ಪತ್ನಿಯ ಕಿರುಕುಳಕ್ಕೆ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಪತಿ!
Views: 50
ಕನ್ನಡ ಕರಾವಳಿ ಸುದ್ದಿ: ಪತ್ನಿಯಿಂದ ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳ ಅನುಭವಿಸುತ್ತಿರುವ ಗುಜರಾತ್ನ ವ್ಯಕ್ತಿಯೊಬ್ಬರು, ತನ್ನ ದೂರಿಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಬೇಸತ್ತು ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯವರಿಗೆ ‘ದಯಾಮರಣ’ ಕೋರಿ ಪತ್ರ ಬರೆದಿರುವ ಆಘಾತಕಾರಿ ಘಟನೆ ಬೆಳಕಿಗೆ
ಗುಜರಾತ್ನ ಮೆಕ್ಸಾನಾ ಜಿಲ್ಲೆಯ ಕಲೋಲ್ ನಿವಾಸಿಯಾದ ಉದಯ್ ಸಿಂಗ್ ಜಾಲಾ (38) ಎಂಬುವರೇ ಈ ರೀತಿ ವಿಶಿಷ್ಟ ಮನವಿ ಮಾಡಿದ ದುರ್ದೈವಿ ಪತಿ.
ಕಳೆದ ಹಲವು ವರ್ಷಗಳಿಂದ ಪತ್ನಿ ಮತ್ತು ಆಕೆಯ ಕಡೆಯವರಿಂದ ತಮಗೆ ಜೀವ ಬೆದರಿಕೆ ಹಾಗೂ ತೀವ್ರ ಕಿರುಕುಳ ಎದುರಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಉದಯ್ ಸಿಂಗ್ ಜಾಲಾ ಮತ್ತು ಅವರ ಪತ್ನಿಯ ನಡುವೆ ಕೌಟುಂಬಿಕ ಕಲಹ ತಾರಕಕ್ಕೇರಿತ್ತು. ಪತ್ನಿ ತನ್ನ ತವರು ಮನೆಗೆ ತೆರಳಿ, ಅಲ್ಲಿಂದಲೇ ಪತಿಗೆ ಹಾಗೂ ಆತನ ವೃದ್ಧ ತಾಯಿಗೆ ನಿರಂತರವಾಗಿ ಬೆದರಿಕೆಗಳನ್ನು ಹಾಕಲಾರಂಭಿಸಿದ್ದಳು ಎನ್ನಲಾಗಿದೆ. ಕೇವಲ ಮಾನಸಿಕ ಕಿರುಕುಳ ಅಷ್ಟೇ ಅಲ್ಲದೆ, ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಪತ್ನಿಯ ಕಡೆಯವರು ಹೆದರಿಸುತ್ತಿದ್ದಾರೆ ಎಂದು ಉದಯ್ ಸಿಂಗ್ ಹೇಳಿದ್ದಾರೆ. ಇದರಿಂದಾಗಿ ತೀವ್ರ ಖಿನ್ನತೆಗೆ ಒಳಗಾಗಿರುವ ಅವರು ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ನನ್ನ ಜೀವಕ್ಕೆ ಅಪಾಯವಿದೆ ಎಂದು ಕಲೋಲ್ ನಗರ ಪೊಲೀಸ್ ಠಾಣೆಗೆ ತೆರಳಿ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿದ್ದೆ. ಆದರೆ ಪೊಲೀಸರು ನನ್ನ ದೂರನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಪುರುಷರ ದೂರುಗಳಿಗೆ ಕಾನೂನಿನಲ್ಲಿ ಸೂಕ್ತ ಮನ್ನಣೆ ಸಿಗುತ್ತಿಲ್ಲ ಎಂದು ಉದಯ್ ಸಿಂಗ್ ಜಾಲಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಕಾನೂನು ರಕ್ಷಣೆ ನೀಡದ ಈ ಪರಿಸ್ಥಿತಿಯಲ್ಲಿ ಬದುಕು ಸಾಗಿಸುವುದು ನರಕಯಾತನೆಯಾಗಿದೆ.
ಹಾಗಾಗಿ ಗೌರವಯುತವಾಗಿ ಸಾಯಲು ತಮಗೆ ‘ದಯಾಮರಣ’ಕ್ಕೆ ಅನುಮತಿ ನೀಡಬೇಕು ಎಂದು ಅವರು ರಾಷ್ಟ್ರಪತಿ ದೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗುಜರಾತ್ ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದಲ್ಲಿ ವಿನಂತಿಸಿದ್ದಾರೆ.





