ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ‘ದೃಶ್ಯ’ ಸಿನಿಮಾ ಶೈಲಿಯಲ್ಲಿ ಇಂಜಿನಿಯರ್ ಕೊಲೆ
Views: 92
ಕನ್ನಡ ಕರಾವಳಿ ಸುದ್ದಿ : ʼದೃಶ್ಯʼ ಸಿನಿಮಾ ಮಾದರಿಯಲ್ಲಿ ಇಂಜಿನಿಯರ್ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಹೂತು ಹಾಕಿದ, ಕೊಲೆಯನ್ನು ಮುಚ್ಚಿ ಹಾಕಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹಣ ಡಬಲ್ ಮಾಡಿಕೊಳ್ಳುವ ಆಮಿಷಕ್ಕೆ ಇಂಜಿನಿಯರ್ ಬಲಿಯಾಗಿದ್ದಾರೆ. ಆನೇಕಲ್ ತಾಲೂಕಿನ ಅತ್ತಿಬೆಲೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಇಂಜಿನಿಯರ್ನನ್ನು ಕೊಂದು ಹಾಕಲಾಗಿದೆ. ಆಂಧ್ರಪ್ರದೇಶದ ಕುಪ್ಪಂ ಮೂಲದ ಶ್ರೀನಾಥ್ ಎನ್ನುವವರು ಕೊಲೆಯಾದವರು.
ಪ್ರಭಾಕರ್ ಎಂಬವನು ಕೊಲೆ ಮಾಡಿದ ಆರೋಪಿ. ಈತ ಮೃತದೇಹವನ್ನು ಮನೆಯಲ್ಲಿ ಹೂತು ಹಾಕಿದ್ದ. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಅತ್ತಿಬೆಲೆ ಪೊಲೀಸರು ಕೊಲೆ ರಹಸ್ಯವನ್ನು ಬಯಲು ಮಾಡಿದ್ದಾರೆ.
ಆಂಧ್ರಪ್ರದೇಶದ ಕುಪ್ಪಂ ಮೂಲದ ಶ್ರೀನಾಥ್ (30) ಅತ್ತಿಬೆಲೆಯ ನೆರಳೂರಿನಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ವಾಸವಿದ್ದರು. ಹಣ ಡಬಲ್ ಮಾಡಿಕೊಡುವುದಾಗಿ ಹಂತಕ ಪ್ರಭಾಕರ್, ಶ್ರೀನಾಥ್ಗೆ ಹೇಳಿದ್ದಾನೆ. ಈ ವೇಳೆ ಸೋದರ ಸಂಬಂಧಿತರಿಂದ ಶ್ರೀನಾಥ್ 40,00,000 ಪಡೆದುಕೊಂಡು ಪ್ರಭಾಕರ್ಗೆ ಹಣ ಕೊಟ್ಟಿದ್ದಾನೆ. ಇತ್ತೀಚಿಗೆ ಹಣ ವಾಪಸ್ ಕೊಡುವಂತೆ ಶ್ರೀನಾಥ್ ಪ್ರಭಾಕರ್ಗೆ ಕೇಳಿದ್ದಾನೆ.
ಆಗ ಶ್ರೀನಾಥ್ ಕೊಲೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಹಣ ಕೊಡುತ್ತೇನೆ ಬಾ ಅಂತ ಹೇಳಿ ಆಂಧ್ರದ ಕುಪ್ಪಂಗೆ ಶ್ರೀನಾಥ್ನನ್ನು ಕರೆಸಿಕೊಂಡಿದ್ದಾನೆ. ಕುಪ್ಪಂಗೆ ಹೋಗುವ ಮುನ್ನ ಶ್ರೀನಾಥ್ ಪತ್ನಿಗೆ ಹೇಳಿ ಹೋಗಿದ್ದರು. ಶ್ರೀನಾಥನ ತಲೆಗೆ ಪ್ರಭಾಕರ್ ಸುತ್ತಿಗೆಯಿಂದ ಹೊಡೆದು ಕೊಂದು, ಮನೆಯಲ್ಲಿ ಗುಂಡಿ ತೋಡಿ ಆತನ ಮೃತ ದೇಹವನ್ನು ಹೂತು ಹಾಕಿದ್ದಾನೆ. ಇದಕ್ಕೆ ಪ್ರಭಾಕರ್ ಸ್ನೇಹಿತ ಜಗದೀಶ್ ಸಾಥ್ ಕೊಟ್ಟಿದ್ದ.
ಶ್ರೀನಾಥ್ ಪತ್ನಿ ಪ್ರಭಾಕರನ ಬಗ್ಗೆ ಕೇಳಿದಾಗ, ಆತ ಬಂದಿಲ್ಲ ಎಂದು ನಾಟಕ ಮಾಡಿದ್ದಾನೆ. ಎರಡು ದಿನವಾದರೂ ಪತಿ ಮನೆಗೆ ಬಾರದಿದ್ದಾಗ ಪತ್ನಿ ಅತ್ತಿಬೆಲೆ ಠಾಣೆಗೆ ದೂರು ನೀಡಿದ್ದಾರೆ. ಅತ್ತಿಬೆಲೆ ಪೊಲೀಸರು ಪ್ರಭಾಕರ್ ಮತ್ತು ಜಗದೀಶರನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಕುಪ್ಪಂನ ಮನೆಯಲ್ಲಿ ಹೂತು ಹಾಕಿರುವ ಹೆಣವನ್ನು ಪೊಲೀಸರು ಹೊರತೆಗೆದು ಪೋಸ್ಟ್ಮಾರ್ಟಂಗೆ ಕಳಿಸಿದ್ದಾರೆ.






