ರಾಜಕೀಯ

ಶೀಘ್ರವೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ !

Views: 49

ಲೋಕಸಭೆ ಚುನಾವಣೆಗೂ ಮುನ್ನ ಮತ್ತೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿಗೆ ಜಾರಿಯಾಗುವುದಕ್ಕೂ ಮುಂಚೆ ಕೇಂದ್ರ ಸರ್ಕಾರವು ಯಾವಾಗ ಬೇಕಾದರೂ ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

2019ರಲ್ಲಿ ಈ ವಿಧೇಯಕವನ್ನು ಅಂಗೀಕರಿಸಲಾಗಿತ್ತು. ಇದಕ್ಕೆ ರಾಷ್ಟ್ರಪತಿ ಅನುಮೋದನೆಯೂ ದೊರಕಿದ್ದರಿಂದ ಕಾನೂನಿನ ರೂಪ ಪಡೆದುಕೊಂಡಿತ್ತು. ಆದರೆ ಈವರೆಗೂ ಇದು ಅನುಷ್ಠಾನಗೊಂಡಿಲ್ಲ

ಸಿಎಎ ಕುರಿತಾದ ನಿಯಮಗಳನ್ನು ಪ್ರಕಟಿಸಿದ ಬಳಿಕ ಈ ವರ್ಷ ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿ ಮಾಡಲಾಗುವುದು ಎಂದು ಕೇಂದ್ರ ಸಚಿವ ಅಮಿತ್ ಶಾ ಅವರು ಫೆಬ್ರವರಿ ಆರಂಭದಲ್ಲಿ ತಿಳಿಸಿದ್ದರು

“ಸಿಎಎ ನಿಯಮ ಪ್ರಕಟಿಸುವ ದಿನಾಂಕ ಹೇಳಲು ಸಾಧ್ಯವಿಲ್ಲ. ಆದರೆ ನೀತಿ ಸಂಹಿತೆ ಜಾರಿಗೂ ಮುನ್ನವೇ ನೋಟಿಫೈ ಮಾಡಲಾಗುತ್ತದೆ” ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಮಾರ್ಚ್ ಎರಡನೇ ವಾರದ ಬಳಿಕ ಕೇಂದ್ರ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ. ವೇಳಾಪಟ್ಟಿ ಬಹಿರಂಗಗೊಳ್ಳುತ್ತಿದ್ದಂತೆಯೇ ದೇಶಾದ್ಯಂತ ಮಾದರಿ ನೀತಿ ಸಂಹಿತೆ ಅಸ್ತಿತ್ವಕ್ಕೆ ಬರಲಿದೆ. ಇದರ ನಂತರ ಸರ್ಕಾರಗಳು ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡುವಂತಿಲ್ಲ

ಸಿಎಎ ಅನ್ನು ಅಂಗೀಕರಿಸಿ ನಾಲ್ಕು ವರ್ಷಗಳಾದರೂ ಅದರ ನಿಯಮಗಳನ್ನು ಪ್ರಕಟಿಸದ ಕಾರಣ ಕಾಯ್ದೆ ಜಾರಿ ಸಾಧ್ಯವಾಗಿಲ್ಲ. ಕಾನೂನಿನ ಅಡಿಯಲ್ಲಿ ಅರ್ಜಿದಾರ ಭಾರತದ ಪೌರತ್ವ ಪಡೆಯಲು ತನ್ನ ಅರ್ಹತೆ ಮತ್ತು ದೃಢೀಕರಣಗಳನ್ನು ಸಾಬೀತುಪಡಿಸುವ ಪುರಾವೆಗಳನ್ನು ನಿರ್ದಿಷ್ಟಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರ ವಲಸಿಗರು ಭಾರತದ ಪೌರತ್ವ ಪಡೆಯಲು ಸಿಎಎ ಅವಕಾಶ ನೀಡುತ್ತದೆ. ಹಿಂದೂ, ಸಿಖ್, ಕ್ರೈಸ್ತ, ಜೈನ, ಬೌದ್ಧ ಹಾಗೂ ಪಾರ್ಸಿ ಸಮುದಾಯಗಳ ಜನರು ಭಾರತದ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ಕಾಯ್ದೆಯಲ್ಲಿ ಉಲ್ಲೇಖಿಸಿರುವ ಧರ್ಮಗಳಿಗೆ ಸೇರಿದ, ಹಾಗೂ ತಾವು 2014ರ ಡಿಸೆಂಬರ್‌ 31ಕ್ಕೂ ಮುಂಚೆಯಿಂದ ಈ ದೇಶಗಳಿಂದ ಬಂದಿರುವುದನ್ನು ಸಾಬೀತುಪಡಿಸುವ ಪೂರಕ ದಾಖಲೆಗಳನ್ನು ಅವರು ಒದಗಿಸಬೇಕಾಗುತ್ತದೆ. ಯಾರಾದರೂ ತಮ್ಮ ಮಗುವನ್ನು ಸರ್ಕಾರಿ ಶಾಲೆಗೆ ದಾಖಲಿಸಿದ್ದರೆ, ಅದರಲ್ಲಿ ತಮ್ಮ ಧರ್ಮವನ್ನು ಘೋಷಿಸಿರುತ್ತಾರೆ. 2014ರ ಡಿ 31ಕ್ಕೂ ಮುನ್ನ ಆಧಾರ್ ಕಾರ್ಡ್ ಪಡೆದುಕೊಂಡಿದ್ದರೆ ಮತ್ತು ತಮ್ಮ ಧರ್ಮವನ್ನು ಘೋಷಿಸಿಕೊಂಡಿದ್ದರೆ, ಅದನ್ನು ಸ್ವೀಕರಿಸಲಾಗುತ್ತದೆ. ಅದೇ ರೀತಿ ಧರ್ಮವನ್ನು ಘೋಷಿಸುವ ಯಾವುದೇ ಮಾದರಿಯ ಸರ್ಕಾರಿ ದಾಖಲೆ ಸ್ವೀಕಾರಾರ್ಹವಾಗಿರುತ್ತದೆ ಎಂದು ಮೂಲಗಳು ವಿವರಿಸಿವೆ.

 

Related Articles

Back to top button