ರಾಜಕೀಯ

ವಿಧಾನ ಪರಿಷತ್ 2026ರವರೆಗೂ ಬಿಜೆಪಿ, ಜೆಡಿಎಸ್ ಪ್ರಾಬಲ್ಯ, ಮಸೂದೆಗಳ ಅಂಗೀಕಾರಕ್ಕೆ ಆಡಳಿತಾರೂಢ ಕಾಂಗ್ರೆಸ್ ಸಂಖ್ಯಾಬಲದ ಕೊರತೆ! 

Views: 57

ಬೆಂಗಳೂರು: ಕರ್ನಾಟಕದ ಮೇಲ್ಮನೆ ವಿಧಾನ ಪರಿಷತ್ ಶಿಕ್ಷಕರ ಹಾಗೂ ಪದವೀಧರರ 6 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಎನ್ ಡಿಎ ಒಕ್ಕೂಟ ತಲಾ 3 ಸ್ಥಾನಗಳನ್ನು ಗೆದ್ದಿವೆ. ಸದ್ಯ ಕಾಂಗ್ರೆಸ್ ಪಕ್ಷ ಮೇಲ್ಮನೆಯಲ್ಲಿ ಮೇಲುಗೈ ಸಾಧಿಸಿದ್ದರೂ ಕೂಡ ಬಿಜೆಪಿ-ಜೆಡಿಎಸ್ ದೋಸ್ತಿಗಳು ಬಹುಮತ ಹೊಂದಿದ್ದಾರೆ.‌ಮಹತ್ವದ ಮಸೂದೆ ಮಂಡನೆಗೆ ಬಹುಮತದ ಕೊರತೆಯಿಂದ ಕಾಂಗ್ರೆಸ್ ಗೆ ತಲೆನೋವು ತಂದಿದೆ.

ಈ ಹಿಂದೆ ವಿಧಾನಸಭೆಯಿಂದ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 7, ಬಿಜೆಪಿ 3 ಹಾಗೂ ಜೆಡಿಎಸ್ 1 ಸ್ಥಾನ ಗಳಿಸಿದೆ. ಈ ಗೆಲುವುಗಳ ಮೂಲಕ 75ರ ಸಂಖ್ಯಾಬಲದ ಮೇಲ್ಮನೆಯಲ್ಲಿ ಕಾಂಗ್ರೆಸ್ ಬಲ 34ಕ್ಕೇರಿದೆ. ಬಿಜೆಪಿ 30 ಸ್ಥಾನ ಹಾಗೂ ಜೆಡಿಎಸ್ ಸಂಖ್ಯಾಬಲ 8ಕ್ಕೆ ಏರಿಕೆ ಕಂಡಿದೆ.‌

ಚುನಾವಣೆಯ ಬಳಿಕ ಕಾಂಗ್ರೆಸ್ ಸದಸ್ಯರ ಸಂಖ್ಯಾಬಲ 34ಕ್ಕೇರಿದರೆ, ಬಿಜೆಪಿ ಸಂಖ್ಯಾಬಲ 30ಕ್ಕೆ ಇಳಿಕೆ ಕಂಡಿದೆ. ಆದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಒಟ್ಟು 38 ಸದಸ್ಯ ಬಲದೊಂದಿಗೆ ಬಹುಮತ ಹೊಂದಿವೆ. ಹೀಗಾಗಿ,ಬಿಜೆಪಿ-ಜೆಡಿಎಸ್  ತಮ್ಮ ಪಾರುಪತ್ಯ ಮುಂದುವರೆಸಿದ್ದಾರೆ. ಹೀಗಾಗಿ, ಮೇಲ್ಮನೆಯಲ್ಲಿನ ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಆಡಳಿತಾರೂಢ ಕಾಂಗ್ರೆಸ್ ಸಂಖ್ಯಾಬಲದ ಕೊರತೆ ಎದುರಾಗಲಿದೆ.

ವಿಧಾನ ಪರಿಷತ್ತಿನಲ್ಲಿ  ಬಹುಮತ ಪಡೆಯಲು ಕಾಂಗ್ರೆಸ್ 2026ರವರೆಗೆ ಕಾಯಲೇಬೇಕು. ಬಿಜೆಪಿ-ಜೆಡಿಎಸ್ ದೋಸ್ತಿ ಪಕ್ಷಗಳೇ 2026ರ ಜುಲೈ ವರೆಗೆ ಮೇಲ್ಮನೆಯಲ್ಲಿ ಹೆಚ್ಚಿನ ಸಂಖ್ಯಾಬಲ ಹೊಂದಿರಲಿವೆ. ಇದು ಆಡಳಿತಾರೂಢ ಕಾಂಗ್ರೆಸ್ ಗೆ ದೊಡ್ಡ ತಲೆನೋವಿನ ವಿಚಾರ.

ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ವಿಧಾನಸಭೆಯಿಂದ ಪರಿಷತ್ ಗೆ ಆಯ್ಕೆಯಲ್ಲಿನ 1 ಸ್ಥಾನ ತೆರವಾಗಿದೆ. ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದಲ್ಲಿ ಆ ಸ್ಥಾನ ಕಾಂಗ್ರೆಸ್ ಪಾಲಾಗಲಿದೆ. ಈ ಸ್ಥಾನಕ್ಕೆ ಈಗಾಗಲೇ ಕಾಂಗ್ರೆಸ್ ಬಸನಗೌಡ ಬಾದರ್ಲಿ ಅವರನ್ನು ಆಯ್ಕೆ ಮಾಡಿದೆ. ಆ ಗೆಲುವಿನ ಬಳಿಕ ಕಾಂಗ್ರೆಸ್ ಸಂಖ್ಯಾಬಲ 35ಕ್ಕೆ ಏರಿಕೆಯಾಗಲಿದೆ. ಮೇಲ್ಮನೆಯಲ್ಲಿ ಲಖನ್ ಜಾರಕಿಹೊಳಿ ಪಕ್ಷೇತರ ಸದಸ್ಯರಾಗಿದ್ದರೆ, ಸಭಾಪತಿ ಬಸವರಾಜ್ ಹೊರಟ್ಟಿ 1 ಸ್ಥಾನ ಹೊಂದಿದ್ದಾರೆ.

ಸಂಸದರಾಗಿರುವ ಕೋಟ ಶ್ರೀನಿವಾಸ್ ಪೂಜಾರಿ ರಾಜೀನಾಮೆಯಿಂದ ಮೇಲ್ಮನೆಯಲ್ಲಿ ಮತ್ತೊಂದು ಸ್ಥಾನ ತೆರವಾಗಲಿದೆ. ಕೋಟ ಅವರು ದಕ್ಷಿಣ ಕನ್ನಡದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಜನವರಿ 2025ರಲ್ಲಿ ಜೆಡಿಎಸ್ ನಾಮನಿರ್ದೇಶಿತ ಕೆ.ಎ.ತಿಪ್ಪೇಸ್ವಾಮಿ ನಿವೃತ್ತಿ ಬಳಿಕ ಮತ್ತೊಂದು ಸ್ಥಾನ ಕಾಂಗ್ರೆಸ್ ಪಾಲಾಗಲಿದೆ. ಒಂದು ವೇಳೆ ಕಾಂಗ್ರೆಸ್ ಕೋಟ ಶ್ರೀನಿವಾಸ್ ಪೂಜಾರಿಯಿಂದ ತೆರವಾದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದರೆ, ಕೈ ಪಕ್ಷದ ಸಂಖ್ಯಾಬಲ 37ಕ್ಕೆ ಏರಲಿದೆ.‌

ಆದರೆ, ಇದರ ಬಳಿಕವೂ ಬಿಜೆಪಿ-ಜೆಡಿಎಸ್ ದೋಸ್ತಿಗಳು ಮೇಲ್ಮನೆಯಲ್ಲಿ ತಮ್ಮ ಮೇಲುಗೈ ಮುಂದುವರೆಸಲಿದೆ.‌ ಜುಲೈ 2026ರವರೆಗೆ ಆಡಳಿತಾರೂಢ ಕಾಂಗ್ರೆಸ್ ಮೇಲ್ಮನೆಯಲ್ಲಿ ಬಹುಮತ ಪಡೆಯುವುದಿಲ್ಲ. ಜೂನ್ 30, 2026ಕ್ಕೆ ವಿಧಾನಭೆಯಿಂದ ಪರಿಷತ್ ಗೆ ಆಯ್ಕೆಯಾಗಿರುವ 7 ಸದಸ್ಯರ ಕಾಲಾವಧಿ ಮುಕ್ತಾಯವಾಗಲಿದೆ. ಜುಲೈ 21, 2026ಕ್ಕೆ ಐದು ಮಂದಿ ನಾಮನಿರ್ದೇಶಿತ ಸದಸ್ಯರ ಅವಧಿ ಮುಗಿಯಲಿದೆ. ಹೀಗಾಗಿ, ಆಡಳಿತಾರೂಢ ಕಾಂಗ್ರೆಸ್ ಬಹುಮತ ಗಳಿಸಬೇಕಾದರೆ 2026ರ ಜುಲೈವರೆಗೆ ಕಾಯಲೇಬೇಕಾಗುತ್ತದೆ.

Related Articles

Back to top button
error: Content is protected !!