ಶಾಲಾ ಪ್ರವೇಶಕ್ಕೆ ಲಂಚಕ್ಕೆ ಬೇಡಿಕೆ: ಸವಣೂರು ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಲೋಕಾಯುಕ್ತ ಬಲೆಗೆ

Views: 53
ಕನ್ನಡ ಕರಾವಳಿ ಸುದ್ದಿ: ಶಾಲಾ ಪ್ರವೇಶಕ್ಕೆ ಲಂಚಕ್ಕೆ ಬೇಡಿಕೆ ಇಟ್ಟ ಸವಣೂರು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರೊಬ್ಬರು ಪೋಷಕರಿಂದ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಸೋಮವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಸವಣೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಮುಖ್ಯೋಪಾದ್ಯಾಯ ಮಂಜುನಾಥ ಕಲ್ಲಪ್ಪ ಕಾಟೇನಹಳ್ಳಿ ಲೋಕಾಯುಕ್ತರ ಬಲೆಗೆ ಬಿದ್ದ ಪ್ರಭಾರಿ ಮುಖ್ಯ ಶಿಕ್ಷಕ.
ಸವಣೂರು ಖಾದರಭಾಗ ಓಣಿಯ ಅಕ್ಟರ್ ಅಬ್ದುಲ್ ಹಮೀದ ಕಂದಿಲವಾಲೆ ತಮ್ಮ ಎರಡನೇ ಮಗನ ಪ್ರವೇಶಕ್ಕೆ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಮುಖ್ಯೋಪಾದ್ಯಾಯ ಮಂಜುನಾಥ ಕಲ್ಲಪ್ಪ ಕಾಟೇನಹಳ್ಳಿ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಶಾಲೆಯ ಪ್ರವೇಶಕ್ಕೆ ರೂ.50ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಕೊನೆಗೆ ರೂ.10ಸಾವಿರಕ್ಕೆ ಒಪ್ಪಿಕೊಂಡು, ಮೇ 17 ರಂದು ರೂ.5 ಸಾವಿರಗಳನ್ನು ಮುಂಗಡವಾಗಿ ಪಡೆದು, ಬಾಕಿ 5 ಸಾವಿರ ರೂಗಳನ್ನು ಸೋಮವಾರ ಸವಣೂರು ನಗರದ ಹಾವಣಗಿ ಪ್ಲಾಟ್ನ ತಮ್ಮ ಮನೆಯಲ್ಲಿ ಲಂಚ ಪಡೆದು ಕೊಳ್ಳುತ್ತಿರುವಾಗಲೇ ಲೋಕಾಯುಕ್ತರು ರೆಡ್ ಹ್ಯಾಂಡಾಗಿ ಹಿಡಿದು ಬಂಧಿಸಿದ್ದಾರೆ.
ಪ್ರಕರಣದ ತನಿಖೆಯ ಮಾರ್ಗದರ್ಶನವನ್ನು ಲೋಕಾಯುಕ್ತ ಎಸ್ಪಿ ಎಮ್. ಎಸ್. ಕೌಲಾಪುರೆ, ವಹಿಸಿಕೊಂಡಿದ್ದರು.ಮತ್ತು ತಂಡದವರಿಂದ ಕಾರ್ಯಾಚರಣೆ ನಡೆದಿತ್ತು.ಪ್ರಭಾರ ಮುಖ್ಯೋಪಾದ್ಯಾಯ ಮಂಜುನಾಥ ಕಾಟೇನಹಳ್ಳಿ ಅವರನ್ನು ಬಂಧಿಸಿದ್ದು ತನಿಖೆ ಮುಂದುವರೆದಿದೆ.