ಬಿಜೆಪಿ- ಜೆಡಿಎಸ್ ಮೈತ್ರಿ ಅಪವಿತ್ರ:ಸಿದ್ದರಾಮಯ್ಯ ಲೇವಡಿ

Views: 0
ಚತ್ರದುರ್ಗ,: ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಒಂದು ಅಪವಿತ್ರ ಮೈತ್ರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಬಬ್ಬೂರಿಗೆ ಕೃಷಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭಕ್ಕೆ ತೆರಳುವ ಮೊದಲು ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲಿನಿಂದಲೂ ನಾವು ಜಾತ್ಯತೀತರು ಎಂದು ಹೇಳುತ್ತ ಬಂದಿರುವ ಜೆಡಿಎಸ್ ರಾಜ್ಯದಲ್ಲಿ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ. ಇದರಿಂದ ಪಕ್ಷದ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ, ಕೋಮುವಾದಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂದರು
ಅಬಕಾರಿ ಸಚಿವರು ರಾಜ್ಯದಲ್ಲಿ1000 ಮದ್ಯದಂಗಡಿಗಳನ್ನು ತೆರೆಯುವ ಹೇಳಿಕೆ ಕುರಿತು ಪ್ರತಿಕ್ರೀಯೆ ನೀಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಈಗಿರುವ ಮದ್ಯದಂಗಡಿಗಳ ಹೊರತಾಗಿ ಹೊಸದಾಗಿ ಯಾವುದೇ ಮಧ್ಯದಂಗಡಿಗಳನ್ನು ತೆರೆಯುವುದಿಲ್ಲ ಎಂದರು
.ರಾಜ್ಯದ ಆರ್ಥಿಕ ಸ್ಥಿತಿಯನ್ನು ಆಳು ಮಾಡಿರುವುದು ಬಿಜೆಪಿ. ಅವರಿಗೆ ರಾಜ್ಯದ ಆರ್ಥಿಕತೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳಿಗೆ ಹಣ ಕೊರತೆ ಇಲ್ಲ. ಅದೇ ರೀತಿ ನಮ್ಮ ಪಕ್ಷ ನೀಡಿರುವ 5 ಗ್ಯಾರೆಂಟಿಗಳಿಗೂ ಹಣದ ಕೊರತೆ ಇಲ್ಲ. ಆದರೆ ನಮ್ಮ ಶಾಸಕರು ಹೆಚ್ವಿನ ಅನುದಾನ ಬೇಕು ಎಂದು ಕೇಳುತ್ತಿದ್ದಾರೆ ಅಷ್ಟೇ. ಅದನ್ನು ಕೂಡ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಶಿವಮೊಗ್ಗಕ್ಕೆ ಬಿಜೆಪಿಯವರು ಸತ್ಯ ಶೋಧನೆ ಮಾಡಲು ಹೋಗಿದ್ದಾರೆ. ಸತ್ಯ ಶೋಧನೆ ಏನು? ಯಾವುದರ ಬಗ್ಗೆ ಸತ್ಯ ಶೋಧನೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಮುಸ್ಲಿಂ ಸಮುದಾಯ ಮೆರವಣಿಗೆ ಮಾಡುವಾಗ ಯಾರೋ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಅದನ್ನು ಯಾರು ಎಸೆದಿದ್ದಾರೆ ಎಂಬುದನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚನೆ ನೀಡಿದ್ದು, ತಪ್ಪು ಮಾಡಿದವರು ಯಾವ ಜಾತಿಯವರೇ ಆಗಿರಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೆನೆ. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದರು.