ಇತರೆ

ತಂದೆ ಸಾವಿನ ಹಿನ್ನೆಲೆ ಭೂಗತ ಪಾತಕಿ ಬನ್ನಂಜೆ ರಾಜನಿಗೆ 15 ದಿನ ಪೆರೋಲ್ ಮಂಜೂರು

Views: 161

ಕನ್ನಡ ಕರಾವಳಿ ಸುದ್ದಿ: ಉದ್ಯಮಿಯೊಬ್ಬರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಭೂಗತ ಪಾತಕಿ ಬನ್ನಂಜೆ ರಾಜನಿಗೆ ತನ್ನ ತಂದೆ ಉಡುಪಿಯ ಸುಂದರ ಶೆಟ್ಟಿಗಾ‌ರ್ ನಿಧನರಾದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಮತ್ತು ಆ ನಂತರದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೈಕೋರ್ಟ್ ಷರತ್ತುಗಳನ್ನು ವಿಧಿಸಿ 15 ದಿನಗಳ ಪೆರೋಲ್ ಮಂಜೂರು ಮಾಡಿತು.

ಬನ್ನಂಜೆ ರಾಜನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಕೋರಿದ್ದ ಅವರ ತಂದೆ 86 ವರ್ಷದ ಬಾಪುತೋಟ ಮಲ್ಪೆಯ ಸುಂದರ ಶೆಟ್ಟಿಗಾ‌ರ್ ಅವರು ನಿಧನರಾದ ಹಿನ್ನೆಲೆಯಲ್ಲಿ ಅರ್ಜಿದಾರರ ಕೋರಿಕೆಯಂತೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಬನ್ನಂಜೆ ರಾಜ ಬಿಡುಗಡೆಯಾಗುವ ದಿನಕ್ಕೆ ಅನ್ವಯಿಸಿ ಕಠಿಣ ಷರತ್ತುಗಳನ್ನು ವಿಧಿಸಿ ಪೆರೋಲ್ ಮಂಜೂರು ಮಾಡಲಾಗಿದೆ. ನಾಲ್ವರು ಪೊಲೀಸರು ಮತ್ತು ವಾಹನ ಒಳಗೊಂಡ ಎಸ್ಕಾರ್ಟ್ ಕಲ್ಪಿಸಲಾಗಿದ್ದು, ಅದಕ್ಕೆ ತಗುಲುವ ವೆಚ್ಚವನ್ನು ಬನ್ನಂಜೆ ರಾಜನೇ ಪಾವತಿಸಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ. ವಿಚಾರಣೆ ವೇಳೆ ರಾಜ್ಯ ಸರಕಾರ ಪ್ರತಿನಿಧಿಸಿದ್ದ ವಕೀಲ ರಾಹುಲ್ ಕಾರ್ಯಪ್ಪ, ಕೋಕಾ ಮತ್ತು ಶಸ್ತ್ರಾಸ್ತ್ರ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣಗಳೂ ಸೇರಿ ಬನ್ನಂಜೆ ರಾಜನ ವಿರುದ್ಧ 23 ಪ್ರಕರಣಗಳು ಬಾಕಿ ಇವೆ. ಉದ್ಯಮಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿ ಅನುಭವಿಸುತ್ತಿದ್ದಾನೆ. ನಾಲ್ವರು ಎಸ್ಕಾರ್ಟ್ ಪೊಲೀಸ್ ಮತ್ತು ವಾಹನಕ್ಕೆ ವೆಚ್ಚ ಪಾವತಿಸಲು ಆದೇಶಿಸಬೇಕು ಎಂದು ಕೋರಿದರು.

ಎಸ್ಕಾರ್ಟ್‌ಗೆ ಹಣ ಪಾವತಿಸಬೇಕು

ಬನ್ನಂಜೆ ರಾಜ ಪರ ವಕೀಲರು, 24 ತಾಸಿಗೆ ಮೂವರು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸುತ್ತಾರೆ. ಇದು ನಮ್ಮ ಮಿತಿಗಿಂತ ಹೆಚ್ಚಿನ ವೆಚ್ಚವಾಗುತ್ತದೆ. ಇದಕ್ಕೆ 50 ಸಾವಿರ ಅಥವಾ ಒಂದು ಲಕ್ಷ ರು. ಪಾವತಿಸಲಾಗುವುದು. ಬನ್ನಂಜೆ ರಾಜ ಅವರು 15 ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು. ಇದಕ್ಕೆ ಪೀಠ, ಸರಕಾರದ ನಿಯಮದ ಪ್ರಕಾರ ಎಸ್ಕಾರ್ಟ್‌ಗೆ ಹಣ ಪಾವತಿಸಲೇಬೇಕು.

Related Articles

Back to top button