ನಿವೃತ್ತ ಸಹಾಯಕ ವಿದ್ಯಾಧಿಕಾರಿ ಕೊಕ್ಕರ್ಣೆ ರಾಜೀವ ಶೆಟ್ಟಿಗೆ ನುಡಿ ನಮನ
Views: 165
ಕನ್ನಡ ಕರಾವಳಿ ಸುದ್ದಿ: ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಅಧ್ಯಾಪನ ವೃತ್ತಿ ಮತ್ತು ಸಹಾಯಕ ವಿದ್ಯಾಧಿಕಾರಿ ಹುದ್ದೆಗೆ ಗೌರವ ತಂದಿರುವುದಲ್ಲದೇ ನಮ್ಮಂತ ವಿದ್ಯಾರ್ಥಿಗಳಿಗೆ ಪ್ರಾಮಾಣಿಕತೆ ಮೌಲ್ಯ ಮುಂತಾದ ಗುಣಗಳನ್ನು ಕಲಿಸಿಕೊಡುವುದರ ಜೊತೆಗೆ ಅನೇಕ ವಿದ್ಯಾರ್ಥಿಗಳ ಸ್ಮೃತಿ ಪಟಲದಲ್ಲಿ ಶಾಶ್ವತವಾಗಿ ನೆನಪಿಸಿಕೊಳ್ಳುವ ವ್ಯಕ್ತಿತ್ವ ಕೊಕ್ಕರ್ಣೆ ರಾಜೀವ ಮಾಸ್ಟರದ್ದು ಎಂದು ಅವರ ಶಿಷ್ಯ ಪುರಸಭೆ ಮಾಜಿ ಅಧ್ಯಕ್ಷರಾದ ಮೋಹನದಾಸ ಶೆಣೈಯವರು ರಾಜೀವ ಮಾಸ್ಟರ್ ನುಡಿನಮನ ಕಾರ್ಯಕ್ರಮದಲ್ಲಿ ತನ್ನ ಗುರುಗಳ ಬಗ್ಗೆ ಮಾತನಾಡಿದರು.
ರಾಜೀವ ಮಾಸ್ಟರ್ ಒಬ್ಬರು ಆದರ್ಶ ಶಿಕ್ಷಕರು, ಮಾರ್ಗದರ್ಶಕ ಅಧಿಕಾರಿ, ಸಾಮಾಜಿಕವಾಗಿ ಗೌರವಿಸುವ ದೊಡ್ಡ ವ್ಯಕ್ತಿ ಹಾಗೂ ಅಜಾತ ಶತ್ರು ಎಂದು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಉದಯ ಕುಮಾರ ಶೆಟ್ಟಿ ಕಾಳಾವರ ಮಾತನಾಡಿದರು.
ಅವರ ಕುಟುಂಬದ ಪರವಾಗಿ ಸಹೋದರ ಅಳಿಯ ಎಂ.ಜಿ.ಎಂ ಕಾಲೇಜಿನ ರಾಜ್ಯಶಾಸ್ತ್ರ ಮುಖ್ಯಸ್ಥರಾಗಿ ನಿವೃತ್ತರಾದ ಪ್ರೋ. ಸುರೇಂದ್ರನಾಥ ಶೆಟ್ಟಿ ಮಾತನಾಡಿ, ಕೊಕ್ಕರ್ಣೆ ಬಂಡ್ನಾಲೆಯಲ್ಲಿ ಹುಟ್ಟಿದ ನಮ್ಮ ಮಾವ ವ್ಯಕ್ತಿಯಲ್ಲಿ ಶಕ್ತಿ ಎಂಬ ಮಾತನಾಡಿದರು.
ಊರಿನ ಪರವಾಗಿ ಡಾ. ಭಾಸ್ಕರ ಶೆಟ್ಟಿ ಪ್ರಾಂಶುಪಾಲರು ಕಾಳಾವರ ಮಾತನಾಡಿ, ರಾಜೀವ ಮಾಸ್ಟರ್ ಎಂದರೆ ನಮ್ಮ ನಾಲ್ಕಾರು ಗ್ರಾಮದಲ್ಲಿ ನಡೆದಾಡುವ ದೇವರು ಎಂದು ಜನ ಭಾವಿಸಿದ್ದಾರೆ, ಅಂತಹ ವ್ಯಕ್ತಿ ನಮ್ಮೂರಿನಲ್ಲಿ ಇದ್ದದ್ದು ನಮ್ಮ ಭಾಗ್ಯ ಎಂದರು. ಶಿಕ್ಷಕರ ಪರವಾಗಿ ಜ್ಯೋತಿ ಶೆಟ್ಟಿ ಮಾತನಾಡಿ ನಮಗೆ ಅವರು ಅಧಿಕಾರಿಯಾಗಿರದೆ ಮಾರ್ಗದರ್ಶಕರಾಗಿದ್ದಾರೆ ಎಂದರು.
ಈ ನುಡಿನಮನ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸುಕುಮಾರ ಶೆಟ್ಟಿ ಹಾಗೂ ಅನೇಕ ಜನ ನಿವೃತ್ತ ಶಿಕ್ಷಕರು, ಅವರ ಅಭಿಮಾನಿಗಳು ಭಾಗವಹಿಸಿದ್ದರು. ಮಗಳು ಆಶಾ ಶೆಟ್ಟಿ, ಹಿರಿಯ ಮಗ ಕೆ.ಎಂ.ಎಫ್ ನ ನಿವೃತ್ತ ಉಪಪ್ರಬಂಧಕರಾದ ಡಾ ಅನಿಲ ಕುಮಾರ ಶೆಟ್ಟಿ, ಕಿರಿಯ ಮಗ ಸುನಿಲ ಕುಮಾರ ಶೆಟ್ಟಿ ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದರು.






