂದಲೇ ಬೇರೆ ಬೇರೆ ಚಿಹ್ನೆಯಡಿ ಕೆಲಸ ಮಾಡಿ ಮತ್ತೆ ಕಾಂಗ್ರೆಸ್ಗೆ ಬಂದಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಕೊರತೆಯಿಂದ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತೆ ಎಂಬ ಪ್ರಶ್ನೆಗೆ ಕಾಂಗ್ರೆಸ್ಗೆ ಎಂದಿಗೂ ಅಭ್ಯರ್ಥಿಗಳ ಕೊರತೆ ಕಾಣುವುದಿಲ್ಲ. ನಾನೂ ಇಲ್ಲದಿದ್ದರೂ ಪಕ್ಷ ನಡೆಯುತ್ತದೆ ಎಂದ ಅವರು ರಾಜಕೀಯ ಸನ್ನಿವೇಶ ಬದಲಾದ ಕಾರಣಕ್ಕೆ ಯೋಗೇಶ್ವರ್ ನಮ್ಮೊಡನೆ ಕೈ ಜೋಡಿಸಿದ್ದಾರೆ ಎಂದರು.
ಜೆಡಿಎಸ್ ಕ್ಷೇತ್ರವಾಗಿದ್ದ ಚನ್ನಪಟ್ಟಣವನ್ನು ಕುಮಾರಸ್ವಾಮಿ ಸೋಲಿನ ಭೀತಿಯಿಂದ ಬಿಜೆಪಿಗೆ ಬಿಟ್ಟುಕೊಡಲು ಮುಂದಾಗಿದ್ದರು. ಇದರಿಂದ ಅವರು ಎಷ್ಟು ದುರ್ಬಲರಾಗಿದ್ದಾರೆ ಎಂದು ಗೊತ್ತಾಗುತ್ತದೆ. ಹೀಗಿದ್ದರೂ ಚನ್ನಪಟ್ಟಣವನ್ನು ಗೆಲ್ಲುತ್ತೇವೆ ಎಂದು ಹೇಳಲು ಸಾಧ್ಯವೇ ಎಂದರು.
ನಾಳೆ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ
ಇಂದು ಹೈಕಮಾಂಡ್ಗೆ ಉಪಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಹೈ ಕಮಾಂಡ್ಗೆ ಕಳುಹಿಸಲಾಗುವುದು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಟ್ಟಿ ಅಂತಿಮ ಮಾಡುತ್ತಾರೆ. ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ಡಿ.ಕೆ ಸುರೇಶ್ ಅವರಿಗೆ ವಹಿಸಲಾಗಿತ್ತು. ಡಿ.ಕೆ ಸುರೇಶ್ ಅವರು ಈಗಾಗಲೇ ಖರ್ಗೆ ಅವರ ಬಳಿ ಮಾತನಾಡಿದ್ದಾರೆ. ನಾಳೆ ಬೆಳಿಗ್ಗೆ ಯೋಗೇಶ್ವರ್ ನಾಮಪತ್ರ ಸಲ್ಲಿಸುವರು ಎಂದರು.