ರಾಜಕೀಯ

ಏನಿದು..?  ರಾಜ್ಯ ರಾಜಕಾರಣವನ್ನು ಬೆಚ್ಚಿ ಬೀಳಿಸುವ  ಬೃಹತ್‌ “ಹನಿಟ್ರ್ಯಾಪ್‌” 

Views: 141

ಕನ್ನಡ ಕರಾವಳಿ ಸುದ್ದಿ: ರಾಜ್ಯ ರಾಜಕಾರಣವನ್ನು ಬೆಚ್ಚಿ ಬೀಳಿಸುವ ಜನಪ್ರತಿನಿಧಿಗಳ ವಿರುದ್ಧದ ಬೃಹತ್‌ ಹನಿಟ್ರ್ಯಾಪ್‌ ಜಾಲದ ವಿಚಾರ ವಿಧಾನಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿದೆ. ‘ಈ ಜಾಲದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಎಲ್ಲಾ ಪಕ್ಷಗಳ 48 ನಾಯಕರು ಸಿಲುಕಿದ್ದು, ಅವರ ಪೆನ್‌ಡ್ರೈವ್‌ಗಳಿವೆ’ ಎಂಬ ಮಾಹಿತಿಯನ್ನು ಸಹಕಾರ ಸಚಿವ ಕೆ.ರಾಜಣ್ಣ ಸದನದಲ್ಲಿ ಬಹಿರಂಗಪಡಿಸಿದ್ದಾರೆ.

ಅಲ್ಲದೆ, ‘ನನ್ನ ವಿರುದ್ಧವೂ ಹನಿಟ್ರ್ಯಾಪ್‌ ಯತ್ನ ನಡೆದಿದ್ದು, ಈ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಆಗಲಿ’ ಎಂದು ಆಗ್ರಹಿಸಿದ್ದಾರೆ.

ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಸದನಕ್ಕೆ ಅಶ್ವಾಸನೆ ನೀಡಿದ್ದಾರೆ. ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಕೂಡ ಪ್ರತಿಕ್ರಿಯಿಸಿದ್ದು, ‘ಹನಿಟ್ರ್ಯಾಪ್ ಆರೋಪ ಮಾಡುವವರು ಆರೋಪ ಮಾಡುವ ಬದಲು ಪೊಲೀಸರಿಗೆ ದೂರು ನೀಡಲಿ’ ಎಂದು ಹೇಳಿದ್ದಾರೆ.

ಇದೇ ವೇಳೆ, ರಾಜಣ್ಣರ ಪುತ್ರ ಹಾಗೂ ವಿಧಾನಪರಿಷತ್‌ ಸದಸ್ಯ ರಾಜೇಂದ್ರ ಅವರು ತಮ್ಮ ಮೇಲೂ ಹನಿಟ್ರ್ಯಾಪ್‌ ಯತ್ನ ನಡೆದಿತ್ತು ಎಂದಿದ್ದು, ಇದರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‌ಗೂ ದೂರು ನೀಡುವುದಾಗಿ ಹೇಳಿದ್ದಾರೆ.

ಈ ನಡುವೆ, ಸಚಿವರ ಈ ಸ್ಫೋಟಕ ಹೇಳಿಕೆ ಸದನದಲ್ಲಿ ಗದ್ದಲವನ್ನುಂಟು ಮಾಡುವ ಜತೆಗೆ ಗಂಭೀರ ಚರ್ಚೆಗೆ ಕಾರಣವಾಯಿತು. ಬಿಜೆಪಿ ಸದಸ್ಯರಾದ ಬಸನಗೌಡ ಪಾಟೀಲ್ ಯತ್ನಾಳ್, ವಿ.ಸುನೀಲ್‌ ಕುಮಾರ್‌ ಸೇರಿ ಇತರೆ ಸದಸ್ಯರು, ‘ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳ ವಿರುದ್ಧ ಈ ರೀತಿ ನಡೆಯುವುದು ಅಪಾಯಕಾರಿ ಬೆಳವಣಿಗೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಸಚಿವರೊಬ್ಬರ ಮೇಲೆ ಹನಿಟ್ರಾಪ್‌ ಯತ್ನ ನಡೆದಿದೆ ಎಂಬ ಚರ್ಚೆ 2 ದಿನದ ಹಿಂದೆ ಆರಂಭವಾಗಿತ್ತು. ಆದರೆ ಹೆಸರು ಬಹಿರಂಗವಾಗಿರಲಿಲ್ಲ. ಈ ಬಗ್ಗೆ ಗುರುವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌, ‘ರಾಜ್ಯದಲ್ಲಿ ಸಹಕಾರ ಸಚಿವರ ವಿರುದ್ಧ ಹನಿಟ್ರ್ಯಾಪ್ ಆಗಿದೆ. ಇವತ್ತು ರಾಜಣ್ಣ ಮೇಲೆ ಆಗಿದ್ದು, ನಾಳೆ ಮತ್ತೊಬ್ಬರ ಮೇಲೆ ಆಗಬಹುದು. ಇದೊಂದು ಕೆಟ್ಟ ಸಂಸ್ಕೃತಿ. ಜನಪ್ರತಿನಿಧಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ’ ಎಂದರು. ಈ ಮೂಲಕ ಸದನದ ಹೊರಗೆ ನಡೆದಿದ್ದ ಚರ್ಚೆಯನ್ನು ಸದನದ ಒಳಗೆ ಸಚಿವರ ಹೆಸರು ಸಮೇತ ಪ್ರಸ್ತಾಪಿಸಿ ಭಾರಿ ಚರ್ಚೆಗೆ ನಾಂದಿ ಹಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಜಣ್ಣ, ‘ರಾಜ್ಯದಲ್ಲಿ ಸಿ.ಡಿ, ಪೆನ್ ಡ್ರೈವ್‌ಗಳ ಕಾರ್ಖಾನೆ ಇದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇದು ಗುರುತರ ಆರೋಪ. ತುಮಕೂರಿನ ಪ್ರಭಾವಿ ಸಚಿವರು ಹನಿಟ್ರ್ಯಾಪ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಜಿಲ್ಲೆಯ ಸಚಿವರಾಗಿ ಇರುವವರು ನಾನು (ರಾಜಣ್ಣ) ಮತ್ತು ಡಾ.ಜಿ.ಪರಮೇಶ್ವರ್ ಮಾತ್ರ’ ಎಂದರು

‘ಪೆನ್‌ಡ್ರೈವ್‌ನಲ್ಲಿ 48 ಜನಪ್ರತಿನಿಧಿಗಳು ಇದ್ದಾರೆ. ಇದರಲ್ಲಿ ಕಾಂಗ್ರೆಸ್‌ ಮಾತ್ರವಲ್ಲದೆ, ಎಲ್ಲಾ ಪಕ್ಷದವರೂ ಇದ್ದಾರೆ. ಅಲ್ಲದೆ, ಕೇವಲ ರಾಜ್ಯ ನಾಯಕರು ಮಾತ್ರವಲ್ಲದೆ, ರಾಷ್ಟ್ರದ ನಾಯಕರೂ ಇದ್ದಾರೆ. ನನ್ನ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಉತ್ತರ ನೀಡುವುದಿಲ್ಲ. ಗೃಹ ಸಚಿವರಿಗೆ ಲಿಖಿತ ದೂರು ನೀಡುತ್ತೇನೆ. ಇದನ್ನು ತನಿಖೆ ಮಾಡಬೇಕು. ನಿರ್ಮಾಪಕರು, ನಿರ್ದೇಶಕರು, ನಟರು ಯಾರು ಇದ್ದಾರೆಂಬುದು ಹೊರಗೆ ಬರಲಿ ಮತ್ತು ಜನರಿಗೆ ಗೊತ್ತಾಗಲಿ’ ಎಂದರು.

 

Related Articles

Back to top button