ಮಗನ ಅಗಲಿಕೆಯಿಂದ ನೊಂದ ದಂಪತಿ ಆತ್ಮಹತ್ಯೆಗೆ ಶರಣು
Views: 77
ಕನ್ನಡ ಕರಾವಳಿ ಸುದ್ದಿ:ಪುತ್ರನ ಅಗಲಿಕೆಯಿಂದ ನೊಂದ ದಂಪತಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ಪೋಯಿನಾಚಿ ಪರಂಬ ನಿವಾಸಿಗಳಾದ ವೇಣುಗೋಪಾಲನ್ ನಾಯರ್ (55) ಮತ್ತು ಅವರ ಪತ್ನಿ ಸ್ಮಿತಾ (45) ಎಂದು ಗುರುತಿಸಲಾಗಿದೆ.
ಇವರ ಏಕೈಕ ಪುತ್ರ, ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎಂ. ಶಿವನಂದನ್ (19), ಕೇವಲ ಎರಡು ತಿಂಗಳ ಹಿಂದೆಯಷ್ಟೇ ರೈಲು ಢಿಕ್ಕಿಯಾಗಿ ಮೃತಪಟ್ಟಿದ್ದರು. ಮಗನ ಅಕಾಲಿಕ ಮರಣದ ನಂತರ ದಂಪತಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.
ಶುಕ್ರವಾರ ಬೆಳಿಗ್ಗೆ 9 ಗಂಟೆಯಾದರೂ ಮನೆಯ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ನೆರೆಹೊರೆಯವರು ಪರಿಶೀಲಿಸಿದಾಗ, ದಂಪತಿ ಕೊಠಡಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಮಂಗಳೂರಿನ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಓದುತ್ತಿದ್ದ ಶಿವನಂದನ್, ಕಳೆದ ಡಿಸೆಂಬರ್ 29 ರಂದು ಬೇಕಲ ಉತ್ಸವದ ವೇಳೆ ರೈಲು ಢಿಕ್ಕಿಯಾಗಿ ಸಾವನ್ನಪ್ಪಿದ್ದರು. ಅಂದಿನಿಂದ ವೇಣುಗೋಪಾಲನ್ ಮತ್ತು ಸ್ಮಿತಾ ದಂಪತಿ ತೀವ್ರ ಮನನೊಂದಿದ್ದರು.
ವೇಣುಗೋಪಾಲನ್ ನಾಯರ್ ಅವರು ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಬಳಿಕ ಪೋಯಿನಾಚಿಯಲ್ಲಿ ಟ್ರಾವೆಲ್ ಏಜೆನ್ಸಿಯೊಂದನ್ನು ನಡೆಸುತ್ತಿದ್ದರು.
ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.






