ಲೋಕಸಭಾ ಚುನಾವಣೆ: ಕಾಂಗ್ರೆಸ್ನ 15 ಮಂದಿ ಸಂಭಾವ್ಯರ ಪಟ್ಟಿ ಸಿದ್ಧ

Views: 102
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ 15 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದ್ದು, ಸರ್ವೇ ಕಾರ್ಯ ಮುಗಿಯುತ್ತಿದ್ದಂತೆ ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿ ಅಂತಿಮ ಘೋಷಣೆ ಮಾಡಲಿದೆ. ಈ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಲವು ಸಚಿವರ ಹೆಸರುಗಳೂ ಇರುವುದು ವಿಶೇಷವಾಗಿದೆ
ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ಈ ಮಾಸಾಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಕೂಡಲೆ ಪ್ರಕಟವಾಗುವ ನಿರೀಕ್ಷೆಯಿದೆ.
ಇದರಲ್ಲಿ ರಾಜ್ಯದ 15 ಕ್ಷೇತ್ರಗಳಿಗೆ ಉಮೇದುವಾರರ ಪಟ್ಟಿ ಸಿದ್ಧವಾಗಿದೆ. ಈ ಅಭ್ಯರ್ಥಿಗಳ ಬಗ್ಗೆ ಕ್ಷೇತ್ರವಾರು ಪಕ್ಷದ ವತಿಯಿಂದ ಸರ್ವೇ ನಡೆಯುತ್ತಿದ್ದು, ಸಮೀಕ್ಷೆಯಲ್ಲಿ ಪಾಸಾದರೆ ಈ ಅಭ್ಯರ್ಥಿಗಳೇ ಉಮೇದುದಾರರಾಗಲಿದ್ದಾರೆ
ಚಾಮರಾಜನಗರ ಕ್ಷೇತ್ರದಲ್ಲಿ ಡಾ ಎಚ್ ಸಿ ಮಹದೇವಪ್ಪ, ಬಳ್ಳಾರಿಯಲ್ಲಿ ಬಿ ನಾಗೇಂದ್ರ, ಚಿತ್ರದುರ್ಗದಲ್ಲಿ ಬಿ ಎನ್ ಚಂದ್ರಪ್ಪ, ತುಮಕೂರಿನಲ್ಲಿ ಮುದ್ದಹನುಮೇಗೌಡ, ಹಾಸನದಲ್ಲಿ ಶ್ರೇಯಸ್ ಪಟೇಲ್, ಉತ್ತರ ಕನ್ನಡದಲ್ಲಿ ಅಂಜಲಿ ನಿಂಬಾಳ್ಕರ್, ದಕ್ಷಿಣ ಕನ್ನಡ ವಿನಯ್ ಕುಮಾರ್ ಸೊರಕೆ ಅವರನ್ನು ಸಂಭಾವ್ಯ ಅಭ್ಯರ್ಥಿಗಳಾಗಿ ಗುರುತಿಸಿ ಸರ್ವೇ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ಉಡುಪಿ -ಚಿಕ್ಕಮಗಳೂರಿನಿಂದ ಕೆ ಜಯಪ್ರಕಾಶ್ ಹೆಗ್ಡೆ, ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯ ಮತ್ತು ಕೋಲಾರದಿಂದ ಸಚಿವ ಕೆ ಎಚ್ ಮುನಿಯಪ್ಪ ಅವರನ್ನು ಕಣಕ್ಕಿಳಿಸಲು ಬಯಸಿ ಈ ಅಭ್ಯರ್ಥಿಕೆಗಳ ಬಗ್ಗೆ ಸರ್ವೇ ವರದಿಯನ್ನು ಎದುರು ನೋಡಲಾಗುತ್ತಿದೆ.
ರಾಯಚೂರಿನಿಂದ ನಿವೃತ್ತ ಐಎಎಸ್ ಅಧಿಕಾರಿ ಜಿ ಕುಮಾರ್ ನಾಯಕ್ ಅಥವಾ ಸತೀಶ್ ಜಾರಕಿಹೊಳಿ ಸಂಬಂಧಿ ರವಿ ನಾಯಕ್ ಈ ಇಬ್ಬರಲ್ಲಿ ಯಾರು ಅಭ್ಯರ್ಥಿಯಾಗುವುದು ಸೂಕ್ತ ಎಂಬ ಬಗ್ಗೆ ಸರ್ವೇ ನಡೆಸಲಾಗುತ್ತಿದೆ. ರಮೇಶ್ ಕತ್ತಿ ಅವರನ್ನು ಪಕ್ಷಕ್ಕೆ ಕರೆತಂದು ಚಿಕ್ಕೋಡಿಯಿಂದ ಕಣಕ್ಕಿಳಿಸಿದರೆ ಫಲಿತಾಂಶ ಬಗ್ಗೆಯೂ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ.
ಬೆಳಗಾವಿಯಿಂದ ಕಣಕ್ಕಿಳಿಯುವಂತೆ ಪಕ್ಷ ನೀಡುವ ಆಫರ್ಗೆ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಪ್ರತಿಕ್ರಿಯೆಯನ್ನು ಕಾಯ್ದಿರಿಸಿದ್ದಾರೆ. ಬೆಂಗಳೂರು ಗ್ರಾಮಾಂತರದಿಂದ ಡಿ ಕೆ ಸುರೇಶ್ ಹಾಗೂ ಮೈಸೂರಿನಿಂದ ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಲು ಪ್ರಸ್ತಾಪಿಸಲಾಗಿದೆ.
ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಯ ಹೆಸರು
ಚಾಮರಾಜನಗರ ಡಾ ಎಚ್ ಸಿ ಮಹದೇವಪ್ಪ
ಬಳ್ಳಾರಿ ಬಿ ನಾಗೇಂದ್ರ
ಚಿತ್ರದುರ್ಗ ಬಿ ಎನ್ ಚಂದ್ರಪ್ಪ
ತುಮಕೂರು ಮುದ್ದಹನುಮೇಗೌಡ
ಹಾಸನ ಶ್ರೇಯಸ್ ಪಟೇಲ್
ಉತ್ತರ ಕನ್ನಡ ಅಂಜಲಿ
ದಕ್ಷಿಣ ಕನ್ನಡ ವಿನಯ್ ಕುಮಾರ್ ಸೊರಕೆ
ಉಡುಪಿ -ಚಿಕ್ಕಮಗಳೂರು ಕೆ ಜಯಪ್ರಕಾಶ್ ಹೆಗ್ಡೆ
ಚಿಕ್ಕಬಳ್ಳಾಪುರ ರಕ್ಷಾ ರಾಮಯ್ಯ
ಕೋಲಾರ ಕೆ ಎಚ್ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ ಡಿಕೆ ಸುರೇಶ್
ಮೈಸೂರು-ಕೊಡಗು ಲಕ್ಷ್ಮಣ್
ರಾಯಚೂರು ಜಿ ಕುಮಾರ್ ನಾಯಕ್ ಅಥವಾ ರವಿ ನಾಯಕ್
ಬೆಳಗಾವಿ ಸತೀಶ್ ಜಾರಕಿಹೊಳಿ
ಮಂಡ್ಯ ಸ್ಟಾರ್ ಬಿಲ್ಡರ್ ಚಂದ್ರು
ಮಂಡ್ಯಕ್ಕೆ ಸ್ಟಾರ್ ಬಿಲ್ಡರ್ ಚಂದ್ರು?
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಜಿಲ್ಲೆಯ ಪಕ್ಷದ ಎಲ್ಲ ಶಾಸಕರು, 2013ರ ಅಭ್ಯರ್ಥಿಗಳು ಹಾಗೂ ಡಿಸಿಸಿ ಅಧ್ಯಕ್ಷರು ಒಟ್ಟಾಗಿ ಉದ್ಯಮಿ ಸ್ಟಾರ್ ಚಂದ್ರು ಎಂಬ ಅಚ್ಚರಿಯ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿದ್ದಾರೆ. ‘ಸ್ಟಾರ್ ಬಿಲ್ಡರ್ ಚಂದ್ರು’ ಎಂದು ಕರೆಸಿಕೊಳ್ಳುವ ಮೂಲತಃ ನಾಗಮಂಗಲದವರಾದ ಇವರು, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡರ ಸಹೋದರ. ಜಿಲ್ಲೆಯ ಪಕ್ಷದ ನಾಯಕರು ಅಂತಿಮಗೊಳಿಸಿರುವ ಈ ಒಂದೇ ಹೆಸರನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಸಮ್ಮತಿಸಿದ್ದು, ಮಂಡ್ಯದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಭ್ಯರ್ಥಿಯಾದರೆ ಮಾತ್ರ ಬದಲಾವಣೆಯಾಗಲಿದ್ದು, ಇಲ್ಲವಾದರೆ ನೀವೇ ಅಭ್ಯರ್ಥಿ ಎಂದು ಚಂದ್ರುಗೆ ಪಕ್ಷದ ಕಡೆಯಿಂದ ಗ್ರೀನ್ ಸಿಗ್ನಲ್ ನೀಡಲಾಗಿದೆ.