ಅಣ್ಣನ ಬುದ್ಧಿವಾದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿನಿ
Views: 195
ಕನ್ನಡ ಕರಾವಳಿ ಸುದ್ದಿ: ಚೆನ್ನಾಗಿ ಓದು ಎಂದು ಅಣ್ಣ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.
ಚಂದ್ರಿಕಾ (21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಬಾಗಲಕೋಟೆಯ ಶಿರೂರು ಗ್ರಾಮದ ಚಂದ್ರಿಕಾ ಗದಗ ನಗರದಲ್ಲಿ ಗೆಳತಿಯರೊಂದಿಗೆ ಬಾಡಿಗೆ ಮನೆಯಲ್ಲಿದ್ದುಕೊಂಡು ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಸ್ನೇಹಿತೆಯರೊಂದಿಗೆ ಟ್ರಿಪ್ ಹೋಗಿದ್ದ ವಿಚಾರ ಮನೆಯಲ್ಲಿ ಗೊತ್ತಾಗಿದೆ. ವಿಷಯ ತಿಳಿದ ಅಣ್ಣ, ತಂಗಿಗೆ ಟೂರು, ಟ್ರಿಪ್ ಎಂದು ಅಲೆದಾಡದೇ ಇನ್ನಾರು ತಿಂಗಳು ಚೆನ್ನಾಗಿ ಓದಿ ಇಂಜಿನಿಯರಿಂಗ್ ಮುಗಿಸು. ಅನಗತ್ಯವಾಗಿ ಓಡಾಡಿಕೊಂಡು ಇರಬೇಡ ಎಂದು ಬೈದಿದ್ದಾನೆ.
ಅಣ್ಣನ ಬುದ್ಧಿವಾದ ಮಾತುಗಳಿಗೆ ತೀವ್ರವಾಗಿ ಮನನೊಂದ ಚಂದ್ರಿಕಾ, ಮಧ್ಯರಾತ್ರಿ ವೇಳೆ ಮನೆಯಿಂದ ಹೊರ ಹೋದವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗದಗದ ಭೀಷ್ಮ ಕೆರೆಯಲ್ಲಿ ಚಂದ್ರಿಕಾಳ ಶವ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಗದಗ ಶಹರ ಠಾಣೆ ಪೊಲಿಸರು ಭೇಟಿ ನೀಡಿ ಮೃತದೇಹ ಹೊರತೆಗೆದಿದ್ದಾರೆ.






