ಶಂಕರನಾರಾಯಣದ ಮದರ್ ತೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರಸಪ್ರಶ್ನಾವಳಿ ಕಾರ್ಯಕ್ರಮ : ಜ್ಞಾನಪಥದಲ್ಲಿ ವಿದ್ಯಾರ್ಥಿಗಳ ಚಾತುರ್ಯ ಪ್ರದರ್ಶನ

Views: 165
ಕನ್ನಡ ಕರಾವಳಿ ಸುದ್ದಿ: ಶಿಕ್ಷಣವು ಜ್ಞಾನದ ಅವಿಭಾಜ್ಯ ಅಂಗ. ವಿದ್ಯಾರ್ಥಿಗಳಲ್ಲಿರುವ ಜ್ಞಾನವನ್ನು ಒರೆಗೆ ಹಚ್ಚುವ ಹಾಗೂ ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ವಿದ್ಯಾರ್ಥಿಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಮದರ್ ತೆರೆಸಾ ಮೆಮೋರಿಯಲ್ ಶಾಲೆ ಶಂಕರನಾರಾಯಣದಲ್ಲಿ 30-7-2025 ನೇ ಬುಧವಾರ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಜ್ಞಾನವರ್ಧಕ ಹಾಗೂ ಉತ್ಸಾಹ ಭರಿತ ರಸಪ್ರಶ್ನಾವಳಿ ಕಾರ್ಯಕ್ರಮವನ್ನು ಅದ್ಭುತವಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮವು ಕೇವಲ ಸ್ಪರ್ಧೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಬುದ್ಧಿಮತ್ತೆ, ಜ್ಞಾನದ ವ್ಯಾಪ್ತಿ ಮತ್ತು ವೇಗದ ಪ್ರತಿಕ್ರಿಯೆಯನ್ನು ಪರೀಕ್ಷಿಸುವ ಒಂದು ಸೃಜನಾತ್ಮಕ ವೇದಿಕೆಯಾಗಿ ಬೆಳೆಯಿತು. ಸ್ಪರ್ಧೆಗೆ ನಾಲ್ಕು ತಂಡಗಳನ್ನು ರಚಿಸಿ ಆ ತಂಡಗಳಿಗೆ ಅರಿಸ್ಟಾಟಲ್ ಸಾಕ್ರೆಟಿಸ್, ವೋಲ್ಟೇರ್, ಪ್ಲೇಟೋ ನಂತಹ ಪ್ರಮುಖ ತತ್ವಜ್ಞಾನಿಗಳ ಹೆಸರನ್ನು ನೀಡಲಾಯಿತು. ಆ ತಂಡದಲ್ಲಿ ರಸಪ್ರಶ್ನೆಯ ಪ್ರಾಥಮಿಕ ಸುತ್ತಿನಲ್ಲಿ ಆಯ್ಕೆಯಾದ ರಿಷಿ ಎಸ್ ಶೆಟ್ಟಿ, ಶಬರೀಶ್, ನಂದಶ್ರೀ, ಪ್ರೀತಮ್ ಜಿ ಒಂದೊಂದು ತಂಡವನ್ನು ಪ್ರತಿನಿಧಿಸಿದರು.
ರಸಪ್ರಶ್ನೆಯು ವಿವಿಧ ವಿಷಯಧಾರಿತ ಸುತ್ತುಗಳಾದ ಸಾಮಾನ್ಯ ಜ್ಞಾನದಿಂದ ಹಿಡಿದು ವಿಜ್ಞಾನ, ತಂತ್ರಜ್ಞಾನ,ರಾಜಕೀಯ ಭೂಗೋಳ, ಕರ್ನಾಟಕದ ಸಂಸ್ಕೃತಿ,ಸಾಹಿತ್ಯ,ಕ್ರೀಡೆ ಮತ್ತು ಕ್ಷಿಪ್ರ ಸುತ್ತುಗಳನ್ನು ಹೊಂದಿತ್ತು.
ಪ್ರತಿಯೊಂದು ಸುತ್ತು ವಿದ್ಯಾರ್ಥಿಗಳ ವಿಶೇಷ ಆಸಕ್ತಿ ಮತ್ತು ತಿಳುವಳಿಕೆಗೆ ಸ್ಪಷ್ಟ ಚಿತ್ರಣ ನೀಡಿದವು. ವಿಶೇಷವಾಗಿ ಕ್ಷಿಪ್ರಸತ್ತು ವಿದ್ಯಾರ್ಥಿಗಳ ತ್ವರಿತ ಚಿಂತನೆಯ ಸಾಮರ್ಥ್ಯವನ್ನು ಹೊರ ಹಾಕಿದರೆ ನಮ್ಮ ಕರ್ನಾಟಕದ ಸುತ್ತು ತವರಿನ ಸಂಸ್ಕೃತಿ ಇತಿಹಾಸ ಹಾಗೂ ನೆಲೆಗಳ ಜ್ಞಾನವನ್ನು ಪ್ರೋತ್ಸಾಹಿಸಿತು.
ಈ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ಸಮಾಜ ವಿಜ್ಞಾನ ಸಹ ಶಿಕ್ಷಕರಾದ ಶ್ರೀಯುತ ಉಮೇಶ್ ಪೂಜಾರಿ ಹಾಗೂ ಭಾಷಾ ಹಾಗೂ ಸಾಂಸ್ಕೃತಿಕ ನಿರ್ದೇಶಕಿಯಾದ ಕುಮಾರಿ ಅಲಿಟಾ ಡೇಸಾ ನಡೆಸಿಕೊಟ್ಟರು ಅವರ ನಿರ್ವಹಣಾ ಶೈಲಿ ಪ್ರಶ್ನೆಗಳ ಆಯ್ಕೆ ಹಾಗೂ ಸ್ಪರ್ಧೆಯ ಸಮಯ ಪಾಲನೆಯು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಯಿತು. ವಿದ್ಯಾರ್ಥಿಗಳು ಶ್ರದ್ದೆಯಿಂದ ಸ್ಪರ್ಧೆಯಲ್ಲಿ ತೊಡಗಿದ್ದು ಅವರ ಸಂವಹನ ಮತ್ತು ಚುರುಕುತನ ಸ್ಪಷ್ಟವಾಗಿ ಗೋಚರಿಸಿತು. ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಒಳ್ಳೆಯ ಒಳನೋಟವನ್ನು ಮೂಡಿಸಿದ್ದು ಕೊನೆಯಲ್ಲಿ ಪ್ರೀತಮ್ ಜಿ ಪ್ರಥಮ ಸ್ಥಾನ ರಿಷಿ ಎಸ್. ಶೆಟ್ಟಿ ದ್ವಿತೀಯ ಸ್ಥಾನ, ಶಬರೀಶ್ ತೃತೀಯ ಸ್ಥಾನವನ್ನು ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಸಂಸ್ಥಾಪಕ ಮಂಡಳಿಯವರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸ್ಪರ್ಧೆಗೆ ಇನ್ನಷ್ಟು ಪ್ರೋತ್ಸಾಹವನ್ನು ಹಾಗೂ ಉತ್ತೇಜನವನ್ನು ನೀಡಿತು. ಈ ರಸಪ್ರಶ್ನೆ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವಿಶ್ಲೇಷಣಾತ್ಮಕ ಚಿಂತನೆ ತ್ವರಿತ ನಿರ್ಧಾರ ಶಕ್ತಿ ಸಹಕಾರದ ಮನೋಭಾವ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವ ಉತ್ಸಾಹವನ್ನು ಬೆಳೆಸುವಂತಿತ್ತು. ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ಜಗತ್ತಿನ ವಿಷಯಗಳಲ್ಲಿ ಕುತೂಹಲ ಬೆಳೆಸುವತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಯಿತು.








