ಕರಾವಳಿ

ಕುಂದಾಪುರ: ಸಮುದ್ರ ಕಿನಾರೆಯಲ್ಲಿ ಪಾದರಕ್ಷೆಗಳು, ಪ್ಲಾಸ್ಟಿಕ್‌, ವೈದ್ಯಕೀಯ ತ್ಯಾಜ್ಯಗಳು ಎಲ್ಲೆಂದರಲ್ಲಿ ರಾಶಿ..! 

Views: 103

ಉಡುಪಿ: ಕರಾವಳಿ ಹಾಗೂ ಘಟ್ಟ ಪ್ರದೇಶಗಳಲ್ಲಿ ಬೀಳುತ್ತಿರುವ ಮಹಾ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ನದಿ, ಹಳ್ಳ ಹಾಗೂ ತೋಡುಗಳ ಸಂಗ್ರಹಿತ ತ್ಯಾಜ್ಯ ನೀರಿನೊಂದಿಗೆ ಹರಿದು ಸಮುದ್ರ ಸೇರುತ್ತಿದೆ. ಬಹುತೇಕ ಅಣೆಕಟ್ಟುಗಳು ಭರ್ತಿಯಾಗಿರುವುದರಿಂದ ಅಲ್ಲಿಂದ ಹೊರಬರುವ ನೀರು ಸಹ ಸಮುದ್ರ ಸೇರುತ್ತಿದೆ. ನೀರಿನೊಂದಿಗೆ ಸಮುದ್ರ ಸೇರುವ ಈ ತ್ಯಾಜ್ಯಗಳನ್ನು ಅಲೆಗಳು ಮತ್ತೆ ತೀರ ಪ್ರದೇಶಕ್ಕೆ ತರುವುದರಿಂದ ಸಮುದ್ರ ಕಿನಾರೆಯ ಪರಿಸರದಲ್ಲಿ ಪಾದರಕ್ಷೆಗಳು, ಪ್ಲಾಸ್ಟಿಕ್‌, ವೈದ್ಯಕೀಯ ತ್ಯಾಜ್ಯಗಳು ಎಲ್ಲೆಂದರಲ್ಲಿ ರಾಶಿ ಬಿದ್ದಿವೆ.

ನಿರಂತರವಾಗಿ ತ್ಯಾಜ್ಯ ಸಂಗ್ರಹಣೆಯ ಮೂಲಕ ಕಿನಾರೆಯ ಸ್ವಚ್ಛತೆ ಕಾಪಾಡಲು ಶ್ರಮಿಸುತ್ತಿರುವ ಕ್ಷೀನ್‌ ಕುಂದಾಪುರದ ಕಾರ್ಯಕರ್ತರು ಪಂಚ ಗಂಗಾವಳಿ ನದಿಗೆ ಹೊಂದಿಕೊಂಡಿರುವ ಕಡಲ ತೀರದಲ್ಲಿ ತ್ಯಾಜ್ಯದ ಹಠಾತ್‌ ಏರಿಕೆಯನ್ನು ಗಮನಿಸಿದ್ದಾರೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಹರಿಯುವ ವರಾಹಿ, ಸೌಪರ್ಣಿಕಾ, ಖೇಟಾ, ಕುಬ್ಜಾ ಚಕ್ರಾ ನದಿಗಳ ನೀರು, ಪಂಚ ಗಂಗಾವಳಿಯಲ್ಲಿ ಸಂಗಮವಾಗಿ ಅರಬ್ಬಿಯ ಕಡಲು ಸೇರುವುದರಿಂದ ಸಹಜವಾಗಿ ಎರಡು ತಾಲೂಕಿನ ನದಿ ತೀರ ಪ್ರದೇಶಗಳಿಗೆ ಬಂದು ಬೀಳುವ ತ್ಯಾಜ್ಯಗಳು ಒಟ್ಟಾಗಿ ಪಂಚ ಗಂಗಾವಳಿಯಲ್ಲಿ ಸೇರಿ ಅರಬ್ಬಿ ಕಡಲು ಪ್ರವೇಶಿಸುತ್ತದೆ.

ಸಮುದ್ರ ಕಿನಾರೆ ಸ್ವಚ್ಛವಾಗಿಡುವ ಮೂಲಕ ಸುಂದರ ಕುಂದಾಪುರದ ಕನಸುಗಳನ್ನು ಕಾಣುತ್ತಿರುವ ಕ್ಲೀನ್‌ ಕುಂದಾಪುರ ಸ್ವಯಂ ಸೇವಾ ಸಂಘಟನೆಯಲ್ಲಿ ಸೀಮಿತ ಕಾರ್ಯಕರ್ತರಿದ್ದರೂ ಉತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಸ್ಥಳೀಯ ಪುರಸಭೆ, ಅರಣ್ಯ ಇಲಾಖೆಯ ಸಹಕಾರ ಹಾಗೂ ಮಾರ್ಗದರ್ಶನವನ್ನು ಪಡೆದುಕೊಂಡು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತಂಡದವರ ಕಾರ್ಯಶೈಲಿಯನ್ನು ಮೆಚ್ಚಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನ್ಯಾಯಾಧೀಶರು ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ಅಭಿನಂದಿಸಿದ್ದಾರೆ.

ಸಮುದ್ರ ಕಿನಾರೆಗಳನ್ನು ಮಳೆಗಾಲದ ಸಮಯದಲ್ಲಿ ಸ್ವಚ್ಛಗೊಳಿಸುವುದು ಅತ್ಯಂತ ಗಮನಾರ್ಹ. ಮಳೆಗಾಲದ ಸಂದರ್ಭದಲ್ಲಿ ಒಟ್ಟಾಗುವ ತ್ಯಾಜ್ಯಗಳ ವಿಲೇವಾರಿ ಆಗದೇ ಇದ್ದಲ್ಲಿ, ಹಳೆಯ ತ್ಯಾಜ್ಯದ ಮೇಲೆ ಕೂತು, ಪದರಗಳಾಗಿ ಅವು ಕಿನಾರೆಯ ಮರಳಲ್ಲಿ ಹೂತು ಹೋಗುತ್ತವೆ. ಇದರಿಂದ ಸಮುದ್ರದ ಮತ್ಸ್ಯ ಸಂತತಿ, ಜಲಚರಗಳು, ಕಡಲಾಮೆ, ವಲಸೆ ಹಕ್ಕಿಗಳು ಹಾಗೂ ಇತರ ಜೀವಿಗಳ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂದು ಪರಿಸರ ಪ್ರೇಮಿಗಳು ಖೇಧ ವ್ಯಕ್ತಪಡಿಸಿದ್ದಾರೆ.

 

 

Related Articles

Back to top button