ಸಾಂಸ್ಕೃತಿಕ

ಬಡಗುತಿಟ್ಟಿನ ಹೆಸರಾಂತ ಯಕ್ಷಗಾನ ಭಾಗವತ ಕೊಳಗಿ ಕೇಶವ ಹೆಗಡೆಗೆ ರಾಜ್ಯೋತ್ಸವ ಪ್ರಶಸ್ತಿ

Views: 78

ಕನ್ನಡ ಕರಾವಳಿ ಸುದ್ದಿ: ಬಡಗುತಿಟ್ಟಿನ ಹೆಸರಾಂತ ಯಕ್ಷಗಾನದ ಭಾಗವತ ಕೇಶವ ಹೆಗಡೆ ಕೊಳಗಿ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

ಸಿದ್ದಾಪುರ ತಾಲೂಕಿನ ಕೊಳಗಿಯ ಯಕ್ಷಗಾನ ಮನೆತನದಲ್ಲಿ 1964ರ ಮಾ. 8ರಂದು ಜನಿಸಿದ ಕೇಶವ ಹೆಗಡೆ ಅವರ ತಂದೆ ಪ್ರಸಿದ್ಧ ಯಕ್ಷಗಾನ ಕಲಾವಿದ ಅನಂತ ಹೆಗಡೆ, ತಾಯಿ ಅರುಂಧತಿ ಹೆಗಡೆ. ಇಬ್ಬರು ತಮ್ಮಂದಿರು, ಮೂವರು ತಂಗಿಯರು. ಪತ್ನಿ ಪ್ರೀತಾ, ಮಗಳು ಹರ್ಷಿತಾ.ಬಾಲ್ಯದಿಂದಲೇ ಯಕ್ಷಗಾನದ ಒಲವು ಬೆಳೆಸಿಕೊಂಡಿದ್ದ ಕೇಶವ ಹೆಗಡೆ ಸಿದ್ದಾಪುರದ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿಸಿದ ಆನಂತರದಲ್ಲಿ ಉಡುಪಿ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ಪ್ರಸಿದ್ಧ ಭಾಗವತರಾದ ನಾರ್ಣಪ್ಪ ಉಪ್ಪೂರು, ಕೆ.ಪಿ. ಹೆಗಡೆ ಅವರ ಶಿಷ್ಯತ್ವದಲ್ಲಿ ಭಾಗವತಿಕೆಯ ಅಭ್ಯಾಸ ಪಡೆದುಕೊಂಡರು.

ನಂತರದಲ್ಲಿ ಪ್ರಥಮವಾಗಿ ಹೊನ್ನಾವರ ತಾಲೂಕಿನ ಗುಂಡಬಾಳ ಮೇಳದಲ್ಲಿ ಭಾಗವತರಾಗಿ ವೃತ್ತಿಯನ್ನು ಆರಂಭಿಸಿದರು. ಮೂಲ್ಕಿ, ಅಮೃತೇಶ್ವರಿ, ಸಾಲಿಗ್ರಾಮ, ಕಮಲಶಿಲೆ, ಶಿರಸಿ, ಪಂಚಲಿಂಗ, ಬಚ್ಚಗಾರು, ಯಾಜಿ ಮಿತ್ರ ಮಂಡಳಿ, ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಕೊಂಡದಕುಳಿ ಮೇಳ ಮುಂತಾದ ಮೇಳಗಳಲ್ಲಿ ಪ್ರಮುಖ ಭಾಗವತರಾಗಿ ಕಾರ್ಯನಿರ್ವಹಿಸಿ ಪ್ರಸಿದ್ಧಿ ಪಡೆದರು.ಕೇಶವ ಹೆಗಡೆ ಅವರಿಗೆ ಸಂದ ಪ್ರಶಸ್ತಿಗಳು, ಪುರಸ್ಕಾರಗಳು ಅಸಂಖ್ಯ. ಮಹಾಬಲ ಹೆಗಡೆ ಪ್ರಶಸ್ತಿ, ನೆಬ್ಬೂರು ನಾರಾಯಣ ಪ್ರಶಸ್ತಿ, ಹೈದರಾಬಾದ್‌ನ ಕರ್ನಾಟಕ ಕರಾವಳಿ ಮೈತ್ರಿ ಸಂಘದ ಪ್ರಶಸ್ತಿ, ನಂತರ ಅದೇ ಸಂಘ ನೀಡಿದ ಗಾನವಾರಿಧಿ ಪ್ರಶಸ್ತಿ, ಹೈಕೋರ್ಟ್‌ ವಕೀಲರ ಸಂಘ ನೀಡಿದ ಕರಾವಳಿ ಕೋಗಿಲೆ ಪ್ರಶಸ್ತಿ, ನಮ್ಮನೆ ಪ್ರಶಸ್ತಿ, ಯಕ್ಷಕಲಾ ರಂಜಿನಿ ಪ್ರಶಸ್ತಿ ಮುಂತಾಗಿ ಅನೇಕ ಪ್ರಶಸ್ತಿಗಳು ಸಂದಿವೆ. ವೃತ್ತಿ ಮೇಳದ ಭಾಗವತಿಕೆಯಿಂದ ಹಿಂದೆ ಸರಿದ ನಂತರದಲ್ಲಿ ಹಲವಾರು ಹವ್ಯಾಸಿ ಮೇಳಗಳ ಜತೆ ಸಕ್ರಿಯರಾಗಿರುವ ಕೇಶವ ಹೆಗಡೆ ಅವರ ಸಿರಿಕಂಠ ಯಕ್ಷಗಾನ ಪ್ರಿಯರನ್ನು ಇಂದಿಗೂ ರಂಜಿಸುತ್ತಿದೆ.ತಮ್ಮ ಸುಶ್ರಾವ್ಯದ ಧ್ವನಿಯಿಂದ ಯಕ್ಷಗಾನದ ಹಳೆಯ ಮಟ್ಟುಗಳನ್ನು ಹಾಡಬಲ್ಲ ಕೇಶವ ಹೆಗಡೆ ನೆಬ್ಬೂರು ನಾರಾಯಣ ಭಾಗವತರಿಂದ ಪ್ರಶಂಸೆ ಪಡೆದವರು. ತಮ್ಮ ಆಲಾಪನೆಯ ಮಾಧುರ‍್ಯದಿಂದ ಯಕ್ಷಪ್ರಿಯರ ಮನಗೆದ್ದವರು. ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆಯವರಂಥ ದಿಗ್ಗಜರೂ ಸೇರಿದಂತೆ ಪ್ರಮುಖ ಪಾತ್ರಧಾರಿಗಳಿಗೆ ಪದ್ಯ ಹೇಳಿ ಅವರಿಂದ ಭೇಷ್ ಎನಿಸಿಕೊಂಡರು.

ಪ್ರಶಸ್ತಿ ದೊರಕುತ್ತಿರುವುದು ಸಹಜವಾಗಿಯೇ ಸಂತೋಷ ತಂದಿದೆ. ಕಳೆದ 40 ವರ್ಷಗಳ ಯಕ್ಷಗಾನದ ಸೇವೆ ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದಕ್ಕೆ ಸರ್ಕಾರಕ್ಕೆ ಅಭಾರಿಯಾಗಿದ್ದೇನೆ. ತಂದೆ, ತಾಯಿಗಳ ಪ್ರೋತ್ಸಾಹ, ಅಭಿಮಾನಿಗಳ ಪ್ರೀತಿಯಿಂದ ಈ ಪ್ರಶಸ್ತಿ ದೊರೆತಿದೆ ಎಂದು ಯಕ್ಷಗಾನ ಭಾಗವತರಾದ ಕೇಶವ ಹೆಗಡೆ ಕೊಳಗಿ ಹೇಳಿದ್ದಾರೆ.

Related Articles

Back to top button