ಬಾರಕೂರಿನ ನಾಗಮಂಡಲಕ್ಕೆ ಹೋಗಿದ್ದ ದಂಪತಿ ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳ್ಳತನ
Views: 115
ಕನ್ನಡ ಕರಾವಳಿ ಸುದ್ದಿ: ಬಾರಕೂರಿನಲ್ಲಿ ನಡೆಯುತ್ತಿದ್ದ ನಾಗಮಂಡಲಕ್ಕೆ ಹೋಗಿದ್ದ ದಂಪತಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಘಟನೆ ನಡೆದಿದೆ.
ಬಾರಕೂರು ನಿವಾಸಿ ಮಂಜುನಾಥ ರಾವ್ (77) ಎಂಬುವವರ ಮನೆಯಲ್ಲಿ ಈ ಕಳವು ಸಂಭವಿಸಿದೆ.
ಮಾರ್ಚ್ 6 ರಂದು ರಾತ್ರಿ 7:45 ರಿಂದ 10:15 ರ ಅವಧಿಯಲ್ಲಿ ಮಂಜುನಾಥ ರಾವ್ ಮತ್ತು ಅವರ ಪತ್ನಿ ಮನೆಯನ್ನು ಲಾಕ್ ಮಾಡಿ ಬಾರಕೂರಿನಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ತೆರಳಿದ್ದರು.
ಈ ಸಂದರ್ಭವನ್ನು ಬಳಸಿಕೊಂಡ ದುಷ್ಕರ್ಮಿಗಳು ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ.
ಬೆಡ್ರೂಮ್ನಲ್ಲಿದ್ದ ಗೋಡ್ರೇಜ್ ಬೀಗವನ್ನು ಒಡೆದ ಕಳ್ಳರು ಅದರಲ್ಲಿದ್ದ ಚಿನ್ನದ ಮುತ್ತಿನ ಸರ ಮತ್ತು ಪೆಂಡೆಂಟ್ (47 ಗ್ರಾಂ), ಎರಡು ಚಿನ್ನದ ಮುತ್ತಿನ ಬಳೆಗಳು (32 ಗ್ರಾಂ), ಚಿನ್ನದ ಬೆಂಡೋಲೆ, ಉಂಗುರ ಹಾಗೂ ಬೆಳ್ಳಿಯ ಹರಿವಾಣ ಸೇರಿದಂತೆ ಒಟ್ಟು ಸುಮಾರು 14,18,000 ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ಇದರೊಂದಿಗೆ ಮನೆಯಲ್ಲಿದ್ದ 49,000 ರೂಪಾಯಿ ನಗದು ಕೂಡ ಕಳುವಾಗಿದೆ. ಕಳವಾದ ಒಟ್ಟು ಸೊತ್ತಿನ ಮೌಲ್ಯ ಸುಮಾರು 14,67,000 ರೂಪಾಯಿ ಎಂದು ಅಂದಾಜಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದೆ.






