ಏರ್ಪೋರ್ಟ್ನ ಆಡಳಿತ ಕಚೇರಿಗೆ ಬಂದ ನಿಗೂಢ ಪಾರ್ಸೆಲ್..! ಬಾಕ್ಸ್ ಓಪನ್ ಮಾಡುತ್ತಿದ್ದಂತೆ ಭಯಾನಕ ದೃಶ್ಯ ಏನದು!
Views: 155
ಕನ್ನಡ ಕರಾವಳಿ ಸುದ್ದಿ: ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈಗ ವಿಚಿತ್ರ ಮತ್ತು ಭಯಾನಕ ಕಾರಣಕ್ಕೆ ಸುದ್ದಿಯಲ್ಲಿದೆ. ಅತ್ಯಾಧುನಿಕ ಭದ್ರತೆ ಹೊಂದಿರುವ ಈ ಆವರಣಕ್ಕೆ ಈಗ ‘ವಾಮಚಾರ’ದ ನೆರಳು ಸೋಕಿದೆ. ಏರ್ಪೋರ್ಟ್ನ ಆಡಳಿತ ಕಚೇರಿಗೆ ಬಂದ ಒಂದು ನಿಗೂಢ ಪಾರ್ಸೆಲ್ ಈಗ ಇಡೀ ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದೆ.
ಕೆಐಎಎಲ್ ಆಡಳಿತ ಕಚೇರಿಯ ವಿಳಾಸಕ್ಕೆ ಪೋಸ್ಟ್ ಆಫೀಸ್ ಮೂಲಕ ಪಾರ್ಸೆಲ್ ಒಂದು ಬಂದಿತ್ತು. ವಿಳಾಸ ಸರಿಯಾಗಿದ್ದರಿಂದ ಸಿಬ್ಬಂದಿ ಕುತೂಹಲದಿಂದ ಅದನ್ನು ತೆರೆದಿದ್ದಾರೆ. ಆದರೆ ಬಾಕ್ಸ್ ಓಪನ್ ಮಾಡುತ್ತಿದ್ದಂತೆ ಅಲ್ಲಿದ್ದ ಸಿಬ್ಬಂದಿ ಕಿರುಚಾಡುತ್ತಾ ಹಿಂದಕ್ಕೆ ಸರಿದಿದ್ದಾರೆ. ಆ ಬಾಕ್ಸ್ನೊಳಗೆ ಇದ್ದದ್ದು ಯಾವುದೋ ಬೆಲೆಬಾಳುವ ವಸ್ತುವಲ್ಲ, ಬದಲಾಗಿ ಭೀತಿ ಹುಟ್ಟಿಸುವ ಮಾಟ-ಮಂತ್ರದ ಸಾಮಗ್ರಿಗಳು!
ಒಬ್ಬ ಮಹಿಳೆ ಮತ್ತು ಪುರುಷನ ಬೆತ್ತಲೆ ಫೋಟೋಗಳು
ಅವುಗಳ ಸುತ್ತಲೂ ಹಾಕಲಾಗಿದ್ದ ಕೊಳೆತ ಟೊಮ್ಯಾಟೋ ಹಣ್ಣುಗಳು
ಪೋಟೋಗಳ ಮೇಲೆ ಹಾಕಲಾಗಿದ್ದ ಹೂವಿನ ಹಾರ
ಹಾರದ ಜೊತೆಗೆ ಕಟ್ಟಲಾಗಿದ್ದ ಕಬ್ಬಿಣದ ತುಂಡುಗಳು ಮತ್ತು ಟೂತ್ ಪೇಸ್ಟ್!
ಪೂಜೆ ಮಾಡಿ ಪಾರ್ಸೆಲ್ ಮಾಡಲಾಗಿದ್ದ ಈ ವಸ್ತುಗಳನ್ನು ಕಂಡ ಸಿಬ್ಬಂದಿ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಇದನ್ನು ಕಂಡ ನಂತರ ಕೆಲಸಕ್ಕೆ ಬರಲು ಸಿಬ್ಬಂದಿ ಭಯಪಡುತ್ತಿದ್ದಾರೆ. ಕರ್ತವ್ಯದ ಸ್ಥಳದಲ್ಲಿ ಇಂತಹ ಅನಿಷ್ಟ ಶಕ್ತಿಗಳ ಪ್ರವೇಶವಾಗಿದೆ ಎಂಬ ಆತಂಕ ಅವರನ್ನು ಕಾಡುತ್ತಿದೆ. ಆ ಪಾರ್ಸೆಲ್ ಯಾರನ್ನು ಗುರಿಯಾಗಿಸಿಕೊಂಡು ಕಳುಹಿಸಲಾಗಿತ್ತು? ಅದರ ಹಿಂದಿನ ಉದ್ದೇಶವೇನು? ಎಂಬ ಪ್ರಶ್ನೆ ಎಲ್ಲರನ್ನೂ ನಡುಗಿಸುತ್ತಿದೆ.
ತಮ್ಮ ಸಿಬ್ಬಂದಿಯ ಮಾನಸಿಕ ಸ್ಥಿತಿ ಹದಗೆಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕೆಐಎಎಲ್ ಆಡಳಿತ ಮಂಡಳಿ, ತಕ್ಷಣವೇ ಪೊಲೀಸರಿಗೆ ದೂರು ನೀಡಿದೆ. ವಾಮಚಾರದ ಮೂಲಕ ಭಯೋತ್ಪಾದನೆ ಸೃಷ್ಟಿಸಲು ಯತ್ನಿಸಿದ ಕಿರಾತಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಈಗಾಗಲೇ ಈ ಸಂಬಂಧ ಎಫ್ಐಆರ್ (FIR) ದಾಖಲಾಗಿದ್ದು, ಪೊಲೀಸರು ಪಾರ್ಸೆಲ್ ಬಂದ ಮೂಲದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದ ತಾಣವಾದ ಏರ್ಪೋರ್ಟ್ನಲ್ಲಿ ಇಂತಹ ಮೌಢ್ಯದ ಪರಮಾವಧಿ ನಡೆದಿದ್ದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.






