ಮದುವೆ ಮನೆಯಲ್ಲಿ ತಂದೂರಿ ರೊಟ್ಟಿಗಾಗಿ ರಣರಂಗವಾದ ಮದುವೆ ಮನೆ;ಇಬ್ಬರ ಸಾವು

Views: 147
ಕನ್ನಡ ಕರಾವಳಿ ಸುದ್ದಿ:ಮದುವೆಯ ಸಮಾರಂಭದಲ್ಲಿ ಅನೇಕ ಕಾರಣಗಳಿಂದ ಜಗಳ ನಡೆದು ಮದುವೆ ಮನೆ ರಣರಂಗವಾದ ಪ್ರಕರಣಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಮದುವೆ ಸಮಾರಂಭದಲ್ಲಿ ನಡೆದ ಕ್ಷುಲಕ ಕಾರಣಕ್ಕೆ ಇಬ್ಬರು ಹದಿಹರೆಯದವರು ತಮ್ಮ ತಮ್ಮೊಳಗೆ ಕಿತ್ತಾಡಿಕೊಂಡು ಸಾವನ್ನಪ್ಪಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಅಮೇಥಿಯಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದ್ದು, ಹಳ್ಳಿಯೊಂದರಲ್ಲಿ ನಡೆದ ಮದುವೆಯಲ್ಲಿ ಇಬ್ಬರು ಅತಿಥಿಗಳಾದ ರವಿಕುಮಾರ್ ಅಲಿಯಾಸ್ ಕಲ್ಲು ಎಂಬ 18 ವರ್ಷದ ಯುವಕ ಮತ್ತು 17 ವರ್ಷದ ಆಶಿಶ್ ನಡುವೆ ತಂದೂರಿ ರೊಟ್ಟಿ ಯಾರು ಮೊದಲು ತೆಗೆದುಕೊಂಡಿದ್ದಾರೆ ಎಂಬ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದ್ದು, ಇಬ್ಬರೂ ಪರಸ್ಪರ ಕಬ್ಬಿಣದ ರಾಡ್ಗಳಿಂದ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಇಬ್ಬರಿಗೂ ತೀವ್ರ ಗಾಯಗಳಾಗಿವೆ. ಅಪ್ರಾಪ್ತ ಬಾಲಕ ಸ್ಥಳದಲ್ಲೇ ಮೃತಪಟ್ಟರೆ, ರವಿಯನ್ನು ಚಿಕಿತ್ಸೆಗಾಗಿ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಮೃತರ ಕುಟುಂಬದವರ ದೂರಿನ ಆಧಾರದ ಮೇಲೆ 13 ಜನರ ವಿರುದ್ಧ ಕೊಲೆ ಮತ್ತು ಗಲಭೆ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಶವಗಳನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗಿರಿಗಂಜ್ ವೃತ್ತದ ಮುಖ್ಯ ಅಧಿಕಾರಿ (ಸಿಒ) ಅಖಿಲೇಶ್ ವರ್ಮಾ ತಿಳಿಸಿದ್ದಾರೆ.