ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಮಾಗ೯ದರ್ಶಿ ಕಾರ್ಯಗಾರ
ಪದವಿ ಪೂರ್ವ ಶಿಕ್ಷಣ ಎನ್ನುವುದು ಬದುಕನ್ನು ನಿರ್ಧರಿಸುವ ಹಂತವಾಗಿದೆ. ವಿದ್ಯಾರ್ಥಿಗಳು ಉತ್ತಮ ಗುರಿಯನ್ನು ಹೊಂದಿದ್ದರೆ ಮಾತ್ರ ಸಾಧನೆಯ ಪಥವನ್ನು ತುಳಿಯಬಹುದು------ಶ್ರೀ ಕೆ. ಸುಭಾಶ್ವಂದ್ರ ಶೆಟ್ಟಿ, ಬಾಂಡ್ಯ ಎಜುಕೇಶನಲ್ ಟ್ರಸ್ಟ್
ಕನ್ನಡ ಕರಾವಳಿ ಸುದ್ದಿ: ವಕ್ವಾಡಿಯ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಅಂಗ ಸಂಸ್ಥೆಯಾದ ಗುರು ಕುಲ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಗುಣವಾಗಿ ವಿದ್ಯಾರ್ಥಿ ಮಾರ್ಗದರ್ಶಿ ಕಾರ್ಯಗಾರವನ್ನು ಜೂನ್.3ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಗಾರವನ್ನು ಮಂಗಳೂರಿನ ಕಾಲೇಜ್ ನೀಟ್ ಫೈಂಡರ್ ಡಾಟ್ ಕಾಂ ನ ವಿದ್ಯಾರ್ಥಿ ಕಾರ್ಯಕರ್ತ ಹಾಗೂ ವಿದ್ಯಾರ್ಥಿ ತರಬೇತುದಾರ ಶ್ರೀ ಮಿತೇಶ್ ಕುಮಾರ್ ಮೂಡುಕೊಣಾಜೆಯವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡುತ್ತಾ – “ವಿದ್ಯಾರ್ಥಿಗಳು ಸರಿಯಾದ ಪಥದಲ್ಲಿ ಹೆಜ್ಜೆ ಹಾಕಿದರೆ ಮಾತ್ರ ಯಶಸ್ಸು ಸಾಧ್ಯ. ನಮ್ಮ ಭವಿಷ್ಯವನ್ನು ರೂಪಿಸುವುದಕ್ಕೆ ಪೂರಕವಾದ ಸಕಾರಾತ್ಮಕ ಆಲೋಚನೆಗಳನ್ನು ರೂಪಿಸಿಕೊಂಡಾಗ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಶಕ್ತರಾಗುತ್ತೇವೆ. ಸತತ ಪರಿಶ್ರಮದ ಮೂಲಕ ಗೆಲುವಿನ ಮಟ್ಟವನ್ನು ನಾವು ತುಳಿಯಬೇಕು. ಜೀವನದಲ್ಲಿ ಪ್ರಾಮುಖ್ಯವಾದ ವಿಚಾರಗಳ ಬಗ್ಗೆ ಗಮನ ಹರಿಸಬೇಕೇ ವಿನಃ ವ್ಯಕ್ತಿತ್ವಕ್ಕೆ ಕುಂದನ್ನುoಟು ಮಾಡುವ ವಿಚಾರಗಳ ಬಗ್ಗೆ ನಾವು ಚಿತ್ತಾಕರ್ಷಕರಾಗ ಬಾರದೆಂದರು.”
ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯ ನಿರ್ವಾಹಕರಾದ ಶ್ರೀ ಕೆ. ಸುಭಾಶ್ವಂದ್ರ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ – ಪದವಿ ಪೂರ್ವ ಶಿಕ್ಷಣ ಎನ್ನುವುದು ಬದುಕನ್ನು ನಿರ್ಧರಿಸುವ ಹಂತವಾಗಿದೆ. ವಿದ್ಯಾರ್ಥಿಗಳು ಉತ್ತಮ ಗುರಿಯನ್ನು ಹೊಂದಿದ್ದರೆ ಮಾತ್ರ ಸಾಧನೆಯ ಪಥವನ್ನು ತುಳಿಯಬಹುದು. ವರ್ತಮಾನದ ಶೈಕ್ಷಣಿಕ ವಾತಾವರಣಕ್ಕೆ ಹೊಂದಿಕೊಂಡು ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸಬೇಕೆಂದರು. ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ರವರು ವಿದ್ಯಾರ್ಥಿಗಳನ್ನುದ್ದೇಶಿಸಿ – ಹೊಣೆಗಾರಿಕೆ ಯುಕ್ತ ಕಲಿಕೆಯು ವಿದ್ಯಾರ್ಥಿಗಳ ಮೂಲ ಮಂತ್ರವಾಗಿ, ಶ್ರದ್ಧೆ ಮತ್ತು ಶಿಸ್ತಿನಿಂದ ಕೂಡಿದ ಅಭ್ಯಾಸ ಕ್ರಮವು ಕಲಿಕಾ ಹಂತದ ಪ್ರಧಾನ ಅಂಶವಾಗಿ ವಿದ್ಯಾರ್ಥಿಗಳು ಕಲಿಕೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂದೀಪ್ ನಾಯ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಕಶಾಸ್ತ್ರ ಉಪನ್ಯಾಸಕ ಶ್ರೀ ರಾಘವೇಂದ್ರ ವಾರ್ಷಿಕ ಯೋಜನೆಯನ್ನು ವಾಚಿಸಿದರು. ಅರ್ಥಶಾಸ್ತ್ರಉಪನ್ಯಾಸಕಿ ಶ್ರೀಮತಿ ರಶ್ಮಿಕಾರವರು ವೇದಿಕೆಯ ಗಣ್ಯರನ್ನು ಪರಿಚಯಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಕು. ಸೌಜನ್ಯರವರು ಕಾರ್ಯಕ್ರಮ ನಿರ್ವಹಿಸಿದ್ದು, ಭೌತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ರಂಜನಿ ರವರು ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಪವಿತ್ರರವರು ವಂದಿಸಿದರು.